
ಎಸ್ಸಿಡಿಸಿಸಿ ಬ್ಯಾಂಕ್ ‘ಗ್ರಾಹಕ ಸ್ನೇಹಿ ಬ್ಯಾಂಕ್’ ಆಗಿ ಬೆಳೆದಿದೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ಗ್ರಾಹಕರ ಸೇವೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಮುಂಚೂಣಿಯಲ್ಲಿದೆ. ಬ್ಯಾಂಕ್ ತನ್ನ ೧೧೩ ಶಾಖೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡಿ ‘ಗ್ರಾಹಕ ಸ್ನೇಹಿ ಬ್ಯಾಂಕ್’ ಆಗಿ ಬೆಳೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಭಾನುವಾರ ಬ್ಯಾಂಕಿನ ಸಿಬ್ಬಂದಿಗಳಿಗೆ ಗಿಫ್ಟ್ ಕೂಪನ್ ವಿತರಣಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಬ್ಬಂದಿಗಳಿಗೆ ಪೂರಕವಾಗಿರುವ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಮೊದಲಿಗೆ ಜ್ಯಾರಿಗೆ ತಂದ ಹೆಗ್ಗಳಿಕೆ ಎಸ್ಸಿಡಿಸಿಸಿ ಬ್ಯಾಂಕಿಗೆ ಇದೆ. ಮಾತ್ರವಲ್ಲ ಬ್ಯಾಂಕ್ ಕಾಲ ಕಾಲಕ್ಕೆ ವಿವಿಧ ಸವಲತ್ತುಗಳನ್ನು ಸಿಬ್ಬಂದಿಗಳಿಗೆ ನೀಡುತ್ತಿದೆ. ಹಾಗಾಗಿ ಸಿಬ್ಬಂದಿಗಳು ತಮ್ಮ ಕಾರ್ಯದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ, ಬ್ಯಾಂಕ್ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲೂ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ದಕ್ಷ ನಾಯಕತ್ವ ಕಾರಣವಾಗಿದೆ. 31 ವರ್ಷಗಳ ಕಾಲ ಎಸ್ಸಿಡಿಸಿಸಿ ಬ್ಯಾಂಕ್ನ್ನು ಅತ್ಯುನ್ನತ ಮಟ್ಟಕ್ಕೇರಿಸಿದ ಇವರು ಬ್ಯಾಂಕಿನ ಸರ್ವಾಂಗೀಣ ಪ್ರಗತಿಯ ರೂವಾರಿಯಾಗಿದ್ದಾರೆ ಎಂದರು.
10,000 ರೂ. ಮೌಲ್ಯದ ಗಿಫ್ಟ್ ಕೂಪನ್:
ಬ್ಯಾಂಕಿನ ಸಿಬ್ಬಂದಿಗಳಿಗೆ ತಲಾ 10,000 ರೂ. ಮೌಲ್ಯದ ಗಿಫ್ಟ್ ಕೂಪನ್ ವಿತರಿಸಲಾಯಿತು. ಬ್ಯಾಂಕಿನ ಸಿಬ್ಬಂದಿಗಳ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ, ಸಹಾಯಕ ಮಹಾಪ್ರಬಂಧಕರಾದ ಅಶೋಕ್ ಎಚ್.ಎಂ. ಹಾಗೂ ಸಿಬ್ಬಂದಿಗಳಾದ ಶ್ರೇಯಾ ಶೆಟ್ಟಿ, ಪ್ರಕಾಶ್ ಕೆ. ಹಾಗೂ ರಮೇಶ್ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ 10,000 ರೂ. ಮೌಲ್ಯದ ಗಿಫ್ಟ್ ಕೂಪನ್ ಸ್ವೀಕರಿಸಿದರು.
ಎಸ್ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೋಟ್ಟು, ಮಹೇಶ್ ಎಂ. ಹೆಗ್ಡೆ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ, ರಾಜೇಶ್ ರಾವ್ ಉಪಸ್ಥಿತರಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ವಂದಿಸಿದರು. ಕಾರ್ಯಕ್ರಮವನ್ನು ಉಪ ಮಹಾಪ್ರಬಂಧಕ ನಿತ್ಯಾನಂದ ಶೇರಿಗಾರ್ ನಿರೂಪಿಸಿದರು.