ಸಂಶೋಧನೆಗೆ ಕೊನೆ ಮೊದಲಿಲ್ಲ, ಅದೊಂದು ನಿರಂತರ ಪ್ರಕ್ರಿಯೆ: ಡಾ. ಮೊನಿಕಾ ಸದಾನಂದ

ಸಂಶೋಧನೆಗೆ ಕೊನೆ ಮೊದಲಿಲ್ಲ, ಅದೊಂದು ನಿರಂತರ ಪ್ರಕ್ರಿಯೆ: ಡಾ. ಮೊನಿಕಾ ಸದಾನಂದ


ಮಂಗಳೂರು: ಸಂಶೋಧನೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಆದಿ ಅಂತ್ಯ ಎಂಬುದು ಇರುವುದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮೊನಿಕಾ ಸದಾನಂದ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಂಶೋಧನಾ ವೇದಿಕೆ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಏಳು ದಿನದ ಎಫ್‌ಡಿಪಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

ವಿದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಶೈಕ್ಷಣಿಕ ವಲಯದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲದೇ ಇರುವುದು ವಿಪರ್ಯಾಸ. ಅಲ್ಲದೇ, ಸಂಶೋಧನಾ ಕೆಲಸಗಳಿಗೆ ಸರ್ಕಾರದ ವತಿಯಿಂದ ಬಿಡುಗಡೆ ಮಾಡಲಾಗುತ್ತಿದ್ದ ಅನುದಾನದ ಪ್ರಮಾಣವೂ ಕಡಿಮೆಯಾಗಿದೆ. ಅದೇ ಕಾರಣಕ್ಕೆ ದೇಶದಲ್ಲಿ ಸಂಶೋಧನೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು. 

ವಿದೇಶಗಳಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂಶೋಧನಾ ಮನಸ್ಥಿತಿಯನ್ನು ಬೆಳೆಸಲಾಗುತ್ತದೆ. ಹಾಗಾಗಿ ಬಹುತೇಕ ವಿದ್ಯಾರ್ಥಿಗಳು ಸಂಶೋಧನೆ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಆದರೆ ನಮ್ಮ ದೇಶದಲ್ಲಿ ಸ್ನಾತಕೋತ್ತರ ಹಂತದ ಶಿಕ್ಷಣ ಪಡೆಯುವ ವೇಳೆಗೆ ಸಂಶೋಧನೆ ಕುರಿತು ಪರಿಚಯ ಮಾಡಿಸುತ್ತೇವೆ. ಇಂತಹ ಪರಿಸ್ಥಿತಿ ಬದಲಾಗಬೇಕಿದ್ದು, ಮೂಲಭೂತವಾಗಿ ಸಂಶೋಧನೆ ಕುರಿತಾದ ಸೂಕ್ತ ತರಬೇತಿಯನ್ನು ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. 

ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ಗುಣಮಟ್ಟದಲ್ಲೂ ರಾಜಿಯಾಗುತ್ತಿರುವುದು ವಿಪರ್ಯಾಸ. ಆ ಕಾರಣಕ್ಕಾಗಿಯೇ ನಕಲಿ ಸಂಶೋಧನಾ ನಿಯತಕಾಲಿಕಗಳು ಎಲ್ಲೆಡೆ ವ್ಯಾಪಕವಾಗುತ್ತಿದೆ. ಇವುಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ ಎಂದೂ ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಕಳೆದ ಏಳು ದಿನಗಳಿಂದ ಎಫ್‌ಡಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಅಭ್ಯರ್ಥಿಗಳು ಭವಿಷ್ಯದಲ್ಲಿ ಗುಣಮಟ್ಟದ ಸಂಶೋಧನೆ ಕೈಗೊಳ್ಳುವಂತಾಗಲಿ. ಸಂಶೋಧನಾ ಸಂಪ್ರದಾಯ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು. 

ಕಾರ್ಯಕ್ರಮದಲ್ಲಿ ಸಂಶೋಧನಾ ವೇದಿಕೆ ಸಂಚಾಲಕಿ ಡಾ. ಭಾರತಿ ಪ್ರಕಾಶ್, ಐಕ್ಯೂಎಸಿ ಸಂಚಾಲಕ ಡಾ. ಸಿದ್ದರಾಜು ಎಂ. ಎನ್. ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article