
ಲೋಕಾಯುಕ್ತರಿಂದ 21 ದೂರು ಅರ್ಜಿ ಸ್ವೀಕಾರ
ಬಂಟ್ವಾಳ: ಇಲ್ಲಿನ ತಾಲೂಕು ಪಂಚಾಯತ್ ಎಸ್ಜಿಎಸ್ವೈ ಸಭಾಂಗಣದಲ್ಲಿ ಸೋಮವಾರ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಒಟ್ಟು 21 ದೂರು ಅರ್ಜಿಗಳು ಸ್ವೀಕೃತಗೊಂಡವು.
ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ. ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ತಂಡ ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಿದರು.
ಸರಕಾರಿ ಕಚೇರಿಗಳಲ್ಲಿ ಕೆಲಸಗಳಲ್ಲಾಗುವ ವಿಳಂಬ ಹಾಗೂ ಹಲವು ವಿಷಯಗಳ ಕುರಿತು ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು. ಈ ಅರ್ಜಿಗಳ ಪೈಕಿ ಕೆಲವನ್ನು ಸ್ಥಳದಲ್ಲಿ ವಿಲೇ ಸೂಚಿಸಲಾದರೆ, ಇನ್ನು ಕೆಲ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ವಿಲೇಗಾಗಿ ಕಳುಹಿಸಿಕೊಡಲಾಯಿತು.
ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದು ಪೂರಕ ಸಹಕಾರ ನೀಡಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಚಂದ್ರಶೇಖರ ಕೆ.ಎನ್., ಭಾರತಿ, ಸಿಬ್ಬಂದಿಗಳಾದ ಸುರೇಂದ್ರ, ಮಹೇಶ್, ಗಂಗಣ್ಣ, ವೈಶಾಲಿ, ರಾಜಪ್ಪ, ಪ್ರವೀಣ್, ವಿವೇಕ್, ರುದ್ರೇಗೌಡ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಗ್ರಾಮಸಭೆಗಳಲ್ಲೂ ಮಾಹಿತಿ:
ಬಳಿಕ ಮಾತನಾಡಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಅವರು, ಪ್ರತಿ ತಾಲೂಕು ಕೇಂದ್ರಗಳಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ ನಡೆಸಲಾಗುತ್ತಿದೆ. ಇದಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾದರಷ್ಠೆ ಯಶಸ್ವಿಯಾಗಲು ಸಾಧ್ಯ. ಪ್ರತಿ ಗ್ರಾಮಸಭೆಗಳಲ್ಲಿಯು ಲೋಕಾಯುಕ್ತ ಕಾರ್ಯವಿಧಾನದ ಕುರಿತು ಮಾಹಿತಿ ನೀಡಲು ನಾವು ತಯಾರಿದ್ದು, ಇದಕ್ಕೆ ಮುಂಚಿತವಾಗಿ ಇಲಾಖೆಗಳು ಮಾಹಿತಿ ನೀಡಬೇಕು ಎಂದರು.
ಸಿಗದ ಅನುದಾನ ಮಹಿಳೆಯ ಅಳಲು:
ಸೋಮವಾರ ಸುರಿದ ಜಡಿಮಳೆಯ ನಡುವೆಯು ಸುಮಾರು ೨೧ ದೂರುಗಳು ಲೋಕಾಯುಕ್ತರ ಮುಂದೆ ದಾಖಲಾದವು. ಇದರಲ್ಲಿ ಪ್ರಮುಖವಾಗಿ ಕಳ್ಳಿಗೆ ಗ್ರಾಮದ ಬೆಟ್ಟುವಿನ ಯಮುನಾ ಎಂಬ ಮಹಿಳೆಯ ಮನೆ ಎರಡು ವರ್ಷಗಳ ಹಿಂದೆ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು, ಸರಕಾರದ ನೆರವು ದೊರಕುವುದಾಗಿ ಸ್ಥಳಕ್ಕೆ ಭೇಟಿ ನೀಡಿದವರೆಲ್ಲರೂ ಮನೆ ನಿರ್ಮಾಣಕ್ಕೆ ಸಲಹೆ ನೀಡಿದ್ದರು. ಆದರೆ ನಿರ್ಮಾಣದ ಬಳಿಕ ಸರಕಾರದಿಂದ ಸಿಗಬೇಕಾದ ಅನುದಾನ ಐದು ಲಕ್ಷ ರೂ. ಇನ್ನು ಯಮುನಾ ಅವರ ಕೈ ಸೇರಿಲ್ಲ, ಮನೆ ನಿರ್ಮಿಸಿದ ಗುತ್ತಿಗೆದಾರ ಏಕಾಂಗಿಯಾಗಿರುವ ಯಮುನಾ ಅವರಿಂದ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಅವರು ತನ್ನೆಲ್ಲಾ ಒಡವೆಯನ್ನು ಅಡವಿಟ್ಟು ಗುತ್ತಿಗೆದಾರನಿಗೆ ಹಣವನ್ನು ಸಂದಾಯ ಮಾಡಿದ್ದು, ಆದರೆ ಸರಕಾರದಿಂದ ಸಿಗಬೇಕಾದ ಈ ಅನುದಾನ ಎರಡು ವರ್ಷವಾದರೂ ಸಿಗಲಿಲ್ಲ, ಈ ಬಗ್ಗೆ ಅಹವಾಲು ಅಲಿಸಿದ ಲೋಕಾಯುಕ್ತ ಎಸ್ಪಿಯವರು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ತಹಶೀಲ್ದಾರರು ಯಮುನಾ ಅವರನ್ನು ಮಂಗಳವಾರ ಕಚೇರಿಗೆ ಬಂದು ಭೇಟಿಯಾಗುವಂತೆ ಹೇಳಿ ಕಳಿಸಿಕೊಟ್ಟರು.
ಕೋರೆಯಲ್ಲಿ ಸ್ಪೋಟ, ಮನೆಗೆ ಹಾನಿ:
ಬಿ.ಸಿ.ರೋಡಿಗೆ ಸಮೀಪದ ಪಲ್ಲಮಜಲು ಎಂಬಲ್ಲಿ ಅಕ್ರಮ ಕೋರೆಯೊಂದರ ಸ್ಫೋಟದಿಂದ ಮನೆಗೆ ಹಾನಿಯಾಗಿದ್ದು, ಈ ಬಗ್ಗೆ ಹಲವು ಬಾರಿ ದೂರಿತ್ತರೂ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರೋರ್ವರು ಲೋಕಾಯುಕ್ತರ ಗಮನಕ್ಕೆ ತಂದರು.
ಲೋಕಾಯುಕ್ತ ಸಿಬ್ಬಂದಿಗಳಾದ ಸುರೇಂದ್ರ, ಮಹೇಶ್, ವೈಶಾಲಿ, ರಾಯಪ್ಪಗೋಟಿ, ಗಂಗಣ್ಣಪ್ರವೀಣ್, ವಿವೇಕ್, ರುದ್ರೇಗೌಡ ಸಹಕರಿಸಿದರು.