
ಆಕಸ್ಮಿಕವಾಗಿ ಕತ್ತಿ ಮೇಲೆ ಬಿದ್ದು ಬಾಲಕ ಸಾವು
Thursday, May 1, 2025
ಕಾಸರಗೋಡು: ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಆಕಸ್ಮಿಕವಾಗಿ ಕತ್ತಿ ಮೇಲೆ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ವಿದ್ಯಾನಗರ ಠಾಣಾ ವ್ಯಾಪ್ತಿಯ ಪಾಡಿ ಬೆಳ್ಳೂರಡ್ಕ ಎಂಬಲ್ಲಿ ನಡೆದಿದೆ.
ಬದಿಯಡ್ಕ ಪಿಲಾಂಕಟ್ಟೆಯ ಅಮೀರ್ ಸುಲೈಕಾ ದಂಪತಿ ಪುತ್ರ ಹುಸೈನ್ ಶಹಬಾಸ್ ಮೃತಪಟ್ಟವನು. ತಾಯಿ ಜೊತೆ ಆಲಂಪಾಡಿ ಬೆಳ್ಳೂರಡ್ಕದಲ್ಲಿರುವ ಅಜ್ಜಿ ಮನೆಗೆ ಹುಸೈನ್ ಬಂದಿದ್ದನು. ತಾಯಿ ಅಡುಗೆಕೋಣೆ ಹೊರಗಡೆ ಮುಟ್ಟು ಕತ್ತಿಯಲ್ಲಿ ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಆಟವಾಡುತ್ತಿದ್ದ ಹುಸೈನ್ ಓಡಿ ಕೊಂಡುಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ಮುಟ್ಟು ಕತ್ತಿಯ ಮೇಲೆ ಬಿದ್ದಿದ್ದಾನೆ.
ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಎದೆಗೆ ಉಂಟಾದ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವಳಿ ಮಕ್ಕಳಲ್ಲಿ ಹುಸೈನ್ ಒಬ್ಬನಾಗಿದ್ದಾನೆ. ವಿದ್ಯಾನಗರ ಠಾಣಾ ಪೋಲಿಸರು ಅಸಹಜ ಸಾವು ಪ್ರಕರಣ ದಾಖಲಾಗಿದೆ.