
ದಕ್ಷಿಣ ಕನ್ನಡ ಜಿಲ್ಲೆಯನ್ನು ಸುಂದರಗೊಳಿಸುತ್ತಿರುವ ವರ್ಲಿ ಭಿತ್ತಿಚಿತ್ರ
ಮಂಗಳೂರು: ಎಲ್ಲೆಡೆಯು ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರನ್ನೂ ಕೈಬೀಸಿ ಕರೆಯುತ್ತಿರುವ, ಗೋಡೆಗಳ ಮೂಲಕ, ಬಟ್ಟೆಗಳ ಮೂಲಕ ಜನತೆಯ ಕಣ್ಣುಗಳನ್ನು ಕುಕ್ಕುತ್ತ, ತನ್ನೆಡೆಗೆ ಸೆಳೆಯುತ್ತಿದೆ ವರ್ಲಿ ಭಿತ್ತಿಚಿತ್ರ.
ಮೂಲತಃ ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ವಾಸಿಸುತ್ತಿರುವ ವರ್ಲಿ ಜನಾಂಗದ ಆದಿವಾಸಿಗಳು ಮೂಲ ಕಲೆಯನ್ನು ಅವರು ಅಭಿವೃದ್ಧಿ ಪಡಿಸುತ್ತಿದ್ದು, ಇದೊಂದು ಸುಂದರ ಕಲೆಯಾದ ಕಾರಣ 2005ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಪಾಡ್ಕರ್ ಮೂಲಕ ತಾರನಾಥ ಕೈರಂಗಳ ಅವರು ಪ್ರಚಾರಪಡಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಎಲ್ಲಾ ಭಾಗಗಳಿಗೆ ವಿಸ್ತರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಈಗಾಗಲೇ ಶಾಲೆ, ಕಾಲೇಜು, ಕಛೇರಿ ಹಾಗೂ ಮನೆಗಳ ಗೋಡೆಯ ಮೇಲೆ ವರ್ಲಿ ಭಿತ್ತಿ ಚಿತ್ರವನ್ನು ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ತಾರನಾಥ ಕೈರಂಗಳ ಅವರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿಯಿಂದ ಪ್ರಾರಂಭಗೊಂಡು ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳನ್ನು ಇಟ್ಟುಕೊಂಡು ವರ್ಲಿ ಚಿತ್ರವನ್ನು ರಚಿಸಲಾಗುತ್ತಿದೆ. ಜಾಮಿತಿ ಆಕೃತಿಗಳನ್ನು ಬಳಸಿಕೊಂಡು ಮಾಡುವ ಚಿತ್ರಕಲೆಗಳು ಇಲ್ಲಿ ಯಾವುದೇ ಅನಾಟಮಿಯ ಕಟ್ಟುಪಾಡುಗಳು ಇಲ್ಲದೇ, ಆದಿವಾಸಿಗಳು ಏನನ್ನು ಬಿಡುಸುತ್ತಿದ್ದರು ಅದೇ ರೀತಿಯಲ್ಲಿ ಸರಳವಾಗಿ ಬಿಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರಚಾರ ಪಡಿಸಲಾಗುತ್ತಿದೆ ಎನ್ನುತ್ತಾರೆ ತಾರನಾಥ ಕೈರಂಗಳವರು.
ವರ್ಲಿ ಭಿತ್ತಿ ಚಿತ್ರವನ್ನು ಸಮಾಜಕ್ಕೆ ಬಿತ್ತರಿಸಲು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ನ 100ಕ್ಕೂ ಹೆಚ್ಚು ಸ್ವಯಂ ಸೇವಕರುಗಳು ಶಕ್ತಿನಗರದ ನಾಲ್ಯಪದವಿನ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದ ಹೊರಗೋಡೆಯ ಮೇಲೆ ವರ್ಲಿ ಭಿತ್ತಿಚಿತ್ರ ಬಿಡಿಸುವ ಕಾರ್ಯಾಗಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉತ್ತಮ ರೀತಿಯಲ್ಲಿ ಭಿತ್ತಿಚಿತ್ರ ಮೂಡಿಬರಲು ಸಹಕರಿಸಿದ್ದು, ವರ್ಲಿ ಚಿತ್ರದ ವಿಸ್ತರಣೆಯಲ್ಲಿ ಕೈಜೋಡಿಸಿದ್ದಾರೆ.
ಇಲ್ಲಿ ವರ್ಲಿ ಭಿತ್ತಿ ಚಿತ್ರವನ್ನು ಮೂಲವಾಗಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯತೆಗಳು, ಆಚಾರ-ವಿಚಾರಗಳು, ಕಸುಬು, ಕೃಷಿ ಪದ್ದತಿ ಹಾಗೂ ಧಾರ್ಮಿಕ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಮೂಲ ವರ್ಲಿ ಕಲೆಯನ್ನು ಅಲಂಕಾರ ಶೈಲಿಯಲ್ಲಿ ಬಿಡಿಸಲಾಗುತ್ತಿದೆ ಎನ್ನುತ್ತಾರೆ ತಾರನಾಥ ಕೈರಂಗಳ ಅವರು ಹೇಳುತ್ತಾರೆ.
ನಮ್ಮ ಶಾಲೆಯ ಸಭಾಂಗಣದ ಗೋಡೆಯ ಮೇಲೆ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ವರ್ಲಿ ಭಿತ್ತಿಚಿತ್ರ ಬಿಡಿಸುವ ಮೂಲಕ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ ಎಂದು ಶಕ್ತಿನಗರದ ನಾಲ್ಯಪದವಿನ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ದಾಕ್ಷಾಯಿಣಿ ಹರ್ಷ ವ್ಯಕ್ತಪಡಿಸಿದ್ದಾರೆ.