ಸಂಪೂರ್ಣ ಸ್ವಚ್ಛತೆ ಇರುವಲ್ಲಿ ದೇವರು ನೆಲೆಸುತ್ತಾನೆ: ಶೀನ ಶೆಟ್ಟಿ

ಸಂಪೂರ್ಣ ಸ್ವಚ್ಛತೆ ಇರುವಲ್ಲಿ ದೇವರು ನೆಲೆಸುತ್ತಾನೆ: ಶೀನ ಶೆಟ್ಟಿ


ಮಂಗಳೂರು: ಆರೋಗ್ಯವೇ ಭಾಗ್ಯ. ಸ್ವಚ್ಛತೆಯೇ ಸಮೃದ್ಧಿ. ಸಂಪೂರ್ಣ ಸ್ವಚ್ಛತೆ ಇರುವಲ್ಲಿ ದೇವರು ನೆಲೆಸುತ್ತಾನೆ. ಅಂತರಂಗ-ಬಹಿರಂಗ ಶುದ್ಧತೆ ನಮ್ಮನ್ನು  ದೈವತ್ವದತ್ತ ಕೊಂಡೊಯ್ಯುತ್ತದೆ ಎಂದು ದಕ ಜಿಲ್ಲೆಯ ಸ್ವಚ್ಛತಾರಾಯಭಾರಿ ಶೀನ ಶೆಟ್ಟಿ ಹೇಳಿದರು. 

ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ನಗರದ ಲಾಲ್‌ಭಾಗ್ ನಿಂದ ಉರ್ವ ಮೈದಾನ ತನಕ ಭಾನುವಾರ ಬೆಳಗ್ಗೆ ಜರುಗಿದ ‘ಸಂಗೀತದೊಂದಿಗೆ ಸ್ವಚ್ಚತೆ’ ಅಭಿಯಾನದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು.

ಸ್ವರ್ಗದಂತಿದ್ದ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಛತೆಯ ವಿಷಯದಲ್ಲಿ ನರಕದತ್ತ ಸಾಗುತ್ತಿದೆ. ಕ್ಯಾನ್ಸರ್‌ಕಾರಕ, ಪರಿಸರಕ್ಕೆ ಮಾರಕ ಪ್ಲಾಸ್ಟಿಕ್  ಹಾಗೂ ಇತರ ಕೆಲವು ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ಸುಡುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಹಸಿ ಕಸ, ಒಣ ಕಸ, ಪ್ಯಾಡ್, ಪ್ಯಾಂ ಪರ್ಸ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸ ಸಾಗಾಟದ ವಾಹನಗಳಿಗೆ ನೀಡಿ ಕಸ, ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ನಗರದ ಜನರು ಸಹಕರಿಸಿದರೆ ಮಂಗಳೂರು  ನಗರ ಸ್ವಚ್ಛ ನಗರ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಸಿದರು.

ವಿಶ್ವ ಸಂಸ್ಥೆ ವೇದಿಕೆಯಲ್ಲಿ ಇರಾ:

ದಕ ಜಿಲ್ಲೆಯಲ್ಲಿ ಸ್ವಚ್ಛತಾಅಭಿಯಾನ ಬಂದು 20 ವರ್ಷ ಆಯಿತು. ಆ ಸಮಯದಲ್ಲಿ ಜಿಲ್ಲೆಯ ಇರಾ ಗ್ರಾಮದಲ್ಲಿ ಗ್ರಾಮಸ್ಥರಿಂದಲೇ ಒಂದು ಪವಾಡ ನಡೆಯಿತು. ಗ್ರಾಮದ ಎಲ್ಲ 1300 ಮನೆಗಳಿಗೆ ಶೌಚಗೃಹ ನಿರ್ಮಾಣವಾಯಿತು. ಗ್ರಾಮದ ಎಲ್ಲ ಕಡೆಯ ಕಸಗಳನ್ನು ಸಂಗ್ರಹಿಸುವ ಪ್ಲಾಸ್ಟಿಕ್ ಪರ್ವತ ಪಂಚಾಯಿತಿ ಕಟ್ಟಡ  ನಿರ್ಮಾಣವಾಯಿತು. ಹೊರಗಿನ ಜನರ ಹಾಗೂ ಹಣಕಾಸಿನ ಬೆಂಬಲವಿಲ್ಲದೆ, ಊರವರ ಸಂಕಕಲ್ಪದಿಂದ ನಡೆದ ಈ ಕಾರ್ಯಕ್ರಮ ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾಪವಾಯಿತು.  ಈ ಯಶೋಗಾಥೆಯನ್ನು ವೀಕ್ಷಿಸಲು ಏಳು ದೇಶಗಳ ಪ್ರತಿನಿಧಿಗಳು ಇರಾ ಗ್ರಾಮಕ್ಕೆ ಆಗಮಿಸಿದರು ಎಂದು ಅವರು ವಿವರಿಸಿದರು.

ದೈವವೂ ಅಸಂತುಷ್ಟ:

ತಲಪಾಡಿಯಲ್ಲಿ ಇತ್ತೀಚೆಗೆ ವೈದ್ಯನಾಥ ದೈವವು ಬಯಲು ಕಸಾಲಯ ಬಗ್ಗೆ ಕೆಂಡಮಂಡಲವಾಗಿರುವುದನ್ನು ಅವರು ಉಲ್ಲೇಖಿಸಿದರು.

ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ರೋಹನ್ ಮೊಂತೆರೋ  ಉದ್ಘಾಟಿಸಿದರು. ಸಂಗೀತದೊಂದಿಗೆ ಸ್ವಚ್ಚತೆ ಕಾರ್ಯಕ್ರಮದ ಮುಖಂಡ ಜಗದೀಶ್ ಶೆಟ್ಟಿ  ಬೋಳೂರು ಪ್ರಸ್ತಾವನೆಗೈದರು. ಸಂಗೀತ ಕಲಾವಿದ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಅಭಿಯಾನದ ಮುಖಂಡ ಮೊಹೊಮ್ಮದ್ ಇಕ್ಬಾಲ್, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಮುಖಂಡರಾದ ದೀಪಕ್ ರಾಜ್ ಉಳ್ಳಾಲ್, ರಮೇಶ್ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ರಾಮ್ ಕುಮಾರ್, ಹರಿಣಿ ಮುಂತಾದವರು ಉಪಸ್ಥಿತರಿದ್ದರು.

ಮಾದರಿ ವಾರ್ಡ್:

ಇರಾ ಗ್ರಾಮದ ರೀತಿ ‘ಸಂಗೀತದೊಂದಿಗೆ ಸ್ವಚ್ಚತೆ’ ಸಂಗೀತ ಅಭಿಯಾನದ ಮೂಲಕ ಮಂಗಳೂರು ಮಹಾನಗರದಿಂದ ರಾಜ್ಯಕ್ಕೆ, ರಾಷ್ಟ್ರ-ಜಗತ್ತಿಗೆ ಒಂದು ಸಂದೇಶ  ರವಾನೆಯಾಗಬೇಕು. ಹಸಿ ಕಸ, ಒಣ ಕಸ, ಪ್ಯಾಡ್, ಪ್ಯಾಂಪರ್ಸ್‌ಗಳ ಸಮರ್ಪಕ ನಿರ್ವಹಣೆಯ ಮಾದರಿ ವಾರ್ಡ್ ಒಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಬೇಕು. ಇಲ್ಲಿಯ ಜನರ ಕೆಲಸ ಪಾಲಿಕೆಯ ಇತರ ವಾರ್ಡ್‌ಗಳಿಗೆ ಪ್ರೇರಣೆಯಾಗಬೇಕು ಎಂದು ದಕ ಜಿಲ್ಲೆಯ ಸ್ವಚ್ಛತಾರಾಯಭಾರಿ ಶೀನ ಶೆಟ್ಟಿ ಕರೆ ನೀಡಿದರು.

ಪಾಲಿಕೆಯ ಒಳ್ಳೆಯ ಸದಸ್ಯರಾಗಿ ಅನುಭವ ಪಡೆದಿರುವ ಜಗದೀಶ ಶೆಟ್ಟಿಯವರು ತಮ್ಮ ವಾರ್ಡ್‌ನಿಂದಲೇ ಈ ಕೆಲಸ ಆರಂಭಿಸಬಹುದು ಎಂದರು.

ಸಂಗೀತದೊಂದಿಗೆ ಸ್ವಚ್ಛತೆ ಸಮಾಜದ ಕಳಕಳಿ. ಮಂಗಳೂರು ಅತ್ಯಂತ ಸುಂದರ ನಗರ. ಜಗತ್ತಿನ ಯಾವ ಕಡೆಗೆ ತೆರಳಿದರೂ ಈ ನಗರ ನಮ್ಮನ್ನು ವಾಪಾಸು ಕರೆಯುತ್ತದೆ. ಆರೋಗ್ಯಪೂರ್ಣ ಜೀವನ ನಡೆಸುವ ಉದ್ದೇಶದಿಂದ ಇಲ್ಲಿಯ ಸ್ವಚ್ಛತೆ ಪಾಲನೆಯ ಸಾಮೂಹಿಕ ಜವಾಬ್ದಾರಿಯನ್ನು ವಹಿಸೋಣ ಎಂದು ಉದ್ಯಮಿ ರೋಹನ್ ಮೊಂತೆರೋ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article