ಆಟೋ ರಿಕ್ಷಾ ಚಾಲಕನ ಕೊಲೆ, ಸಮಗ್ರ ತನಿಖೆಗೆ ಒತ್ತಾಯ: ಗರಿಷ್ಟ ಪ್ರಮಾಣದ ಪರಿಹಾರಕ್ಕೆ ಡಿವೈಎಫ್ಐ ಆಗ್ರಹ

ಆಟೋ ರಿಕ್ಷಾ ಚಾಲಕನ ಕೊಲೆ, ಸಮಗ್ರ ತನಿಖೆಗೆ ಒತ್ತಾಯ: ಗರಿಷ್ಟ ಪ್ರಮಾಣದ ಪರಿಹಾರಕ್ಕೆ ಡಿವೈಎಫ್ಐ ಆಗ್ರಹ

ಮಂಗಳೂರು: ಮುಲ್ಕಿ ಭಾಗದ ಕೊಳ್ನಾಡು ನಿವಾಸಿ ಮೊಹಮ್ಮದ್ ಶರೀಫ್ (52) ಎಂಬವರು ಎಪ್ರಿಲ್ 9 ರಂದು ಕೆಲಸಕ್ಕೆಂದು ಆಟೋ ರಿಕ್ಷಾ ಓಡಿಸಿಕೊಂಡು ಹೋದವರು ಹಿಂದಿರುಗಿ ಬರಲೇ ಇಲ್ಲ. ಈ ಬಗ್ಗೆ ಸಂಶಯಗೊಂಡ ಮನೆಮಂದಿ ಸ್ಥಳೀಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಹುಡುಕಾಟದ ಪ್ರಯತ್ನ ನಡೆಸಿದ್ದಾರೆ. 

ಆದರೆ ರಿಕ್ಷಾ ಚಾಲಕ ಮೊಹಮ್ಮದ್ ಶರೀಫ್ ಮರು ದಿನ (ಏ.10) ಸಂಜೆ ಹೊತ್ತಿಗೆ ಮಂಜೇಶ್ವರದ ಕುಂಜತ್ತೂರಿನ ನಿರ್ಜನ ಪ್ರದೇಶದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಯಾರೋ ಕಿಡಿಗೇಡಿಗಳು ಬಾಡಿಗೆ ನೆಪದಲ್ಲಿ ತೆರಳಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ನಂತರ ಆಳವಾದ ಬಾವಿಯೊಂದಕ್ಕೆ ಎಸೆದಿರುತ್ತಾರೆ. 

ಈ ಪ್ರಕರಣದ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಓಡಿಸಿ ದುಡಿಯುವಂತಹ ಚಾಲಕರನ್ನು ಬೆಚ್ಚಿಬೀಳಿಸಿದೆ. ಆಟೋ ಚಾಲಕ ಮೊಹಮ್ಮದ್ ಶರೀಫರನ್ನು ಹತ್ಯೆಗೈದ ಕೊಲೆಗಟುಕರನ್ನು ಪೊಲೀಸ್ ಇಲಾಖೆ ಶೀಘ್ರ ಬಂಧನ ಮಾಡಿ, ಈ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

ನಿರ್ಜನ ಪ್ರದೇಶದಲ್ಲಿ ಆಟೋ ಚಾಲಕರನ್ನು ಕೊಲೆ ನಡೆಸಿರುವ ಇಂತಹ ಪ್ರಕರಣಗಳು ದ.ಕ. ಜಿಲ್ಲೆಯಲ್ಲಿ ಮೊದಲದೇನಲ್ಲ. ಈ ಹಿಂದೆಯೂ ಬಹುತೇಕ ಆಟೋ ರಿಕ್ಷಾ ಚಾಲಕರನ್ನು ಗುರಿಯಾಗಿಸಿ ಬಾಡಿಗೆ ನೆಪದಲ್ಲಿ ತೆರಳಿ ಕೊನೆಗೆ ಕೊಲೆ ನಡೆಸಿರುವ ಘಟನೆಗಳು ನಿರಂತರವಾಗಿ ನಡೆದಿದೆ. 

ನಾಟೇಕಲ್ ನಲ್ಲಿ ಇದಾಯತ್, ತೊಕ್ಕೊಟ್ಟಿನಲ್ಲಿ ಲ್ಯಾನ್ಸಿ, ನೆತ್ತರಕೆರೆಯ ರಿಫಾಯಿ ಹೀಗೆ ಅಮಾಯಕ ರಿಕ್ಷಾ ಚಾಲಕರ ಸಾಲು ಸಾಲು ಕೊಲೆಗಳು ಈ ಜಿಲ್ಲೆಯಲ್ಲಿ ಸಂಭವಿಸಿವೆ. 

ಬಹುತೇಕ ಘಟನೆಗಳು ಜಿಲ್ಲೆಯ ಮತೀಯ ಧ್ರುವೀಕರಣದ ರಾಜಕಾರಣಕ್ಕೆ ಅತೀ ಸುಲಭವಾಗಿ ಸಿಗುವ ಬಡ ಆಟೋ ರಿಕ್ಷಾ ಚಾಲಕರನ್ನೇ ಗುರಿಯಾಗಿಸಿ ನಡೆಸಿರುವ ಕೊಲೆಗಳೇ ಅತೀ ಹೆಚ್ಚು. ದಿನದ ದುಡಿಮೆಗಾಗಿ ಕಷ್ಟಪಟ್ಟು ದುಡಿಯುವ ಆಟೋ ರಿಕ್ಷಾ ಚಾಲಕರ ಪ್ರಾಣಕ್ಕೆ ಬೆಲೆನೇ ಇಲ್ಲದಂತಾಗಿದೆ. ಆಳುವ ಸರಕಾರಗಳೂ ಈ ಅಸಂಘಟಿತ ವರ್ಗಕ್ಕೆ ಯಾವೊಂದು ಸೌಕರ್ಯಗಳನ್ನು ಕಲ್ಪಿಸದೇ ಇರೋದು ದುರದೃಷ್ಟಕರ. ಕನಿಷ್ಟಪಕ್ಷ ಕೊಲೆಯಾದ ಕುಟುಂಬಗಳಿಗೆ ಆರ್ಥಿಕ ಪರಿಹಾರನೂ ಕೊಡದೆ ಇರುವ ಕ್ರಮ ದಿನನಿತ್ಯ ದುಡಿಯುವ ಆಟೋ ರಿಕ್ಷಾ ಚಾಲಕರನ್ನು ಕಂಗೆಡಿಸಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಆಟೋ ರಿಕ್ಷಾ ಚಾಲಕ ಮೊಹಮ್ಮದ್ ಶರೀಫ್ ಕೊಲೆ ಪ್ರಕರಣವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಬೇಕು. ಕೊಲೆಗಟುಕರನ್ನು ಅತೀ ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಸಂತ್ರಸ್ತ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ಪರಿಹಾರ ಒದಗಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ ಎಂದು ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article