
ಪಿಎಫ್ಐ ಸಂಘಟನೆ ಕೈವಾಡ-ಸುಹಾಸ್ ಕೊಲೆ ಪ್ರಕರಣ ಎನ್ ಐ ಎ ಗೆ ಒಪ್ಪಿಸಿ: ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯ
Friday, May 16, 2025
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾ ಸ್ ಶೆಟ್ಟಿ ಹತ್ಯೆಯ ಸಂಚಿನಲ್ಲಿ ನಿಷೇಧಿತ ಉಗ್ರ ಚಟುವಟಿಕೆಯಲ್ಲಿದ್ದ ಕೆ ಎಫ್ ಡಿ, ಪಿಎಫ್ ಐ ಕೈವಾಡ ಬಯಲಾಗಿದೆ.ಇನ್ನಷ್ಟು ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಮುನ್ನ ಸುಹಾಸ್ ಶೆಟ್ಟಿ ಕೊಲೆಯ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರೀಯ ತನಿಕಾ ಸಂಸ್ಥೆಗೆ ವಹಿಸಬೇಕು.ಈ ಮೂಲಕ ರಾಜ್ಯದಲ್ಲಿ ಮತ್ತಷ್ಟು ಹತ್ಯೆಗಳನ್ನು ತಡೆಯಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಇದೀಗ ಬಂದಧಿತನಾಗಿರುವ ನೌಶಾದ್ ಕೆ ಎಫ್ ಡಿ ಸಂಘಟನೆಯ ಸಕ್ರಿಯ ಸದಸ್ಯ. ಹಿಂದೂ ಸಂಘಟನೆಯ ಪ್ರಮುಖ ಕಾರ್ಯಕರ್ತ ಸುಖಾನಂದ ಶೆಟ್ಟಿ ಅವರನ್ನು ಹತ್ಯೆ ಮಾಡಿರುವುದು ಇದೇ ಕೆ ಎಫ್ ಡಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನೌಶಾದ್ ಮತ್ತು ಸಹಚರರಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮತ್ತೆ ಇಬ್ಬರು ಪ್ರಮುಖರ ಮನೆ ಹಾಗೂ ಅವರ ಮೇಲೆ ದಾಳಿಯನ್ನು ನಡೆಸಿದ್ದಾನೆ. ಈತನಿಗೆ ನಿಷೇಧಿತ ಪಿಎಫ್ ಐ ಸಂಘಟನೆ ಬೆಂಗಾವಲಾಗಿ ನಿಂತಿದ್ದು ಅಪರಾಧ ಪ್ರಕರಣಗಳಲ್ಲಿ ಸಂಘಟನೆಯ ಪಾತ್ರ ಇದೆ ಎಂಬುದನ್ನು ಸಾಬೀತು ಪಡಿಸಿದೆ.
ಈ ಸಂಘಟನೆಗಳನ್ನು ನಿಷೇಧದ ಬಳಿಕವೂ ಅಕ್ರಮ ,ದೇಶದ್ರೋಹಿ ಚಟುವಟಿಕೆಯಲ್ಲಿದ್ದಂತೆ ಕಂಡು ಬರುತ್ತಿದ್ದು , ಹಿಂದೂ ಕಾರ್ಯಕರ್ತರ ಮೇಲೆ ಇನ್ನಷ್ಟು ದಾಳಿಗಳಾಗಿ ಹತ್ಯೆಯತ್ನ ಮಾಡುವ ಮುನ್ನ ಆರೋಪಿಗಳ ಇಡೀ ತಂಡವನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಕೇಂದ್ರದ ಎನ್ಐಎ ಸೂಕ್ತವಾಗಿದೆ ಎಂದು ಒತ್ತಾಯಿಸಿದ್ದಾರೆ.