
ರುಸಾ ಅನುದಾನ ದುರ್ಬಳಕೆ: ಮಂಗಳೂರು ವಿ.ವಿ ನಡೆಯ ತನಿಖೆಗೆ ಆಗ್ರಹ
ಮಂಗಳೂರು: ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನದ ಅಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಏಳು ಕೋಟಿ ಅನುದಾನ ನೀಡಿದ್ದು, ಅದು ದುರ್ಬಳಕೆ ಆಗಿದೆ ಎಂದು ಹಲವು ಪತ್ರಿಕೆಗಳಲ್ಲಿ ವರದಿಯಾಗಿದೆ. ಆ ಯೋಜನೆಯಡಿಯಲ್ಲಿ ಒದಗಿಸುವ ಹಣವನ್ನು ವಿಶ್ವವಿದ್ಯಾನಿಲಯವು ವಿದ್ಯಾರ್ಥಿ ನಿಲಯ ಕಟ್ಟಿಸುವುದಕ್ಕೆ ಬಳಸಲಾಗಿದೆ ಎಂದು ತಿಳಿಸಿತ್ತು. ಆದರೆ, ಅದನ್ನು ಖಾತ್ರಿಪಡಿಸಿಕೊಳ್ಳಲು ತನಿಖಾ ಸಮಿತಿ ಮುಂದಾದಾಗ, ವಿ.ವಿ. ಹೇಳಿದ ವಿದ್ಯಾರ್ಥಿ ನಿಲಯದ ಅಸ್ತಿತ್ವವೇ ಇಲ್ಲವೆಂದು ತಿಳಿದು ಬಂದಿರುವುದು ಅತ್ಯಂತ ಖಂಡನೀಯ.
ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ, ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಬಳಸಿಕೊಳ್ಳಬೇಕಾದ ಅನುದಾನವನ್ನು ವಿಶ್ವವಿದ್ಯಾನಿಲಯವು ದುರುಪಯೋಗ ಪಡಿಸಿಕೊಂಡಿರುವುದು ಬಹಳ ವಿಷಾದನೀಯ. ಇತ್ತೀಚೆಗಷ್ಟೇ ಹಲವು ಬಾರಿ ಮಂಗಳೂರು ವಿ.ವಿ. ಅನುದಾನದ ಕೊರತೆಯಿಂದಾಗಿ ತನ್ನ ಸಿಬ್ಬಂದಿಗೆ ಇನ್ನೂ ಪಿಂಚಣಿ ನೀಡದಿರುವ ವಿಷಯ ಬೆಳಕಿಗೆ ಬಂತು. ಆದರೆ ಇದೀಗ ಒದಗಿಸಿರುವ ಹಣದ ದುರುಪಯೋಗ ಮೇಲ್ನೋಟಕ್ಕೆ ಕಾಣುತ್ತಿದೆ.
ಈ ಕೂಡಲೇ ಸರ್ಕಾರವು ಈ ಮೇಲಿನ ವಿಷಯದ ಕುರಿತು ಸೂಕ್ತ ತನಿಖೆಯನ್ನು ನಡೆಸಬೇಕು ಮತ್ತು ವಿಶ್ವವಿದ್ಯಾನಿಲಯದ ಈ ವಿದ್ಯಾರ್ಥಿ-ವಿರೋಧಿ ಧೋರಣೆಯನ್ನು ಖಂಡಿಸಿ, ಬಡವರ-ಶಿಕ್ಷಣ ಪರವಾದ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಐಡಿಎಸ್ಓ ಪ್ರಕಟಣೆಯಲ್ಲಿ ಆಗ್ರಹಿಸುತ್ತದೆ.