
ಪ್ರಶ್ನೆ ಮಾಡುವ ‘ಅಧಿಕಾರ’ ಕೊಟ್ಟ ಅಂಬೇಡ್ಕರ್: ಶಾಸಕ ಅಶೋಕ್ ರೈ
ಪುತ್ತೂರು: ಶ್ರೇಷ್ಠ ದಾರ್ಶನಿಕ ಹಾಗೂ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಪ್ರಶ್ನೆ ಮಾಡುವ ಅಧಿಕಾರ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಬದುಕು ಆದರ್ಶಪ್ರಾಯವಾಗಿದೆ. ಅವರ ಜೀವನ ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುತ್ತೂರು ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಅವರ 134ನೇ ಜಯಂತಿ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನದ ಮೂಲಕ ಮನುಷ್ಯನಿಗೆ ಹಕ್ಕು ತಂದುಕೊಟ್ಟ ಅಂಬೇಡ್ಕರ್ ಅವರು ಈ ದೇಶದಲ್ಲಿ ಪ್ರಧಾನಿಯಿಂದ ಹಿಡಿದು ಅಧಿಕಾರಿ ತನಕ, ಶ್ರೀಮಂತನಿಂದ ಹಿಡಿದು ಈ ಸಮಾಜದ ಕಟ್ಟಕಡೆಯ ವ್ಯಕ್ತಿಯ ತನಕ ಮನಬಂದಂತೆ ಅಧಿಕಾರ ಚಲಾಯಿಸುವ ಹಾಗಿಲ್ಲ ಎಂಬ ಕೊಡುಗೆ ಸಮಾಜಕ್ಕೆ ನೀಡಿದ್ದಾರೆ. ಮಹಿಳಾಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದ್ದಾರೆ. ಮನುಷ್ಯನ ಅಭಿವೃದ್ಧಿ ಜತೆಗೆ ಆತನ ಅಭಿವೃದ್ಧಿಯೂ ಅತೀ ಅಗತ್ಯವಾಗಿದೆ. ಜಾತೀಯತೆ ವಿರುದ್ಧ ಹೋರಾಡುವ ಮೂಲಕ ಸಮಾನತೆಗಾಗಿ ಅವರು ಮಾಡಿರುವ ಪ್ರಯತ್ನ ಇಂದಿನ ಯುವಜನತೆಗೆ ಮಾದರಿ ಹಾದಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿದ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ತಮ್ಮ ಗುರಿಯನ್ನು ಬಿಡಲಿಲ್ಲ. ಸಾಮಾಜಿಕ ನೆಲೆಯಲ್ಲಿ ಕಂಡುಬರುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸಿದರು. ಅವರ ಛಲ ಮತ್ತು ಹೋರಾಟದ ಮನೋಭಾವ ಸಮಾನತೆಯ ಚಿಂತನೆಯನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮೈಸೂರು ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ಧನ ಬಿ. ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನ ಶೋಷಿತ ಸಮುದಾಯಕ್ಕೆ ಮಾತ್ರವಲ್ಲ, ಈ ಸಮಾಜದ ಎಲ್ಲರಿಗೂ ಬದುಕು ಕೊಟ್ಟಿದೆ. ಅವರ ಜೀವನಸಂದೇಶ ಮಾತಿಗಿಂತಲೂ ಕೃತಿಗೆ ಹೆಚ್ಚು ಆದ್ಯತೆ ನೀಡಿ ಎಂದು ಸದಾ ಎಚ್ಚರಿಸುತ್ತಿದೆ. ಅದರ ಜತೆಗೆ ಅಂಬೇಡ್ಕರ್ ಹೆಸರು ಬಳಸಿಕೊಂಡು ಲಾಭ ಗಳಿಸಿಕೊಳ್ಳುವ ಮಂದಿಯ ಬಗ್ಗೆ ನಾವು ಸದಾ ಎಚ್ಚರವಾಗಿರಬೇಕು. ಅವರು ಕಟ್ಟಿಕೊಟ್ಟ ಸಂವಿಧಾನ ಇಂದಿಗೆ ಮಾತ್ರವಲ್ಲ, ಎಂದಿಗೂ ಪ್ರಸ್ತುತ. ಸಂವಿಧಾನದ ಕರಡುಪ್ರತಿ ರಚನಾ ಸಮಿತಿಗೆ ಅವರು ಅಧ್ಯಕ್ಷರಾದದ್ದು, ಯಾವುದೋ ಲಾಭಿಯಿಂದಲ್ಲ. ಅದು ಅವರ ಗುಣ ಮತ್ತು ಹಿರಿಮೆಯಿಂದ ಎಂದು ಹೇಳಿದರು.
ಪೂಡಾ ಅಧ್ಯಕ್ಷ ಅಮಲ ರಾಮಚಂದ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಡಿವೈಎಸ್ಪಿ ಅರುಣ್ ನಾಗೇಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ, ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್. ಭಾಗಿಯಾಗಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯಕುಮಾರಿ ಕೆ.ಬಿ. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಡುಗೆ ಸಹಾಯಕಿ ದೇವಮ್ಮ, ಜಿಡೆಕಲ್ಲು ಪದವಿ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಹಾಗೂ ಸರ್ಕಾರಿ ಸಹಾಯಕ ಅಭಿಯೋಜಕ ಜನಾರ್ಧನ ಬಿ. ಅವರನ್ನು ಗೌರವಿಸಲಾಯಿತು. ವಾರ್ಡನ್ ಪ್ರೇಮಲತಾ ವಂದಿಸಿದರು. ವಾರ್ಡನ್ ಸವಿತಾ ಕೆ.ಪಿ ಕಾರ್ಯಕ್ರಮ ನಿರೂಪಿಸಿದರು.