
‘ಮುಸ್ಲಿಮರೊಂಗಿಗೆ ವ್ಯವಹಾರ ಬೇಡ’: ಗ್ರಾ.ಪಂ. ಅಧ್ಯಕ್ಷೆ ವಿವಾದಿತ ಭಾಷಣ
ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಸೋಮವಾರ ನಡೆದ ಇತ್ತೀಚಿಗೆ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ನುಡಿ ನಮನ ಕಾರ್ಯಕ್ರಮರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಮುಸ್ಲಿಮರೊಂದಿಗೆ ವ್ಯವಹಾರಗಳನ್ನು ನಡೆಸದಂತೆ ಕರೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುರುವಾಯನಕೆರೆಯ ಬಂಟರ ಭವನದಲ್ಲಿ ಸಾಯಿರಾಮ್ ಫ್ರೆಂಡ್ಸ್ ಗುರುವಾಯನಕೆರೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾರತಿ ಶೆಟ್ಟಿ ಈ ವಿವಾದಿತ ಭಾಷಣ ಮಾಡಿದ್ದಾರೆ.
"ಯಾವುದೇ ವಸ್ತುಗಳಿಗೆ ದರ ಸ್ವಲ್ಪ ಜಾಸ್ತಿಯಾದರೂ ನಮ್ಮವರ ಅಂಗಡಿಯಲ್ಲಿಯೇ ಖರೀದಿಸಿ ಅದು ಹಿಂದೂ ಸಮುದಾಯಕ್ಕೆ ಶಕ್ತಿ ತುಂಬುತ್ತದೆ. ಅದರಲ್ಲಿ ಒಂದಿಷ್ಟು ಹಣವಾದರೂ ಅವರು ಸಂಘಟನೆಗಳಿಗೂ ನೀಡುತ್ತಾರೆ. ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದು ಅವರ ಮಾತನ್ನು ಕೇಳಿ ಅಲ್ಲಿ ದರ ಕಡಿಮೆಯಿದೆ ಎಂದು ಅವರ ಅಂಗಡಿಗಳಿಗೆ ಹೋಗಬೇಡಿ ನಮ್ಮವರ ಅಂಗಡಿಯಲ್ಲಿಯೇ ಖರೀದಿಸಿ" ಎಂದವರು ಕರೆ ನೀಡಿದ್ದಾರೆ.
"ಗುರುವಾಯನಕೆರೆ ಪೇಟೆಯಲ್ಲಿ ಅವರ ರಿಕ್ಷಾ ಚಾಲಕರೇ ಹೆಚ್ಚಾಗಿದ್ದಾರೆ. ಬೆಳಗ್ಗಿನ ಜಾವ ಗುರುವಾಯನಕೆರೆಗೆ ಬಂದರೆ ಅಲ್ಲಿ ನಮ್ಮ ರಿಕ್ಷಾ ಚಾಲಕರು ಚಲಾಯಿಸುವ ರಿಕ್ಷಾಗಳೇ ಇರುವುದಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹಿಂದೂ ರಿಕ್ಷಾ ಚಾಲಕರು ಒಬ್ಬರಾದರೂ ಬೆಳಗ್ಗಿನ ಜಾವ ಅಲ್ಲಿರಬೇಕು, ಹೀಗೆಲ್ಲ ಹಿಂದೂಗಳನ್ನು ಜಾಗೃತರಾಗಿಸುವ ಮೂಲಕ ಅವರನ್ನು ಕಟ್ಟಿ ಹಾಕಬಹುದೇ ಹೊರತು ಇನ್ಯಾವ ರೀತಿಯಲ್ಲೂ ಅಲ್ಲ" ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯಮಕೆರೆ ಹಾಗೂ ವಿಶ್ವಹಿಂದೂ ಪರಿಷತ್ತಿನ ಮುಖಂಡ ನವೀನ್ ನೆರಿಯ ಮೊದಲಾದವರಿದ್ದರು.
ದೂರು:
ಭಾರತಿ ಶೆಟ್ಟಿ ಅವರು ಮುಸ್ಲಿಂ ಆಟೋ ಚಾಲಕರ ಬಗ್ಗೆ ಹಿಂದೂ-ಮುಸ್ಲಿಂ ಎಂದು ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ಸೋಶಿಯಲ್ ಟ್ರೇಡ್ ಯೂನಿಯನ್ ಗುರುವಾಯನಕೆರೆ ಅಧ್ಯಕ್ಷ ಅಬ್ದುಲ್ ರಹಮಾನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.