
ಕಂದಾವರ ಗ್ರಾ.ಪಂ.ನಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಯತ್ನ: ಡಾ. ವೈ. ಭರತ್ ಶೆಟ್ಟಿ
Tuesday, May 13, 2025
ಕಂದಾವರ: ಕಂದಾವರ ಗ್ರಾಮ ಪಂಚಾಯತ್ ಹಲವಾರು ಅಭಿವೃದ್ಧಿಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ದಿವ್ಯಾಂಗದವರನ್ನು ಗುರುತಿಸಿ 27 ಮಂದಿಗೆ ಚೆಕ್ ವಿತರಣೆ, 40 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಗುರುತಿಸಿ, ಅವರಿಗೆ ನೀರಿನ್ನು ಶೇಕರಣೆಗೆ ನೀರಿನ ಸಿಂಟೆಕ್ಸ್ ಟ್ಯಾಂಕ್ಗಳನ್ನು ಕೊಡುವ ಕಾರ್ಯಕ್ರಮ ಪಂಚಾಯತ್ನಿಂದಾಗುತ್ತಿದೆ. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಯತ್ನವಾಗುತ್ತಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಅವರು ಕಂದಾವರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಮಂಗಳವಾರದಂದು ನಡೆದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 2024-25ನೇ ಶೇ.25 ರ (ಎಸ್ಸಿಎಸ್ಟಿ) ಅನುದಾನದಲ್ಲಿ 40 ಮಂದಿಗೆ ನೀರಿನ ಸಿಂಟೆಕ್ಸ್ ಟ್ಯಾಂಕ್, 27 ಮಂದಿ ಅಂಗವಿಕಲರಿಗೆ ಚೆಕ್ ಹಾಗೂ ಹಕ್ಕುಪತ್ರ ಮನೆನಿವೇಶನ ಹಂಚಿಕೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಾನು ಮೊದಲ ಅವಧಿಯ ಶಾಸಕನಾಗಿದ್ದಾಗ 183 ಹಕ್ಕುಪತ್ರಗಳನ್ನು ನೀಡಲಾಗಿತ್ತು. ಹಕ್ಕುಪತ್ರ ಕೊಟ್ಟ ಜಾಗವನ್ನು ಮನೆ ಕಟ್ಟಲು ಯೋಗ್ಯವಾಗಿ ಸಮತಟ್ಟು ಮಾಡಿ, ಒಳ್ಳೆಯ ಮನೆ ನಿವೇಶನವನ್ನು ನೀಡಬೇಕಾಗಿರುವುದರಿಂದ ಕಳೆದ ಬಾರಿ 16 ಲಕ್ಷ ರೂ. ಅನುದಾನದ ಮೂಲಕ ರಸ್ತೆಯನ್ನು ಮಾಡಲಾಗಿತ್ತು. ಈಗ 86 ನಿವೇಶನ ಕೊಡಲು ಸಿದ್ದವಾಗಿದೆ. ಅಲ್ಲಿ ನಿರಂತರವಾಗಿ ಕಾರ್ಯ ನಡೆಯುತ್ತಿದ್ದು, ಉಳಿದ ನಿವೇಶನಗಳು ಕೂಡ ಅದಷ್ಟು ಬೇಗ ನೀಡಲಾಗುವುದು ಎಂದರು.
ಚೀಟು ಎತ್ತುವ ಮೂಲಕ ಪಾರದರ್ಶಕ ಮನೆ ನಿವೇಶನ ಹಂಚಿಕೆ ಹಕ್ಕುಪತ್ರ ನೀಡಿದವರಿಗೆ 183 ನಿವೇಶನವಿರುವ ಜಾಗದಲ್ಲಿ ನಿವೇಶನ ಯಾರಿಗೆ ಯಾವ ಸೈಟು ನೀಡಲು, ಚೀಟಿಯಲ್ಲಿ ನಂಬರ್ನ್ನು ನೀಡಲಾಗಿದ್ದು ಅದನ್ನು ಲಾಟರಿ ಚೀಟಿಯನ್ನು ಅವರೇ ತೆಗೆಯುವ ಮೂಲಕ ಚೀಟಿಯಲ್ಲಿ ಬಂದ ಸಂಖ್ಯೆ ಯಂತೆ ನೀಡಲಾಗುತ್ತದೆ. ಚೀಟಿಗೆ ಸಂಖ್ಯೆಯ ಅಧಾರದಲ್ಲಿ ಆ ಜಾಗದಲ್ಲಿ ಮನೆ ಕಟ್ಟಬಹುದು ಎಂದರು.
ಪಂಚಾಯತ್ ಹಾಗೂ ನನ್ನ ವತಿಯಿಂದ ಸ್ಥಳೀಯರಿಗೆ ಸಹಾಯವಾಗಬೇಕು. ಅವರ ಮನೆ ಕಟ್ಟುವ ಕನಸು ಸಕಾರ ಮಾಡಲು ಈ ಕಾರ್ಯ ಮಾಡಲಾಗಿದೆ. ರಾಜಕೀಯ, ಧರ್ಮ, ಜಾತಿಯನ್ನು ಬದಿಗಿಟ್ಟು ಗ್ರಾಮ ಶ್ರೇಯಸ್ಸು, ಜನರಿಗೆ ಒಳ್ಳೆಯದಾಗಬೇಕು ಅವರ ಮನೆಕಟ್ಟುವ ಕಸನು ನನಸಾಗಬೇಕೆಂಬ ಪ್ರಯತ್ನ ನಾವು ಮಾಡುತ್ತಿದ್ದೇವೆ. ನಿಮ್ಮ ಸಹಕಾರವೂ ಮುಖ್ಯವಾಗಿದೆ. ನಿಮಗೆ ಸಂಪೂರ್ಣ ಸಹಕಾರ ಪಂಚಾಯತ್ನಿಂದ ಸಿಗಲಿದೆ. ಸಮಸ್ಯೆ ಬಾರದ ರೀತಿಯಿಂದ ಸುಲಭವಾಗಿ ಮನೆಕಟ್ಟಲು ಪಂಚಾಯತ್ ಗೆ ಸೂಚನೆ ನೀಡಿದ್ದೇನೆ. ಮನೆನಿವೇಶನ ಕೊಟ್ಟು, ಮನೆ ಕಟ್ಟಿ ಮುಗಿಸುವ ತನಕ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಉದಯ ರಾವ್, ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು.