
ನ್ಯಾಯ ಸಿಗದ ವೈದ್ಯೆ ಮೇಲಿನ ಹಲ್ಲೆ ಯತ್ನ ಪ್ರಕರಣ-ಘಟನೆಗೆ ರಾಜಕೀಯ ಬಣ್ಣ ಹಚ್ಚಬೇಡಿ: ಡಾ. ದೀಪಕ್ ರೈ
ಪುತ್ತೂರು: ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಮೇಲೆ ಹಲ್ಲೆ ನಡೆಸುವ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದಲ್ಲಿ ನಮಗಿನ್ನೂ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ನಾವು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಯಾವುದೇ ರಾಜಕೀಯ ಪಕ್ಷ-ಸಂಘಟನೆಗಳಿಗೂ ಸೇರಿಲ್ಲ. ನಮ್ಮಲ್ಲಿ ಎಲ್ಲಾ ಧರ್ಮದವರೂ ಸೇವೆ ಮಾಡುತ್ತಿದ್ದಾರೆ. ಈ ಘಟನೆಗೆ ಯಾವುದೇ ರಾಜಕೀಯ ಬಣ್ಣ ಹಚ್ಚಬೇಡಿ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ. ದೀಪಕ್ ರೈ ಹೇಳಿದರು.
ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸವದ ನಂತರ ವಾರ್ಡಿಗೆ ಯಾವುದೇ ಗಂಡಸರ ಪ್ರವೇಶಕ್ಕೆ ಅವಕಾಶ ಇಲ್ಲ. ಕಾರಣ ಮಗು ಮತ್ತು ಬಾಣಂತಿಯ ಸುರಕ್ಷತೆ ದೃಷ್ಟಿಯಿಂದ ಇಂತಹ ಕ್ರಮ ಅನುಸರಿಸಲಾಗುತ್ತಿದೆ. ಮೊನ್ನೆ ನಡೆದ ಘಟನೆ ವಾರ್ಡಿನಲ್ಲಿ ಒಬ್ಬನ್ನು ಹೊರತು ಪಡಿಸಿ ಉಳಿದವರು ಹೊರಹೋಗಿ ಎಂದು ಹೇಳಿರುವ ವಿಚಾರಕ್ಕೆ ನಡೆದಿದೆ. ನಮಗೆ ಸರಿಯಾದ ರಕ್ಷಣೆ ಹಾಗೂ ಆರೋಪಿಗಳ ಬಗ್ಗೆ ಕ್ರಮ ಕೈಗೊಳ್ಳಲು ನಾವು ಕಾಲ್ನಡಿಗೆ ಜಾಥಾ ಮೂಲಕ ಪೊಲೀಸ್ ಠಾಣೆಗೆ ಮನವಿ ಮಾಡಲು ಹೋಗಿದ್ದೆವು. ಆ ಸಂದರ್ಭ ಅಲ್ಲಿ ರಾಜಕೀಯಪಕ್ಷ ಹಾಗೂ ಸಂಘಟನೆಗಳ ಜನರು ಸೇರಿದ್ದರು. ಈ ಸಂದರ್ಭ ನಡೆದ ರಸ್ತೆ ತಡೆ-ಪ್ರತಿಭಟನೆಯಲ್ಲಿ ನಾವು ಯಾರೂ ಕೂಡಾ ಭಾಗವಹಿಸಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯೊಬ್ಬರು ವೈದ್ಯರಿಗೆ ಅವಮಾನ ಮಾಡಿದ ಪ್ರಕರಣದಲ್ಲಿಯೂ ನಾವು ದೂರು ನೀಡಿದ್ದೇವೆ. ಈ ಘಟನೆಯಲ್ಲೂ ಅದೇ ಕ್ರಮವನ್ನು ಮಾಡಿದ್ದೇವೆ. ಎಸ್ಪಿ ಅವರು ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಡುವೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಗಿರುವ ಡಾ.ಆಶಾ ಪುತ್ತೂರಾಯ ಅವರ ಬಗ್ಗೆ ನಿಂದನೆ ಮಾಡುವ ಕೆಲಸ ಸಾಮಾಜಿಕ ಜಾಲತಾಣಗಳಿಂದ ನಡೆಯುತ್ತಿದೆ. ಇಂತಹ ಸ್ಥಿತಿ ಇದ್ದರೆ ಯಾವುದೇ ವೈದ್ಯರು ನಿಷ್ಠೆಯಿಂದ ಕೆಲಸ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಭದ್ರತಾ ಸಿಬ್ಬಂದಿಗಳ ನೇಮಕಕ್ಕೆ ಆಗ್ರಹ:
ವೈದ್ಯಾಧಿಕಾರಿಗಳ ಜೀವಭಯದಿಂದ ಕೆಲಸ ಮಾಡುವ ಸ್ಥಿತಿ ಬದಲಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ನಿಯಮಗಳ ಬಗ್ಗೆ ಮಾಹಿತಿ ನೀಡುವ ಫಲಕ ಅಳವಡಿಸಲಾಗಿದೆ. ಆದರೆ ಇದರ ಪಾಲನೆ ಯಾಗುತ್ತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಲು ಭದ್ರತಾ ಸಿಬಂದಿಗಳಿಲ್ಲ. ಹಾಗಾಗಿ ಭದ್ರತಾ ಸಿಬಂದಿಗಳ ನೇಮಕಕ್ಕೆ ಮನವ ಸಲ್ಲಿಸಲಾಗಿದೆ. ತಕ್ಷಣ ಈ ಬಗ್ಗೆ ಕ್ರಮವಹಿಸುವಂತೆ ಅವರು ಆಗ್ರಹಿಸಿದರು. ಆಸ್ಪತ್ರೆಯಲ್ಲಿ ಪೊಲೀಸ್ ಚೌಕಿ ವ್ಯವಸ್ಥೆಯನ್ನೂ ಮಾಡುವಂತೆ ಅವರು ತಿಳಿಸಿದರು.
ಸಮಯ ನಿಗಧಿ ಇಂದಿನಿಂದಲೇ ಜಾರಿ:
ಬೇಕಾಬಿಟ್ಟಿಯಾಗಿ ಆಸ್ಪತ್ರೆಯಲ್ಲಿ ರೋಗಿಗಳ ಜತೆ ಬಂದವರು ತಿರುಗುತ್ತಾರೆ. ರೋಗಿಗಳ ಬೆಡ್ ಮೇಲೆಯೇ ಕುಳಿತುಕೊಳ್ಳುತ್ತಾರೆ. ಇದನ್ನು ತಡೆಯಲು ಭದ್ರತಾ ಸಿಬಂದಿಗಳ ಆವಶ್ಯಕತೆ ಇದೆ. ರೋಗಿಗಳನ್ನು ಕಾಣಲಿ ಸಮಯವನ್ನು ನಿಗದಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಇದೀಗ ಇಂದಿನಿಂದ ಕಟ್ಟುನಿಟ್ಟಾಗಿ ಸಮಯ ನಿಗಧಿ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಭೇಟಿ ಸಮಯವನ್ನು ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ನಿಗದಿ ಪಡಿಸಲಾಗಿದೆ. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಬೇಕು. ಪ್ರಸ್ತುತ ನಡೆದ ಘಟನೆಯಿಂದ ಮಾನಸಿಕವಾಗಿ ನೋವಿಗೆ ಒಳಗಾಗಿರುವ ಡಾ.ಆಶಾ ಪುತ್ತೂರಾಯ ಅವರು ರಜೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ನಿಯಮಗಳನ್ನು ರಚಿಸಿ ಸಮಯ ಪಾಲನೆಗೆ ಅಗತ್ಯ ಫಲಕಗಳನ್ನು ಅಳವಡಿಸಲಾಗಿದೆ. ಎಲ್ಲರೂ ಒಮ್ಮೆಲೆ ನುಗ್ಗಿ ಸೋಂಕು ಹರಡು ಸಾಧ್ಯತೆಯಿರುವ ಕಾರಣದಿಂದ ಮತ್ತು ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಎಚ್ಚರ ವಹಿಸಲಾಗುತ್ತಿದೆ. ನಿಯಮಗಳ ಪಾಲನೆ ಮಾಡಲು ಅಗತ್ಯ ಸಿಬ್ಬಂದಿಯ ಕೊರತೆಯಿದ್ದು, ಗುಂಪು ಸೇರದಂತೆ ಮನವಿ ಮಾಡುತ್ತಿದ್ದೇವೆ. ಕೆಲವು ಸಂದರ್ಭ ಜೀವ ಭಯ ಎದುರಿಸುವ ಸ್ಥಿತಿ ಇದ್ದು, ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದೇವೆ ಎಂದು ಡಾ. ಅರ್ಚನಾ ಕಾವೇರಿ ಒತ್ತಾಯಿಸಿದ್ದಾರೆ.
ತಾಲೂಕು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ. ಯಧುರಾಜ್, ಡಾ. ಅರ್ಚನಾ ಕಾವೇರಿ, ಡಾ. ನಿಖಿಲ್, ಡಾ. ಅಜಯ್ ಉಪಸ್ಥಿತರಿದ್ದರು.