
ಬಂಟ್ವಾಳ: ವ್ಯಾಪಕ ಗಾಳಿ, ಮಳೆ ಅಪಾರ ಹಾನಿ
Friday, May 30, 2025
ಬಂಟ್ಚಾಳ: ಕಳೆದೊಂದು ವಾರದಿಂದ ಸುರಿಯುವ ಜಡಿಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗುರುವಾರ ರಾತ್ರಿಯಿಂದಲೇ ಗಾಳಿಯ ಜೊತೆಗೆ ಮಳೆಯು ವ್ಯಾಪಕವಾಗಿ ಸುರಿದ ಪರಿಣಾಮ ತಾಲೂಕಿನ ಹಲವೆಡೆ ಹಾನಿ ಉಂಟಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ನೇತ್ರಾವತಿ ನದಿಯಲ್ಲೂ ನೀರಿನ ಮಟ್ಟ 5.9 ಮೀ. ಎತ್ತರದಲ್ಲಿ ಹರಿಯುತ್ತಿದೆ.
ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ಎಂಬಲ್ಲಿ ಉಮಾವತಿ ಅವರ ವಾಸದ ಮನೆಗೆ ಪಕ್ಕದ ಗುಡ್ಡ ಜರಿದು ಬಾಗಶಃ ಹಾನಿಯಾಗಿದ್ದು, ಮನೆಯವರನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಾಣಿಲ ಗ್ರಾಮದ ಕೊಂದಲಕೋಡಿ ಗಿರೀಶ ಅವರ ಮನೆಯ ಹಿಂಬದಿಗೆ ಗುಡ್ಡ ಕುಸಿದು ಹಾನಿಯಾಗಿದೆ.
ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನಿವಾಸಿ ಹಾಜಿರ ಅವರ ಮನೆಗೆ ಗುಡ್ಡಕುಸಿದು ಭಾಗಶಃ ಹಾನಿಯಾಗಿದ್ದು,ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಕಂಬಳಬೆಟ್ಟು ಶಾಂತಿ ನಗರ ನಿವಾಸಿ ನೆಬಿಸರವರ ವಾಸದ ಮನೆಗೂ ಭಾಗಶಃ ಹಾನಿಯಾಗಿದೆ.
ಕರೊಪಾಡಿ ಗ್ರಾಮದ ಓಡಿಯೂರು ನಿವಾಸಿ ಹರಿಣಾಕ್ಷಿ ಅವರ ಹಂಚಿನ ಮನೆಯ ಚಾವಣಿ ಕುಸಿದು ತೀವ್ರ ಹಾನಿಯಾಗಿದ್ದು, ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಿಟ್ಲ ಮುಡ್ನೂರಿನ ನೂಜಿ ನಿವಾಸಿ ಹಾಜಿರಾ ಅವರ ಮನೆಯ ಮಣ್ಣಿನ ಗೋಡೆ ಕುಸಿದು ಹಾನಿಯಾಗಿದೆ.
ಅಮ್ಮುಂಜೆ ಗ್ರಾಮದ ಸುಲೋಚನ ಎಂಬವರ ಮನೆಯ ಮೇಲ್ಛಾವಣಿ ಕುಸಿದಿದೆ. ನರಿಕೊಂಬು ಗ್ರಾಮದ ಇಬ್ರಾಹಿಂ ಅವರ ಮನೆಯ ಹಿಂದಿನ ಗುಡ್ಡ ಕುಸಿಯುವ ಭೀತಿ ಇದ್ದು, ಪಿಡಿಒ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯವರನ್ನು ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ಕಡೇಶ್ವಾಲ್ಯ ಗ್ರಾಮದ ಸೇರಾ ತನಿಯಪ್ಪ ರವರ ಮನೆಯ ಪಕ್ಕದ ಗುಡ್ಡೆಯ ಮಣ್ಣು ಕುಸಿದಿದ್ದು ಯಾವುದೇ ಹಾನಿ ಇರುವುದಿಲ್ಲ. ಪುದು ಗ್ರಾಮದ ಹೊಳೆಬದಿ ಎಂಬಲ್ಲಿ ಹಾಜಿರ ಅವರ ಮನೆಗೆ ತಾಗಿದ ಗುಡ್ಡೆ ಹಾಗೂ ಮರ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಮನೆಯವರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ.
ಪುದು ಗ್ರಾಮದ ಜುಮಾದಿ ಗುಡ್ಡೆಯಲ್ಲಿ ಇಬ್ರಾಹಿಂ ಮನೆ ಕುಸಿದಿದ್ದು, ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ.