ಏ.5 ರಂದು ನಂದಿ ರಥಯಾತ್ರೆಯ ರಾಜ್ಯಮಟ್ಟದ ಬೃಹತ್ ಸಮಾರೋಪ ಸಮಾರಂಭ

ಏ.5 ರಂದು ನಂದಿ ರಥಯಾತ್ರೆಯ ರಾಜ್ಯಮಟ್ಟದ ಬೃಹತ್ ಸಮಾರೋಪ ಸಮಾರಂಭ


ಮಂಗಳೂರು: ಗೋಸೇವಾ ಗತಿವಿಧಿ ಕರ್ನಾಟಕ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಪುದು ಬಂಟ್ವಾಳ ಆಶ್ರಯದಲ್ಲಿ 95 ದಿನಗಳ ಕಾಲ ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಿದ ನಂದಿ ರಥಯಾತ್ರೆಯ ರಾಜ್ಯಮಟ್ಟದ ಬೃಹತ್ ಸಮಾರೋಪ ಸಮಾರಂಭ ನಂದಿ ರಥಯಾತ್ರೆ ಸ್ವಾಗತ ಸಮಿತಿ ಮಂಗಳೂರು ನೇತೃತ್ವದಲ್ಲಿ ಏ.5ರಂದು ಮಂಗಳೂರಿನಲ್ಲಿ ನಡೆಯಲಿದೆ.

ಏ.5ರಂದು ಮಧ್ಯಾಹ್ನ 3.30ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದವರೆಗೆ ನಂದಿ ರಥಯಾತ್ರೆಯ ಭವ್ಯ ಶೋಭಾಯಾತ್ರೆ ನಡೆಯಲಿರುವುದು. ಕರಾವಳಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಶೋಭಾಯಾತ್ರೆ ಉದ್ಘಾಟಿಸುವರು. ವಿಶೇಷ ಆಕರ್ಷಣೆಯಾಗಿ ಜಿಲ್ಲೆಯ 108 ಕುಣಿತ ಭಜನಾ ತಂಡಗಳು ಭಾಗವಹಿಸಲಿವೆ. ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ, ಸ್ಯಾಕ್ಸೋಫೋನ್, ಚೆಂಡೆ ವಾದನ, ಆಕರ್ಷಕ ಟ್ಯಾಬ್ಲೊಗಳು, ಜಾನಪದ ಗೊಂಬೆಗಳು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಶೋಭಾಯಾತ್ರೆಯಲ್ಲಿ ಸಾಗಿ ಬರಲಿವೆ ಎಂದು ಗೋಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಜೆ 5.30ಕ್ಕೆ ಕದ್ರಿ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅಧ್ಯಕ್ಷತೆ ವಹಿಸುವರು. ಗೋಸೇವಾ ಗತಿವಿಽ ಅಖಿಲ ಭಾರತೀಯ ಸಂಯೋಜಕ ಅಜಿತ್ ಪ್ರಸಾದ್ ಮಹಾಪಾತ್ರ ದಿಕ್ಸೂಚಿ ಭಾಷಣ ಮಾಡುವರು. ಸಂಸದ ಬ್ರಿಜೇಶ್ ಚೌಟ, ಶಾಸಕರಾದ  ಡಿ. ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮುದ್ದೇನಹಳ್ಳಿ ಶ್ರೀ ಸಾಯಿ ಸಂಸ್ಥೆಯ ಗೋವಿಂದ ರೆಡ್ಡಿ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಅಧ್ಯಕ್ಷರಾದ ಭಕ್ತಿಭೂಷಣ್ ದಾಸ್ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಜೆ 4 ಗಂಟೆಗೆ ಕದ್ರಿ ಮೈದಾನದಲ್ಲಿ ಚಿಕ್ಕಬಳ್ಳಾಪುರ ಓಂಕಾರ ಜ್ಯೋತಿ ಆಶ್ರಮದ ಶ್ರೀ ಕಾಳಿತನಯ ಉಮಾಮಹೇಶ್ವರ ಆಚಾರ್ಯ ಅವರಿಂದ ಗೋಭಕ್ತಿ ಗಾನಸುಧಾ ನಡೆಯಲಿದೆ. ಮಧ್ಯಾಹ್ನ 2ರಿಂದ ರಾತ್ರಿವರೆಗೆ ಕದ್ರಿ ಮೈದಾನದಲ್ಲಿ ದೇಶಿಯ ಗೋತಳಿಗಳ ಪ್ರದರ್ಶನ- ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ಗೋವುಗಳಲ್ಲಿ ಅಪರೂಪವಾಗಿರುವ ಗಜಗಾತ್ರದ ವಿಶೇಷ ತಳಿಗಳನ್ನು ಇಂದಿನ ಪೀಳಿಗೆ ಕಣ್ಣುಂಬಿಕೊಳ್ಳಲು ವಿಶೇಷ ಅವಕಾಶವಿದೆ. ಉತ್ತಮ ತಳಿಯ ದೇಶಿಯ ಗೋ ಪಾಲನೆ ಮಾಡುವವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತೀರ್ಪುಗಾರರ ಆಯ್ಕೆಯ ಗೋವುಗಳಿಗೆ ವಿಶೇಷ ಬಹುಮಾನಗಳ ಪುರಸ್ಕಾರ ನೀಡಲಾಗುವುದು. ಕಾರ್ಯಕ್ರಮದಲ್ಲಿ ಸುಮಾರು 10,000ಕ್ಕೂ ಅಧಿಕ ಗೋ ಪ್ರೇಮಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಅಧ್ಯಕ್ಷರಾದ ಭಕ್ತಿಭೂಷಣ್ ದಾಸ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಗದೀಶ ಶೇಣವ ಉಪಸ್ಥಿತರಿದ್ದರು.

2024 ಡಿಸೆಂಬರ್ 31 ರಂದು ಬಂಟ್ವಾಳ ತಾಲೂಕಿನ ಪುದು ಗ್ರಾಮದ ರಾಧಾ ಸುರಭೀ ಗೋ ಮಂದಿರದಲ್ಲಿ ಚಾಲನೆ ಪಡೆದ ನಂದಿ ರಥಯಾತ್ರೆ ಗೋಸೇವಾ ಗತಿವಿಧಿ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಸಹಕಾರ ಭಾರತೀ, ಭಾರತೀಯ ಕಿಸಾನ್ ಸಂಘ, ಸಂಸ್ಕಾರ ಭಾರತೀ, ಸ್ವದೇಶಿ ಜಾಗರಣ ಮಂಚ್, ಮಣ್ಣು ಉಳಿಸಿ ಸ್ವಯಂಸೇವಕರು, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ್, ಪರ್ಯಾವರಣ, ಸಾಮರಸ್ಯ, ಧರ್ಮ ಜಾಗರಣ ಗತಿವಿಽ ಕರ್ನಾಟಕ ಸಹಯೋಗದೊಂದಿಗೆ ಸಂಪನ್ನಗೊಂಡಿದೆ. ಯಾತ್ರೆಯ ಅವಧಿ 95 ದಿನ. ಪ್ರಯಾಣದ ದಾರಿಯ ಉದ್ದ 9,000 ಕಿಲೋಮೀಟರ್‌ಗೂ ಹೆಚ್ಚು. ವಿಷ ಮುಕ್ತ ಗಾಳಿ, ಮಣ್ಣು, ಅಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,1008 ವಿಷ್ಣು ಸಹಸ್ರನಾಮ ಪಾರಾಯಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋಕಥೆ, ಮನೆ ಮನೆಯಲ್ಲಿ ಗೋವು, ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಶೀ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋಮಾತೆ ವಿಶ್ವ ಮಾತೆ-ಭಾರತ ವಿಶ್ವಗುರು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು, ಸಹಜ ಕೃಷಿ ವಿಸ್ತರಣೆ, ಸ್ವದೇಶಿ, ಗವ್ಯ ಉತ್ಪನ್ನ ಬಳಕೆಯ ಪ್ರಚಾರ, ಮಣ್ಣು ಉಳಿಸುವ ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸುವುದು. ದೇಶಿಬೀಜ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋಣಮುಕ್ತ ಭಾರತ, ಸಮೃದ್ದ ಭಾರತ, ವಿಶ್ವಗುರು ಭಾರತ, ನಂದಿ ರಥಯಾತ್ರೆಯ ಉದ್ದೇಶ ಎಂದು ಪ್ರವೀಣ್ ಸರಳಾಯ ವಿವರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article