
ಕಟೀಲು ಜಾತ್ರೆ ಆರಂಭ
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ಪ್ರಯುಕ್ತ ಭಾನುವಾರ ಧ್ವಜಾರೋಹಣ ನಡೆಯಿತು. ಬೆಳಗ್ಗೆ ದೇವರ ಬಲಿ ಹೊರಟು ನಂತರ ಧ್ವಜಾರೋಹಣ, ಶಿಬರೂರು ಕೊಡಮಣಿತ್ತಾಯ ಮತ್ತು ಶ್ರೀ ದೇವರ ಭೇಟಿ, ಪ್ರಸಾದ ವಿತರಣೆ, ಪಲ್ಲಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.
ಪಾನಕ ಸೇವೆ:
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ದಿನ ಪಾನಕ ಸೇವೆ ವಿಶೇಷತೆಯನ್ನು ಹೊಂದಿದೆ, ಕಳೆದ ಹಲವು ವರ್ಷಗಳಿಂದ ಈ ಸೇವೆ ನಡೆಯುತ್ತಿದ್ದು, ದೇವಳ ಜಾತ್ರಾಮಹೋತ್ಸವದ ಮೊದಲ ದಿನ ದೇವಳದ ಮುಂಭಾಗ ದೇವಳಕ್ಕೆ ಆಗಮಿಸುವ ಭಕ್ತರಿಗೆ ಪಾನಕ ವಿತರಣೆ ಮಾಡಲಾಗುತ್ತಿದ್ದು, ಸುಮಾರು 8 ರಿಂದ 9 ಸಾವಿರ ಲೀಟರ್ ಪಾನಕ ವಿತರಣೆಯಾಗುತ್ತಿದೆ. ಭಕ್ತರಿಗೆ ಪ್ರಸಾದ ರೂಪದಲ್ಲಿ ಬೇಕಾದಷ್ಟು ಕುಡಿಯಲು ಮಾತ್ರವಲ್ಲದೆ ಮನೆಗೆ ತೆಗೆದುಕೊಂಡು ಹೋಗಲು ವಿತರಿಸಲಾಗುತ್ತದೆ. ವಿತರಿಸುವ ಸೇವೆಯನ್ನು ಕಟೀಲು ಕಿನ್ನಿಗೋಳಿ ಜಿ.ಎಸ್.ಬಿ ಸಮಾಜದವರು ಮಾಡುತ್ತ ಬಂದಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ:
ಉತ್ಸವಾಂಗ ದಿನಂಪ್ರತಿ ದಿನವಿಡೀ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸರಸ್ವತೀ ಸದನದಲ್ಲಿ ನಡೆಯಲಿವೆ. ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಶೈಲಜಾ ಪ್ರದ್ಯುಮ್ನ ರಾವ್ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಕು. ಮೇಧಾ ಅವರಿಂದ ಹಾರ್ಮೋನಿಯಂ ವಾದನ, ಕಲಾತರಂಗಿಣಿ ಹೊಸಬೆಟ್ಟು ರಾಜೇಶ್ ಬಾಗಲೋಡಿ ಅವರ ಶಿಷ್ಯರಿಂದ ಕೊಳಲುವಾದನ, ಶೋಭಾ ಐತಾಳ್ ಬಳಗದವರಿಂದ ಭಕ್ತಿಗೀತೆ, ಪೆರಿಡ್ಕ, ಮಲ್ಲೂರು ತಂಡಗಳಿಂದ ಕುಣಿತ ಭಜನೆ, ಪುತ್ತೂರಿನ ಸ್ವರ ಮಾಧುರ್ಯ ಬಳಗದಿಂದ ಸಂಗೀತ, ನಂದಳಿಕೆ ವಿಶಾಲ ಯಕ್ಷಕಲಾ ಬಳಗದಿಂದ ತಾಳಮದ್ದಲೆ, ಬೆಂಗಳೂರಿನ ಶೈಲಶ್ರೀ ಶ್ರೀವತ್ಸ ಬಳಗದವರಿಂದ ಭರತನಾಟ್ಯ ನಡೆಯಿತು.
ಸಹಸ್ರಾರು ಭಕ್ತರ ಭೇಟಿ:
ಧ್ವಜಾರೋಹಣದ ದಿನದಂದು ಭಾನುವಾರವೂ ಆಗಿದ್ದುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಟೀಲಿಗೆ ಭೇಟಿ ನೀಡಿ ಅನ್ನಪ್ರಸಾದ ಸ್ವೀಕರಿಸಿದರು.