
ಅಮಾಯಕನ ಹತ್ಯೆ ಖಂಡನೀಯ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಅಮಾಯಕನ ಹತ್ಯೆ ನಡೆದಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಹ ಘಟನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡುವ ಅಗತ್ಯ ಇದೆ. ಇಲ್ಲಿ ಯಾವುದೇ ಧರ್ಮದವರು ಕಾನೂನು ಕೈಗೆತ್ತಿಕೊಳ್ಳವುದು ಸಮರ್ಥನೀಯ ಕ್ರಮವಲ್ಲ. ಇಂತಹ ಅಪರಾಧ ನಡೆಯುವಾಗ ಒಂದು ಧರ್ಮದವರು ಇನೊಂದು ಧರ್ಮವನ್ನು ದೂಷಿಸುವುದೂ ಕೂಡ ಸರಿಯಲ್ಲ.
ಅಪರಾಧ ನಡೆಸುವವರೂ ಎಂದಿಗೂ ಸಮಾಜಘಾತುಕರು. ಎಲ್ಲಾ ಧರ್ಮದವರು ಒಟ್ಟಾಗಿ ಇಂತಹ ಸಮಾಜಘಾತುಕ ಕೆಲಸ ಮಾಡುವವರನ್ನು ಈ ಸಮಾಜದಿಂದ ಹೊರಗಿಡುವ ಕೆಲಸ ಮಾಡಬೇಕಾಗಿದೆ. ಜನನಾಯಕರೆನಿಸಿಕೊಂಡವರು ತಾವು ಆಡುವ ಮಾತುಗಳಿಂದ ಸಮಾಜಕ್ಕೆ ಎಂತಹ ಪರಿಣಾಮ ಬೀರುತ್ತೇ ಎನ್ನುವುದನ್ನೂ ಯೋಚಿಸಬೇಕು.
ಸಮಾಜಘಾತುಕ ಶಕ್ತಿಗಳಿಗೆ ಪ್ರಚೋದನೆ ನೀಡಿವವರು ಇಂದು ಸಮಾಜಕ್ಕೆ ಎಂತಹ ಸಂದೇಶ ನೀಡುತ್ತಿದ್ದೀರಿ ಎಂಬುದನ್ನು ಯೋಚಿಸಬೇಕಿದೆ. ಪ್ರಚೋದನಕಾರಿ ಭಾಷಣ ಮಾಡುವವರ ಮನೆಮಂದಿ ಅಥವಾ ಹೆತ್ತವರಿಗೆ ಇಂತಹ ಪರಿಸ್ಥಿತಿ ಬಂದರೆ ನೀವು ಏನು ಮಾಡಬಹುದು ಎಂಬುದನ್ನೂ ಕೂಡ ಯೋಚಿಸಲಿ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಯಾವೂದೇ ವದಂತಿಗಳಿಗೆ ಕಿವಿಗೊಡದೆ, ತಾಳ್ಮೆಯಿಂದ ವಸುದೈವ ಕುಟುಂಬಕಂ ಎಂಬಂತೆ ಎಲ್ಲ ಧರ್ಮದವರು ಒಂದೇ ಕುಟುಂಬದವರಂತೆ ಬದುಕುಲು ಪ್ರಯತ್ನಿಸೋಣ. ಘಟನೆಯಿಂದ ಮೃತಪಟ್ಟ ರಹೀಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕುಟುಂಬ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.