
ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ನೈಜ ಆರೋಪಿಗಳನ್ನು ಶೀಘ್ರ ಬಂಧಿಸಿ: ಬಿ.ವೈ. ವಿಜಯೇಂದ್ರ
ಬಂಟ್ವಾಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಬರ್ಬರ ಹತ್ಯೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಕೇಂದ್ರದ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು, ಕೊಲೆಗೀಡಾದ ಸುಹಾಸ್ ಕುಟುಂಬಕ್ಕೆ ರಾಜ್ಯ ಸರಕಾರ ಪರಿಹಾರವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಾರಿಂಜ ಸಮೀಪದ ಪುಳಿಮಜಲುವಿನಲ್ಲಿ ಸುಹಾಸ್ ಶೆಟ್ಟಿ ಅವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಶ್ಮೀರದ ಪೆಹಲ್ಗಾಮ್ ದುರ್ಘಟನೆ ಮರೆಯಾಗುವ ಮೊದಲೇ ಮಾನವಕುಲವನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅಮಾನವೀಯವಾಗಿ ಸಹಾಸ್ ಹತ್ಯೆಗೈದಿರುವುದು ಖಂಡನಾರ್ಹವಾಗಿದೆ, ಈ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲಿದೆ ಎಂದು ಅವರು ತಿಳಿಸಿದರು.
ಘಟನೆಯಲ್ಲಿ ಪೊಲೀಸ್ ವೈಪಲ್ಯವು ಮೇಲ್ನೋಟಕ್ಕೆ ಕಾಣುತ್ತಿದ್ದು, ಸುಹಾಸ್ ಜೀವಕ್ಕೆ ಬೆದರಿಕೆ ಇರುವ ವಿಚಾರ ಪೊಲೀಸ್ ಇಲಾಖೆಗೆ ಸ್ಪಷ್ಟವಾಗಿ ಗೊತ್ತಿದ್ದರೂ ಕೂಡ ರಕ್ಷಣೆ ನೀಡದಿರುವುದರಿಂದ ಆತನ ಕೊಲೆಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಗೃಹ ಇಲಾಖೆಯ ವೈಪಲ್ಯ ಮತ್ತು ಕಾಂಗ್ರೆಸ್ ಸರಕಾರದ ತುಷ್ಠೀಕರಣದ ನೀತಿಯಿಂದಾಗಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದ್ದು,
ಕಾಂಗ್ರೆಸ್ ಸರಕಾರದ ಮೇಲೆಯು ಹಿಂದೂಗಳಿಗೆ, ವಿಶ್ವಾಸ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಸುಹಾಸ್ ಶೆಟ್ಟಿ ಅವರ ಅಂತ್ಯ ಸಂಸ್ಕಾರದ ಕಾರ್ಯದಲ್ಲಿ ಭಾಗಿಯಾಗಿ ಕುಟುಂಬಕ್ಕೆ ಸಾಂತ್ವನ, ಧೈರ್ಯ ತುಂಬುವ ಕಾರ್ಯ ಮಾಡಿದ್ದೇವೆ. ಈ ಬಡ ಕುಟುಂಬದ ಜೊತೆ ಬಿಜೆಪಿ ಸದಾ ಇರಲಿದೆ ಎಂಬ ಭರವಸೆಯನ್ನು ನೀಡಿದ್ದೇವೆ ಎಂದರು.
ಸುಹಾಸ್ ಶೆಟ್ಟಿ ಹತ್ಯೆಯಿಂದ ಕುಟುಂಬದ ಆಧಾರ ಸ್ತಂಭವೇ ಕಳಚಿ ಬಿದ್ದಿದೆ. ಹಾಗಾಗಿ ಕುಟುಂಬದ ಅಧಾರಸ್ತಂಭವೇ ಇಲ್ಲದಿರುವ ಈ ಸಮಯದಲ್ಲಿ ಬಿಜೆಪಿ ಪಕ್ಷದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು.
ಘಟನೆಯ ಗಂಭೀರತೆಯನ್ನು ಮತ್ತು ಕುಟುಂಬದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ರಾಜ್ಯ ಸರಕಾರ ಕೂಡ ಪರಿಹಾರವನ್ನು ಘೋಷಿಸಬೇಕು ಮತ್ತು ಘಟನೆಯ ಬಗ್ಗೆ ಎನ್.ಐ.ಎ.ಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.