
ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆ: ಸಭೆಯ ನಿರ್ಣಯಗಳು, ಮನೆ ನಿವೇಶನದ ಚರ್ಚೆ
ಉಳ್ಳಾಲ: ಸಭೆಯ ನಿರ್ಣಯಗಳು,ಮನೆ ನಿವೇಶನ, ರಸ್ತೆ, ದಾರಿದೀಪ, ಕುಡಿಯುವ ನೀರು, ಅಭಿವೃದ್ಧಿ ಕಾಮಗಾರಿ ಮುಂತಾದ ವಿಷಯಗಳ ಬಗ್ಗೆ ಪರ ವೀರೋಧ ಚರ್ಚೆಗಳು ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಜಿತ್ ಮಾಡೂರು ಅವರು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಯಾವುದು ಅನುಷ್ಠಾನಕ್ಕೆ ಬರುತ್ತಿಲ್ಲ. ಮಡ್ಯಾರ್ನಲ್ಲಿ ಬಡವರಿಗೆ ಮೀಸಲಿಟ್ಟ ಜಾಗದಲ್ಲಿ ಡಂಪಿಂಗ್ ಯಾರ್ಡ್ ಮಾಡಲು ಹೊರಟ ಕಾರಣ ಆ ಜಾಗ ಕೋರ್ಟ್ನಲ್ಲಿ ಇದೆ. ಬಡವರಿಗೆ ನಿವೇಶನ ಸಿಗುತ್ತಿಲ್ಲ.ಅವರ ಹಣ ಲೂಟಿ ಆಗುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೈದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ದಿವ್ಯ ಸತೀಶ್ ಅವರು ಈ ಬಗ್ಗೆ ಚರ್ಚೆ ಮಾಡಿ ಕಾಲಹರಣ ಮಾಡಬೇಡಿ. ಬಡವರ ಹಣ ಲೂಟಿ ಯಾರು ಮಾಡಿಲ್ಲ. ನಿವೇಶನ ಇಲ್ಲದವರು ಅರ್ಜಿ ಕೊಡಲಿ. ಮೊದಲು ಕೋಟೆಕಾರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಜಾಗವನ್ನು ಪ.ಪಂ. ಹೆಸರಿನಲ್ಲಿ ಮಾಡಿಸಲಾಗುವುದು. ಬಳಿಕ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು ಎಂದರು.
ಇದೇ ವಿಚಾರದಲ್ಲಿ ವ್ಯಾಪಕ ಚರ್ಚೆ ನಡೆದು ಕೋಲಾಹಲ ಸೃಷ್ಟಿಯಾಯಿತು.
ಈ ವೇಳೆ ಸದಸ್ಯ ಅಹ್ಮದ್ ಬಾವ ಅಜ್ಜಿನಡ್ಕ ಮಾತನಾಡಿ, ಮೊದಲು ಕಾರ್ಯಸೂಚಿ ಪಟ್ಟಿಯಲ್ಲಿ ಮಂಡಿಸಿದ ವಿಚಾರ ಚರ್ಚೆ ಮಾಡಿ.ಉಳಿದ ಚರ್ಚೆ ಕೊನೆಗೆ ಮಾಡೋಣ ಎಂದರು.
ಅಂಗವಿಕಲರ ನಿಧಿಯಿಂದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಈ ತಿಂಗಳ ಸಾಮಾನ್ಯ ಸಭೆ ಒಳಗೆ ಮಾಡಬೇಕು ಎಂದು ತಿಳಿಸಿದ್ದೇವೆ.ಅರ್ಹ ಫಲಾನುಭವಿಗಳಿಗೆ ಚೆಕ್ ಇನ್ನೂ ತಲುಪಿಲ್ಲ. ಇದಕ್ಕೆ ಕಾರಣ ಏನು ಎಂದು ಧೀರಜ್ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಸುಜಿತ್ ಮಾಡೂರು ಅವರು ಚೆಕ್ ವಿತರಣೆ ಮಾಡುವಾಗ ಫಲಾನುಭವಿ ಜೀವಂತ ಇದ್ದಾನ, ಇಲ್ಲವೇ ಎಂದು ನೋಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಅವರು ಅಂಗವಿಕಲರ ನಿಧಿಗೆ 44 ಅರ್ಜಿ ಬಂದಿದೆ. ಈ ಪೈಕಿ ಮಂಜೂರಾದ ಫಲಾನುಭವಿಗಳಿಗೆ ಚೆಕ್ ವಿತರಣೆ ಆಗುತ್ತಿದೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಜಿತ್ ಮಾಡೂರು ಅವರು ಕೆಲವು ಮಂದಿ ಫಲಾನುಭವಿಗಳಿಗೆ ಇನ್ನೂ ಚೆಕ್ ಸಿಕ್ಕಿಲ್ಲ. ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಚೆಕ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರು ಒದಗಿಸುವ ಬಗ್ಗೆ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ.ಪಂಪ್ ಆಪರೇಟರ್ ಮಾಡುವವರಿಗೆ ವೇತನ ಸಿಗುತ್ತಿಲ್ಲ. ಗುತ್ತಿಗೆ ವಹಿಸಿಕೊಂಡ ೬ ಮಂದಿ ಸಂಬಳ ಪಡೆದು ಮೌನ ಆಗಿರುತ್ತಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಅಹ್ಮದ್ ಬಾವ ಆಗ್ರಹಿಸಿದರು.
ನಡಾರ್ನಲ್ಲಿ ಏಳು ಮನೆಗಳಿಗೆ ರಸ್ತೆ, ದಾರಿದೀಪ ಇಲ್ಲ. ಬಯಲುರಂಗಭೂಮಿ ಇಲ್ಲ. ಮೂಲಭೂತಸೌಕರ್ಯ ಇಲ್ಲ. ಈ ಸಮಸ್ಯೆ ಇತ್ಯರ್ಥ ಪಡಿಸುವಂತೆ ಪಕ್ಷೇತರ ಸದಸ್ಯ ಹರೀಶ್ ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಸರ್ವೇ ನಡೆಯುತ್ತದೆ.ದಾರಿದೀಪ ರಸ್ತೆ ನಿರ್ಮಾಣಕ್ಕೆ ವ್ಯವಸ್ಥೆ ಆಗುತ್ತಿದೆ ಎಂದರು.
ವಾರ್ಡ್ ನಂ.11 ಮಡ್ಯಾರ್ನಲ್ಲಿ ಕಡಲ್ಕೊರೆತ ದಿಂದ ಮನೆ ಕಳಕೊಂಡ ಸಂತ್ರಸ್ತರಿಗೆ ಮೀಸಲಿಟ್ಟ 1.47 ಜಾಗ ರದ್ದುಗೊಂಡಿದ್ದು, ಆ ಜಾಗವನ್ನು ಪ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ನೀಡಬೇಕು. ಗ್ರಾ.ಪಂ. ಆಡಳಿತ ಇದ್ದ ಸಂದರ್ಭದಲ್ಲಿ ನಿವೇಶನಕ್ಕಾಗಿ ಹಾಕಿದ ಅರ್ಜಿ ರದ್ದು ಮಾಡಿ, ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.