
ಭಗವದ್ಗೀತೆ ಶ್ಲೋಕ: ಜನನ್ ವಿಶ್ವ ದಾಖಲೆ
ಮಂಗಳೂರು: ಎಂಟನೇ ತರಗತಿ ಓದುತ್ತಿರುವ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಜನನ್ ಮಿತ್ತಡ್ಕ 84,246 ಸಂಖ್ಯೆಗಳಲ್ಲಿ ಭಗವದ್ಗೀತೆಯ 700 ಶ್ಲೋಕಗಳನ್ನು 1,400 ಸಾಲುಗಳಲ್ಲಿ ಬರೆದು 2024, ಡಿಸೆಂಬರ್ 5 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆ ಮಾಡಿದ್ದಾರೆ.
ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಜನನ್ ಅವರ ಸಾಧನೆಯ ಕುರಿತಂತೆ ವಿವರ ನೀಡಿದರು.
ಹರಿಯಾಣದ ಫರೀದಾಬಾದ್ನಲ್ಲಿರುವ ಐಬಿಆರ್ ಸಂಸ್ಥೆಯವರು ಈ ಸಂಖ್ಯಾ ಚಿತ್ರ ಗಮನಿಸಿ ಇದೊಂದು ವಿಶೇಷ ಸಾಧ್ಯತೆ ಎಂದು ಪರಿಗಣಿಸಿ ವಿಶ್ವದಾಖಲೆ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಕಳೆದ ಜೂನ್ ತಿಂಗಳಿನಿಂದ ಸ್ವರೂಪದಲ್ಲಿ ಅಧ್ಯಯನ ಮಾಡುತ್ತಿರುವ ಜನನ್ ಈಗಾಗಲೇ ಒಂದೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲಬಸ್ ಪೋರ್ಷನ್ ಮುಗಿಸಿಕೊಂಡು ಆರು ವಿಷಯಗಳ ಪೂರ್ಣ ಪಠ್ಯ ವಿಷಯಗಳನ್ನು ಚಿತ್ರದ ಸ್ವರೂಪ ಭಾಷೆಯ ಮೂಲಕ ತನ್ನ ಶರ್ಟ್, ಪ್ಯಾಂಟಿನಲ್ಲಿ ಬರೆದು ವಿಶ್ವದಾಖಲೆ ಮಾಡಲು ಸಿದ್ಧನಾಗಿದ್ದಾನೆ ಎಂದವರು ಹೇಳಿದರು.
ದೇಶದ 784 ಜಿಲ್ಲೆಗಳ ಹೆಸರುಗಳನ್ನು ಪೂರ್ಣ ಹೇಳಲು ಸಾಮರ್ಥ್ಯವಿರುವ ಜನನ್ ಮೂರು ರಬ್ಬರ್ ಬಾಲ್ಗಳನ್ನು ಜಗ್ಲಿಂಗ್ ಮಾಡುತ್ತಾ ನಿರರ್ಗಳವಾಗಿ ಹೇಳುವ ಅಭ್ಯಾಸ ಮಾಡುತ್ತಿದ್ದಾನೆ. ಸಂಗೀತ, ಚಿತ್ರಕಲೆ, ಬೀಟ್ ಬಾಕ್ಸ್, ಮಿಮಿಕ್ರಿ, ಸ್ವರೂಪ ಸಂಕೇತ ಭಾಷೆಗಳು, ತ್ರಯೋದಶ ಅವಧಾನ ಪ್ರದರ್ಶನ ಕಲೆಗಳಲ್ಲಿ ಸಾಧನೆಗಳನ್ನು ಮಾಡಿದ್ದಾನೆ ಎಂದು ಅವರು ಹೇಳಿದರು.
ಪ್ರಾಯ ಪೂರ್ತಿ ಆದ ಕೂಡಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಭವಿಷ್ಯದಲ್ಲಿ ಐಪಿಎಸ್ ಅ?ಕಾರಿಯಾಗುವುದು ನನ್ನ ಕನಸು ಎಂದು ಜನನ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಸಿದ್ದಾರೆ.
ಜನನ್ ತಂದೆ ಬೆಂಗಳೂರಿನಲ್ಲಿರುವ ಸಿವಿಲ್ ಇಂಜಿನಿಯರ್ ವಸಂತ ಮಿತ್ತಡ್ಕ ಮತ್ತು ತಾಯಿ ಭವಾನಿ ಗ್ರಂಥಪಾಲಕಿ.
ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಜನನ್ ಚಿತ್ರ ಕಲೆಯಲ್ಲಿ ಉತ್ತಮವಾಗಿ ಇದ್ದನು. ಅವನ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶದಿಮದ ಸ್ವರೂಪ ಅಧ್ಯಯನ ಕೇಂದ್ರಕ್ಕೆ ಸೇರಿಸಿದ್ದೇವೆ ಎಂದು ಭವಾನಿ ಹೇಳಿದರು.
ದೇಶದಾದ್ಯಂತ ಪರಿಚಯ...:
ಪ್ರತೀ ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಅನಾವರಣಗೊಳಿಸುವ ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣವನ್ನು ಮುಂದಿನ ವರ್ಷ ದೇಶದಾದ್ಯಂತ ಪರಿಚಯಿಸಲು ಸಿದ್ಧತೆ ನಡೆದಿದೆ ಎಂದು ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹೇಳಿದರು.
ವಿದ್ಯಾರ್ಥಿಗಳು ಇಲ್ಲದೆ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪರಿಸ್ಥಿತಿ ಸರ್ಕಾರದ ಮುಂದಿದೆ. ಈ ಸಮಸ್ಯೆಗೆ ನಮ್ಮಲ್ಲಿ ಪರಿಹಾರವಿದೆ ಎಂದು ಅವರು ಹೇಳಿದರು.
ಅಧ್ಯಯನ ಕೇಂದ್ರದ ಸಂಸ್ಕೃತ ಗುರು ಶಿವಲಿಂಗ ಉಪಸ್ಥಿತರಿದ್ದರು.