ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಘೋಷಣೆ: ಅಂತಿಮ ದರ್ಶನಕ್ಕಾಗಿ ನೆರೆದ ಜನಸ್ತೋಮ

ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಘೋಷಣೆ: ಅಂತಿಮ ದರ್ಶನಕ್ಕಾಗಿ ನೆರೆದ ಜನಸ್ತೋಮ


ಬಂಟ್ವಾಳ: ಬಜಪೆಯಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತಿಮ ಸಂಸ್ಕಾರವು ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಪುಳಿಮಜಲುನಲ್ಲಿರುವ ಮೂಲಮನೆಯ ಪಕ್ಕದ ಗದ್ದೆದಲ್ಲಿ ಸುಮಾರು 3.30 ರ ವೇಳೆಗೆ ನೆರವೇರಿತು. ಈ ಸಂದರ್ಭ ಹಿಂದೂಪರ ಸಂಘಟನೆ ಕಾರ್ಯಕರ್ತರ ಘೋಷಣೆ ಮುಗಿಲುಮುಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು, ಶಾಸಕರು, ಹಿಂದೂ ಮುಖಂಡರು ಸೇರಿದ್ದರು.


ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆ ಅಂತಿಮದರ್ಶನಕ್ಕೆ ಜನಸ್ತೋಮವೇ ಹರಿದು ಬಂತು. ಬಂಟ್ವಾಳ ಸಹಿತ ಜಿಲ್ಲೆಯ ವಿವಿಧ ಭಾಗಗಳಿಂದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅಗಮಿಸಿದ್ದರು. ವಿ.ಹಿ.ಪ.ನ ರಾಜ್ಯ ಕಾರ್ಯದರ್ಶಿ ಮಿಲಿಂದ ಪರಾಂಡೆ, ಆರ್‌ಎಸ್‌ಎಸ್ ಮುಖಂಡರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕರಾದ ಹರೀಶ್ ಪೂಂಜಾ, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗಿರಥಿ ಮುರುಳ್ಯ, ಶಾಸಕ ಯಶ್‌ಪಾಲ್ ಸುವರ್ಣ, ವಿ.ಪ.ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಘಪರಿವಾರ ಸಂಘಟನೆಯ ಮುಖಂಡರಾದ ಶರಣ್ ಪಂಪ್‌ವೆಲ್, ಅರುಣ್ ಕುಮಾರ್ ಪುತ್ತಿಲ, ಪುನೀತ್ ಕೆರೆಹಳ್ಳಿ, ಹರಿಕೃಷ್ಣ ಬಂಟ್ವಾಳ, ಕಾವಳ ಮೂಡೂರು ಗ್ರಾ.ಪಂ. ಅಧ್ಯಕ್ಷ ಅಜಿತ್ ಶೆಟ್ಟಿ, ಮುರಳೀಕೃಷ್ಣ ಹಂಸತಡ್ಕ, ಮಹೇಶ್ ಶೆಟ್ಟಿ ತಿಮರೋಡಿ, ಚೆನ್ನಪ್ಪ ಕೋಟ್ಯಾನ್, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ್ ಬಜ, ಡೊಂಬಯ ಅರಳ ಮೊದಲಾದವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆರಂಭದಿಂದ ಕೊನೆಯವರೆಗೂ ಕುಟುಂಬದೊಂದಿಗಿದ್ದು ಅಂತ್ಯಕ್ರಿಯೆಯ ಸಂಪೂರ್ಣ ಉಸ್ತುವಾರಿ ವಹಿಸಿದ್ದರು. ಸುಹಾಸ್ ಮನೆಗೆ ತೆರಳುವ ಅಗಲ ಕಿರಿದಾದ ರಸ್ತೆಯನ್ನು ಬೆಳ್ಳಂಬೆಳಗ್ಗೆಯೇ ಜೆಸಿಬಿ ಮೂಲಕ ಅಗಲುಗೊಳಿಸುವ ಕಾರ್ಯವನ್ನು ಮಾಡಿಸಿದ್ದರು.

ಮೈಸೂರಿನಲ್ಲಿ ಓದಿದ್ದರು:

ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಶೆಟ್ಟಿ ಅವರು ಮೂಲತಃ ಬಂಟ್ವಾಳ ತಾಲೂಕಿನ ಕಾರಿಂಜಬೈಲ್ ಪುಳಿಮಜಲಿನವರು, ತಂದೆ ಮೋಹನ್ ಶೆಟ್ಟಿ ಬಜಪೆಯವರು. ಈ ಹಿಂದೆ ಮೈಸೂರು ಕೆ.ಆರ್. ನಗರದಲ್ಲಿದ್ದು, ಬಳಿಕ ಬಜಪೆಯಲ್ಲಿ ವಾಸವಿದ್ದರು.

ಸುಹಾಸ್ ಶೆಟ್ಟಿ ಪಿಯುಸಿ ವರೆಗೆ ಕೆ.ಆರ್. ನಗರದಲ್ಲಿ ಶಿಕ್ಷಣ ಪಡೆದಿದ್ದರು. ಪುಳಿಮಜಲುವಿನಲ್ಲಿ ಸುಲೋಚನಾ ಶೆಟ್ಟಿ ಅವರಿಗೆ ತೋಟ, ಮನೆ ಇದ್ದು ಪ್ರಸ್ತುತ ಕಿರಿಯ ಪುತ್ರ ಸುಹಾನ್ ಶೆಟ್ಟಿ ಹಾಗೂ ಪತಿ ಜತೆ ಇಲ್ಲಿಯೇ ವಾಸವಾಗಿದ್ದಾರೆ. ಸುಹಾಸ್ ಶೆಟ್ಟಿ ಅವರು ಉಡುಪಿಯಲ್ಲಿ ಉದ್ಯಮ ನಡೆಸುತ್ತಿದ್ದು, ಭಜರಂಗದಳದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಕಳೆದ ರವಿವಾರ ಮನೆಗಾಗಮಿಸಿದ ಸುಹಾಸ್ ಕಾರಿಂಜ ದೇವಸ್ಥಾನಕ್ಕೆ ತೆರಳಿ ರಂಗಪೂಜೆ ಸಲ್ಲಿಸಿದ್ದರು.

ಬಳಿಕ ಬೆಳ್ತಂಗಡಿಯಲ್ಲಿ ನಡೆದ ತಂದೆಯ ತಮ್ಮನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎ.30 ರಂದು ತಂದೆ, ತಾಯಿ ಜತೆಗಿದ್ದ ಅವರು ಬಳಿಕ ಮಂಗಳೂರಿಗೆ ತೆರಳಿದ್ದರು. ಮೇ 1ರಂದು ವಾಪಾಸು ಕಾರಿಂಜಕ್ಕೆ ಬರುವವರಿದ್ದು ಅಷ್ಟರಲ್ಲಿ ದುರಂತ ನಡೆದು ಹೋಗಿದೆ. ಸುಹಾಸ್ ಅವರ ತಾಯಿಯ ಸಹೋದರ ಚಂದ್ರಶೇಖರ ಶೆಟ್ಟಿ ಪುಳಿಮಜಲು ಅವರು ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾಗಿದ್ದುದರಿಂದ ಸುಹಾಸ್ ಅವರು ಕಾರಿಂಜ ದೇವಸ್ಥಾನದ ನಂಟು ಹೊಂದಿದ್ದರು.

ಸುಲೋಚನಾ ಶೆಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸುಹಾಸ್ ಅವರು ಮನೆಯ ಆಧಾರಸ್ಥಂಭವಾಗಿದ್ದರು. ಮಗನಿಗೆ ಜೀವ ಬೆದರಿಕೆ ಇರುವ ಬಗ್ಗೆ ಹೆತ್ತವರಲ್ಲಿ  ಆತಂಕವಿದ್ದು, ಜಾಗರೂಕನಾಗಿರುವಂತೆ ಸುಹಾಸ್‌ಗೆ ತಿಳಿಸಿದ್ದರೆನ್ನಲಾಗಿದೆ. ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಪುಳಿಮಜಲುನಲ್ಲಿ ಸುಲೋಚನಾ ಶೆಟ್ಟಿ ಅವರ ತಾಯಿಯ ಕುಟುಂಬದ ಮನೆಯಿದ್ದು, ವರ್ಷಕ್ಕೊಂದು ಬಾರಿ ಇಲ್ಲಿ ಎಲ್ಲರೂ ಒಟ್ಟಾಗಿ ದೈವದ ಸೇವೆ ಮಾಡುತ್ತಾರೆ. ಇದೇ ಮನೆಯಲ್ಲಿ ಸುಹಾಸ್ ಶೆಟ್ಟಿ ಅವರ ಅಂತಿಮ ಕಾರ್ಯಗಳು ನೆರವೇರಿದ್ದು, ಬಳಿಕ ಸಮೀಪದ ಗದ್ದೆಯಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article