ಸ್ಪೀಕರ್ ಕ್ರಮ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ನಡೆಸುವ ಜನಾಕ್ರೋಶ ಯಾತ್ರೆ ಏ.9ರಂದು ಮಂಗಳೂರಿಗೆ: ಸತೀಶ್ ಕುಂಪಲ

ಸ್ಪೀಕರ್ ಕ್ರಮ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ನಡೆಸುವ ಜನಾಕ್ರೋಶ ಯಾತ್ರೆ ಏ.9ರಂದು ಮಂಗಳೂರಿಗೆ: ಸತೀಶ್ ಕುಂಪಲ


ಮಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ 18 ಶಾಸಕರನ್ನು ಅಸೆಂಬ್ಲಿಯಿಂದ ಅಮಾನತುಗೊಳಿಸಿದ ಸ್ಪೀಕರ್ ಕ್ರಮ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ನಡೆಸುವ ಜನಾಕ್ರೋಶ ಯಾತ್ರೆ ಏ.9ರಂದು ಮಂಗಳೂರಿಗೆ ಆಗಮಿಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಯಾತ್ರೆ ದ.ಕ.ಜಿಲ್ಲೆಗೆ ಆಗಮಿಸುವ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲೆಯಲ್ಲಿ 2ರಿಂದ 3 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಇದರ ಹೆಚ್ಚಿನ ರೂಪುರೇಷೆಯನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ, ವಿದ್ಯುತ್ ದರ ಏರಿಕೆ, ಹಾಲು ದರ  ಹೆಚ್ಚಳ ವಿರೋಧಿಸಿ ಈ ಯಾತ್ರೆ ನಡೆಯಲಿದೆ. ಇದೊಂದು ಶಾಪಗ್ರಸ್ಥ ಸರ್ಕಾರವಾಗಿದ್ದು, ಆರಂಭದಿಂದಲೂ ಜನತೆಯನ್ನು ಮರುಳು ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ 18 ಮಂದಿ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಅಸೆಂಬ್ಲಿ ಚರ್ಚೆಯಿಂದ ಕಾಂಗ್ರೆಸ್ ಪಲಾಯನವಾದ ಮಾಡಿದೆ. ವೈಕುಂಥ ಬಾಳಿಗಾ ಸ್ಪೀಕರ್  ಆಗಿದ್ದಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಶಾಸಕರು ಅಸೆಂಬ್ಲಿಯಲ್ಲಿ ಮಾತನಾಡದಂತೆ ಬಾಯಿಮುಚ್ಚಿಸುವ ಕೆಲಸ ಮಾಡಲಾಗಿದೆ. ಶಾಸಕರ ಅಮಾನತು ಕೂಡಲೇ ಹಿಂಪಡೆಯುವಂತೆ ಸ್ಪೀಕರ್‌ನ್ನು ಆಗ್ರಹಿಸಿಸುವುದಾಗಿ ಹೇಳಿದರು.

ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಏ.2ರಂದು ಬೆಂಗಳೂರಿನಲ್ಲಿ ನಡೆಯುವ ಅಹೋರಾತ್ರಿ ಧರಣಿಸತ್ಯಾಗ್ರಹದಲ್ಲಿ ದ.ಕ.ಜಿಲ್ಲೆಯ ಬಿಜೆಪಿ ಪ್ರತಿನಿಧಿಗಳೂ ಪಾಲ್ಗೊಳ್ಳಲಿ ದ್ದಾರೆ ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದರಂದ ಅವರ ಹೇಳಿಕೆಗೆ ಉತ್ತರಿಸುವುದಿಲ್ಲ. ಅವರ ಮಾತಿಗೆ ರಾಷ್ಟ್ರೀಯ ನಾಯಕರು  ಉತ್ತರ ನೀಡುತ್ತಾರೆ. ಬಿಜೆಪಿ ಸಂಘಟನಾತ್ಮಕವಾಗಿ ಗಟ್ಟಿಯಾಗಿದೆ. ಸದಸ್ಯತ್ವದಲ್ಲಿ ದ.ಕ.ಜಿಲ್ಲೆ ಎಲ್ಲರಿಗಿಂತ ಮೇಲ್ಪಂಕ್ತಿಯಲ್ಲಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು ರಮ್ಜಾನ್ ಕಿಟ್ ಪ್ರಕಟಿಸಿರುವುದು ಮುಸ್ಲಿಮರ ಓಲೈಕೆಗಾಗಿ ಅಲ್ಲ. ಬಿಜೆಪಿ ಅಲ್ಪಸಂಖ್ಯಾತ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದ್ದಾರೆ ಅಷ್ಟೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಸಂಜಯ ಪ್ರಭು, ನಂದನ್ ಮಲ್ಯ, ಡಾ.ಮಂಜುಳಾ ರಾವ್, ಜಗನ್ನಾಥ್, ಮಹೇಶ್ ಜೋಗಿ, ಅರುಣ್ ಶೇಣ್,  ಮನೋಹರ್ ಕದ್ರಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article