
ನೇತ್ರಾವತಿ ನದಿ ಮಲೀನ: ಸಭೆಯಿಂದ ಹೊರನಡೆದ ಹಿರಿಯ ಸದಸ್ಯ
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ವಿವಿದೆಡೆಯಲ್ಲಿ ಶೌಚಾಲಯ, ವಸತಿ ಸಮುಚ್ಚಯ, ಮಾಂಸದಂಗಡಿಗಳ ಕೊಳಚೆ ನೀರು, ತ್ಯಾಜ್ಯಗಳು ನೇರವಾಗಿ ನೇತ್ರಾವತಿ ನದಿಗೆ ಸೇರಿ ಮಲೀನವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಜೆಂಡಾದಲ್ಲಿರಿಸದೇ ನಿರ್ಲಕ್ಷ್ಯ ವಹಿಸಿದ ಆಡಳಿತ ಮತ್ತು ಮುಖ್ಯಾಧಿಕಾರಿಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ಸದಸ್ಯ ಎ. ಗೋವಿಂದಪ್ರಭು ಅವರು ಸೋಮವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಿಂದ ಹೊರನಡೆದ ಪ್ರಸಂಗ ನಡೆಯಿತು.
ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಅಜೆಂಡಾ ಮೇಲಿನ ಚರ್ಚೆಯ ವೇಳೆ ವಿಷಯ ಪ್ರಸ್ತಾವಿಸಿದ ಸದಸ್ಯ ಗೋವಿಂದ ಪ್ರಭು ಅವರು ಬಡ್ಡಕಟ್ಟೆ, ಪಾಣೆಮಂಗಳೂರಿನಲ್ಲಿರುವ ಮಾಂಸದಂಗಡಿಯ ಸಹಿತ ವಿವಿಧ 12 ಕಡೆಗಳಲ್ಲಿ ಶೌಚಾಲಯ, ಕೊಳಚೆ ನೀರು, ತ್ಯಾಜ್ಯಗಳು ನೇರ ನೇತ್ರಾವತಿ ನದಿ ನೀರಿನ ಒಡಲು ಸೇರುತ್ತಿದ್ದು, ಇದೇ ಕಲುಷಿತ ನೀರನ್ನು ಮಂಗಳೂರು ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನತೆ ಕುಡಿಯಲುಬಳಕೆ ಮಾಡುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಇಂತಹ ಗಂಭೀರ ವಿಚಾರದ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚೆಗೆ ಅಜೆಂಡಾದಲ್ಲಿ ಪ್ರಸ್ತಾಪಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರ ಮಾಧ್ಯಮಗಳು ಗಮನಸೆಳೆದ ಬೆನ್ನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ನೀರಿನ ಸ್ಯಾಂಪಲ್ ಪಡೆದುಕೊಂಡು ಹೋಗಿದ್ದಲ್ಲದೆ ಪುರಸಭೆಗೆ ಶೋಕಾಸ್ ನೋಟೀಸ್ ಕೂಡ ಜಾರಿ ಮಾಡಿದ್ದಾರೆ, ಮಂಗಳೂರಿನ ಹಿರಿಯ ನಾಗರಿಕರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ ಕೆಲವೊಂದು ಸಲಹೆಯನ್ನು ಪತ್ರಿಕೆಯ ಮೂಲಕ ನೀಡಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲು ಚರ್ಚೆಯಾಗಿದೆ.ಈ ಸಂದರ್ಭ ತಾ.ಪಂ. ಇಒ ಅವರು ನಾಲ್ಕೈದು ಕಡೆಗಳಲ್ಲಿ ಮಾತ್ರ ಕೊಳಚೆ ನೀರು ನದಿ ಸೇರುತ್ತಿದೆ ಎಂದು ಸಚಿವರಿಗೆ ತಪ್ಪು ಮಾಹಿತಿ ನೀಡಿ ಕೈತೊಳೆದುಕೊಂಡಿದ್ದಾರೆ. ಆದರೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಯಾಕೆ ಇಟ್ಟಿಲ್ಲ ಎಂದು ಪ್ರಭು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನಜೀರ್ ಅವರು ಈ ವಿಚಾರ ಗಂಭೀರವಾದದ್ದೇ ಈಗಾಗಲೇ ತಾನುಕೂಡ ಕೆಲ ಜಾಗ ಪರಿಶೀಲಿಸಿದ್ದೆನೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಎಲ್ಲರ ಸಹಕಾರವು ಬೇಕಾಗಿದೆ.ಈ ನಿಟ್ಟಿನಲ್ಲಿ ಸಂಪೂರ್ಣ ಮಾಹಿತಿಯ ಕಡತವನ್ನು ಸಿದ್ದಪಡಿಸಿಕೊಳ್ಳುತ್ತಿದ್ದೆನೆ ಎಂದು ಸಮಾಜಾಯಿಷಿ ನೀಡಿದರು.
ಮುಖ್ಯಾಧಿಕಾರಿಯವರ ಉತ್ತರದಿಂದ ತೃಪ್ತರಾಗದೆ ಮತ್ತು ಅಧ್ಯಕ್ಷರು ಈ ವಿಚಾರದಲ್ಲಿ ನಿರುತ್ತರರಾದ ಹಿನ್ನಲೆಯಲ್ಲಿ ಸದಸ್ಯ ಗೋವಿಂದ ಪ್ರಭು ಅವರು ತಮಗೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಇಚ್ಚಾಶಕ್ತಿ ಇಲ್ಲದಿದ್ದರೆ ನನಗ್ಯಾಕೆ ಉಸಾಬರಿ ನಾನು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ ಸಭೆಯಿಂದ ಏಕಾಂಗಿಯಾಗಿ ಹೊರನಡೆದರು.
ಆಗ ಮುಖ್ಯಾಧಿಕಾರಿಯವರು ಪ್ರಭು ಅವರ ಮನವೊಲಿಸಲು ಯತ್ನಿಸಿದರೂ ಸಫಲವಾಗಲಿಲ್ಲ, ಅದಾಗಲೇ ಅವರು ಕಲಾಪದಿಂದ ಹೊರ ನಡೆದರು.
ಕಳೆದ 40 ವರ್ಷಗಳಿಂದ ಯಾರೊಬ್ಬರೂ ಇದರ ಬಗ್ಗೆ ಗಮನಹರಿಸಲಿಲ್ಲ ಎಂದು ಅಧ್ಯಕ್ಷ ವಾಸುಪೂಜಾರಿ ಹೇಳಿದರೆ, ಕೇವಲ ಪುರಸಭೆಗೆ ಮಾತ್ರವಲ್ಲ ಶಾಸಕರು, ಸಂಸದರು, ತಹಶೀಲ್ದಾರರಿಗೂ ಇದರ ಜವಾಬ್ದಾರಿ ಇದೆ ಎಂದು ಸದಸ್ಯ ರಾಮಕೃಷ್ಣ ಆಳ್ವ ಹೇಳಿದರು.ಪುರಸಭೆ ಎಲ್ಲಾ ಸಮಸ್ಯೆಯನ್ನು ನೋಡಿಕೊಳ್ಳಲು ಓರ್ವ ವಿಶೇಷಾಧಿಕಾರಿಯನ್ನು ನೇಮಿಸುವ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಸದಸ್ಯ ಶರೀಫ್ ಹಾಸ್ಯ ಚಟಾಕಿ ಹಾರಿಸಿದರು. ಸದಸ್ಯ ಹರಿಪ್ರಸಾದ್ ಭಂಡಾರಿ ಬೆಟ್ಟು ಅವರು ಈ ವಿಚಾರದಲ್ಲಿ ಪುರಸಭೆಯ ಬೇಜಾವ್ದಾರಿತನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಶಾಸಕರಿಗೆ ಅಗೌರವ:
ಎಸ್ಎಫ್ಸಿ ನಿಧಿಯ ಅನುದಾನವನ್ನು ಕ್ರಿಯಾಯೋಜನೆ ತಯಾರಿಸುವ ಸಂದರ್ಭ ಶಾಸಕರೊಂದಿಗೆ ಚರ್ಚಿಸಿ ಹಂಚಿಕೆ ಮಾಡಬೇಕೆಂಬ ಸುತ್ತೋಲೆ ಇದ್ದರೂ, ಕಳೆದ ಸಾಮಾನ್ಯ ಸಭೆಯಲ್ಲಿ ಎಸ್ಎಫ್ಸಿ ನಿಧಿ 1 ಕೋ.ರೂ.ವನ್ನು ಶಾಸಕರ ಗಮನಕ್ಕೆ ತಾರದೆ ಆಡಳಿತಪಕ್ಷದ ಸದಸ್ಯರು ಹಂಚಿಕೆ ಮಾಡಿ ಬಳಿಕ ಅದನ್ನು ಸಭೆಯಲ್ಲಿ ಸಹಮತ ಮೂಡಿಲ್ಲ ಎಂದು ನಿರ್ಣಯ ದಾಖಲಿಸಿ ಆಡಳಿತಾತ್ಮಕ ಮಂಜೂರಾತಿಗಾಗಿ ನಗರ ಕೋಶ ಯೋಜನಾ ನಿರ್ದೇಶಕರಿಗೆ ಕಳಿಸಿರುವ ವಿಚಾರ ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್ ಪ್ರಸ್ತಾವಿಸಿದರು.
ಈ ನಿರ್ಣಯದ ಪ್ರತಿ ನೀಡದ ಬಗ್ಗೆಯು ಸದಸ್ಯ ಪ್ರಭು ಆಕ್ರೋಶ ವ್ಯಕ್ತಪಡಿಸಿ, ಶಾಸಕ ಸ್ಥಾನಕ್ಕೆ ಗೌರವವಿಲ್ಲವೇ ಎಂದು ಪ್ರಶ್ನಿಸಿದರೆ, ಈ ಹಿಂದಿನ ಮುಖ್ಯಾಧಿಕಾರಿಯವರ ಉದ್ದಟತನಕ್ಕೆ ಸದಸ್ಯ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರೆ. ಮೇಲಾಧಿಕಾರಿ ದೂರು ಕೊಟ್ಟರೆ ಅವರ ಕೆಲಸಕ್ಕೆ ಕುತ್ತು ಬರಬಹುದು ಎಂದು ಎಚ್ಚರಿಕೆ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿ ಅಧ್ಯಕ್ಷರಾಗಲಿ ಯಾರು ಚಕಾರ ಎತ್ತಲಿಲ್ಲ, ಇದನ್ನು ಪರಿಶೀಲಿಸುವುದಾಗಿ ಮುಖ್ಯಾಧಿಕಾರಿಯವರು ಭರವಸೆ ನೀಡಿದರು.
ಜಿಲ್ಲಾಧಿಕಾರಿ ವಿರುದ್ಧ ಕಿಡಿ:
ಪುರಸಭಾ ವ್ಯಾಪ್ತಿಯ ಎರಡನೇ ಹಂತದ ಕುಡಿಯುವ ನೀರಿನ ಹಾಗೂ ಒಳಚರಂಡಿ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಬಳಿ ಪುರಸಭೆಯ ನಿಯೋಗ ತೆರಳುವ ಕುರಿತು ಏನಾಯಿತು? ಎಂದು ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಹರಿಪ್ರಸಾದ್ ಪ್ರಶ್ನಿಸಿದರು.
ಈ ಕುರಿತು ಏಳು ಸಲ ನಿರಂತರವಾಗಿ ಪ್ರಯತ್ನಿಸಿದ್ದೇನೆ. ಹೊಸ ಮುಖ್ಯಾಧಿಕಾರಿ ಬಂದ ಮೇಲೆಯೂ ಮನವಿ ನೀಡಿದ್ದೆನೆ. ಉಸ್ತುವಾರಿ ಮಂತ್ರಿಗಳಿಗೂ ಮನವಿ ಕೊಟ್ಟು ಕುಡಿಯುವ ನೀರಿನ ವಿತರಣಾ ಅವ್ಯವಸ್ಥೆ ಕುರಿತು ತಿಳಿಸಿದ್ದೆನೆ ಎಂದು ಅಧ್ಯಕ್ಷ ವಾಸುಪೂಜಾರಿ ಸಭೆಯ ಗಮನಕ್ಕೆ ತಂದರು.
ಹಿಂದಿನ ಮುಖ್ಯಾಧಿಕಾರಿ ಈ ವಿಷಯವನ್ನು ನಿರ್ವಹಿಸಿದ ರೀತಿ ಸರಿ ಇಲ್ಲ ಎಂದು ಗೋವಿಂದ ಪ್ರಭು ಹೇಳಿದರು.ಕಳೆದ ಸಭೆಯಲ್ಲಿ ಡಿಸಿ ಬಳಿ ನಿಯೋಗ ಹೋಗಲು ಸಭೆ ನಿರ್ಣಯವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿ. ನಮಗೆ ಬೆಲೆ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತೇವೆ ಎಂದು ಸದಸ್ಯ ಹರಿಪ್ರಸಾದ್ ಹೇಳಿದರು.
ಮುಂದಿನ ಹದಿನೈದು ದಿನಗಳೊಳಗೆ ವ್ಯವಸ್ಥೆ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ ಜಿಲ್ಲಾಧಿಕಾರಿ ಒಂದೋ ಪುರಸಭೆಗೆ ಬಂದು ಸಭೆ ನಡೆಸಬೇಕು, ಇಲ್ಲವೇ ಅವರ ಕಚೇರಿಗಾದರೂ ಕರೆಸಿ ಸಮಸ್ಯೆ ಬಗೆಹರಿಸಬೇಕು, ಇಲ್ಲಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಾನೇ ಧರಣಿ ಕೂರುತ್ತೇನೆ ಎಂದು ಅಧ್ಯಕ್ಷ ವಾಸು ಪೂಜಾರಿ ಗುಡುಗಿದರು.
ಈ ಸಂದರ್ಭ ಮಾತನಾಡಿದ ಸದಸ್ಯ ಶರೀಫ್ ಬಂಟ್ವಾಳದಲ್ಲಿ ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲ ಎಂದು ಕಿಡಿಕಾರಿದರೆ, ಹದಿನೈದು ತಿಂಗಳಾದರೂ ಡಿಸಿ ಬರುವುದಿಲ್ಲ ಎಂದು ಮಹಮ್ಮದ್ ನಂದರಬೆಟ್ಟು ಹೇಳಿದರು, ಡಿಸಿ ಬಂದದ್ದೇ ನೆನಪಿಲ್ಲ ಎಂದು ಉಪಾಧ್ಯಕ್ಷ ಮೊನೀಶ್ ಆಲಿ ಹೇಳಿದರು. ಒಟ್ಟು ಸಭೆಯಲ್ಲಿ ಜಿಲ್ಲಾಧಿಕಾರಿ ವಿರುದ್ಧ ಸದಸ್ಯರು ಕಿಡಿಕಾರಿದರು.
ಕಾನೂನು ರೀತಿಯಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ಹದಿನೈದು ದಿನಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೆನೆ ಎಂದು ಮುಖ್ಯಾಧಿಕಾರಿ ನಝೀರ್ ಹೇಳಿದರು.ಒಟ್ಟಾರೆ ಸಮಸ್ಯೆ ಇತ್ಯರ್ಥವಾಗಬೇಕು ಎಂದು ರಾಮಕೃಷ್ಣ ಆಳ್ವ, ಲುಕ್ಮಾನ್ ಮತ್ತಿತರರು ಹೇಳಿದರು.
ಪುರಸಭಾ ವ್ಯಾಪ್ತಿಯ ಕುದನೆಗುಡ್ಡೆ ಎಂಬಲ್ಲಿ ಮನೆ ನಿವೇಶನಕ್ಕಾಗಿ ಕಾದಿರಿಸಿದ್ದ ಜಮೀನಿನ ಮೂಲಕ ಉಡುಪಿಯಿಂದ ಕಾಸರಗೋಡು ವರೆಗಿನ 400 ಕೆ.ವಿ.ವಿದ್ಯುತ್ ಲೈನ್ ಅಳವಡಿಕೆಗೆ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿ ನಿರ್ಣಯ ಕೈಗೊಳ್ಳಲಾಯಿತು.
ಬೀದಿದೀಪ, ಉದ್ಯಾನವನ ನಿರ್ವಹಣೆ, ಜೆಸಿಬಿ, ಸಕ್ಕಿಂಗ್ ಯಂತ್ರಕ್ಕೆ ಚಾಲಕರ ನೇಮಕ:
ಸಹಿತ 16 ವಿವಿಧ ವಿಚಾರಕ್ಕೆ ಸಂಬಂಧಿಸಿ ವರ್ಷಗಳು ಕಳೆದರೂ ಟೆಂಡರ್ ಕರೆಯದ ಹಿನ್ನಲೆಯಲ್ಲಿ ಇಂಜಿನಿಯರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ 15 ದಿನಗಳಲ್ಲಿ ಸೂಕ್ತ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ನಜೀರ್ ಸಭೆಯ ಗಮನಕ್ಕೆ ತಂದರು.
ಪುರಸಭೆಯಲ್ಲಿ ನಾಗರಿಕರಿಗೆ ಬಾಧಕವಾಗುವ ಯಾವುದೇ ಕಾನೂನು ತರಬೇಡಿ ಎಂದು ಸದಸ್ಯ ಶರೀಫ್ ಸಲಹೆ ನೀಡಿದರು.
ಜೈಪುರಕ್ಕೆ ಪ್ರವಾಸ:
ಸ್ವಚ್ಚ ಭಾರತ್ ಮಿಷನ್ 2.0 ಯೋಜನೆಯಡಿ ಅಧ್ಯಯನ ಹಾಗೂ ಸಾಮಥ್ಯ೯ಭಿವೃದ್ಧಿ ತರಬೇತಿಗಾಗಿ ಜೈಪುರಕ್ಕೆ ಪ್ರವಾಸ ತೆರಳಲು ನಿರ್ಧರಿಸಲಾಯಿತು.
ಭಾವುಕರಾದ ಅಧ್ಯಕ್ಷರು:
ತಾನು ಇಂತಹವರೇ ಅಧಿಕಾರಿಗಳುಬೇಕು,ಬೇಡ ಎಂದು ಹೇಳಿಲ್ಲ, ಒತ್ತಡವು ಹಾಕಿಲ್ಲ, ಇದುವರೆಗೆ ನಯಾ ಪೈಸೆ ಅವ್ಯವಹಾರವು ನಡೆಸಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡುವುದಾಗಿ ವಿಪಕ್ಷ ಸದಸ್ಯರ ಆರೋಪಕ್ಕೆ ಅಧ್ಯಕ್ಷ ವಾಸುಪೂಜಾರಿ ಬಾವುಕರಾಗಿ ಸ್ಪಷ್ಟನೆ ನೀಡಿದರು.
ಪುರಸಭೆಗೆ ಮರ್ಜಿಮಾಡಿ:
ಬಂಟ್ವಾಳ ಸಮಾಜಕಲ್ಯಾಣ ಇಲಾಖೆಯು ತಮ್ಮ ಜವಾಬ್ದಾರಿಯನ್ನು ಪುರಸಭೆಯ ಮೇಲೆ ಹೊರಿಸುವುದಾದರೆ ಆ ಇಲಾಖೆಯನ್ನೇ ಪುರಸಭೆಯೊಂದಿಗೆ ಮರ್ಜಿ ಮಾಡಿ ಎಂದು ಸದಸ್ಯ ಗೋವಿಂದ ಪ್ರಭು ಸಲಹೆ ನೀಡಿದರು.
ಈ ಸಂದರ್ಭ ಬಂಟ್ವಾಳ ತಾ.ಅಂಬೇಡ್ಕರ್ ಭವನಕ್ಕೆ ಪುರಸಭೆಯಿಂದ ಸ್ವಚ್ಚತೆ ಹಾಗೂ ನೀರಿನ ಸೌಲಭ್ಯ ಒದಗಿಸುವುದು ಉಳಿದಂತೆ ಎಲ್ಲಾ ನಿರ್ವಹಣೆಯನ್ನು ಸಮಾಜಕಲ್ಯಾಣ ಇಲಾಖೆಯೇ ವಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಮೊನೀಶ್ ಆಲಿ, ಸಮುದಾಯ ಅಧಿಕಾರಿ ಉಮಾವತಿ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಮೆನೇಜರ್ ರಜಾಕ್ ಕಲಾಪದಲ್ಲಿ ಪಾಲ್ಗೊಂಡರು. ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಲುಕ್ಮಾನ್, ರಾಮಕೃಷದಣ ಆಳ್ವ, ವಿದ್ಯಾವತಿ, ಶಕುಂತಳಾ, ದೇವಕಿ, ಜೆಸಿಂತಾ ಚರ್ಚೆಯಲ್ಲಿ ಪಾಲ್ಗೊಂಡರು.