
ಮುನೀರ್ ಕಾಟಿಪಳ್ಳ ಮೇಲೆ ಎಫ್ಐಆರ್: ಸಿಪಿಐ ಖಂಡನೆ
ಮಂಗಳೂರು: ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹಾಗೂ ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ಮೇಲೆ ಎಫ್ಐಆರ್ ಹಾಕಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ಖಂಡಿಸಿದೆ.
ಕೆಲ ದಿನಗಳ ಹಿಂದೆ ಪುತ್ತೂರು ಆಸ್ಪತ್ರೆಯಲ್ಲಿ ಮುಸ್ಲಿಂ ಕುಟುಂಬ ಹಾಗೂ ವೈದ್ಯರ ನಡುವೆ ನಡೆದ ವಾಗ್ವಾದ ಮತ್ತು ಅಲ್ಲಿನ ಐಯಂಎ ಹಾಗೂ ಸಂಘಪರಿವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಈ ಘಟನೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಐಯಂಎ ಪುತ್ತೂರು ಘಟಕದ ಕಾರ್ಯದರ್ಶಿ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದಾಗ ಅದರಲ್ಲಿ ಸತ್ಯಾಂಶ ಇಲ್ಲವೆಂಬ ಹಿಂಬರಹದೊಂದಿಗೆ ಕೇಸನ್ನು ಮುಗಿಸಲಾಗಿತ್ತು. ನಂತರದಲ್ಲಿ ವೈದ್ಯರು ಖಾಸಗಿ ದೂರು ನೀಡಿ ಅದರ ಆಧಾರದ ಮೇಲೆ ಎಫ್ಐಆರ್ ಹಾಕಲಾಗಿದೆ ಎಂದು ವರದಿಯಾಗಿದೆ.
ಇತೀಚ್ಚೆಗಿನ ದಿನಗಳಲ್ಲಿ ಎಡ ಪಕ್ಷ ಹಾಗೂ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕ್ರಮಗಳ ಮೇಲೆ ಎಫ್ಐಆರ್ ದಾಖಲಿಸುವ ಪ್ರವೃತ್ತಿ ಸಾಮಾನ್ಯವಾಗಿಬಿಟ್ಟಿದೆ. ಈ ಪ್ರವೃತ್ತಿ ದುರುದ್ಧೇಶಪೂರಿತವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಭಾವಿಸುತ್ತದೆ ಹಾಗೂ ಇದನ್ನು ಖಂಡಿಸುತ್ತದೆ.
ಈ ಎಫ್ಐಆರ್ ಮಾತ್ರವಲ್ಲದೆ ಹಿಂದೆ ಹಾಕಿರುವ ಎಲ್ಲಾ ಎಫ್ಐಆರ್ಗಳನ್ನು ಹಿಂಪಡೆಯಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ. ಇದೆಲ್ಲದರ ವಿರೋಧವಾಗಿ ನಡೆಯುವ ಹೋರಾಟಗಳಲ್ಲಿ ಸಿಪಿಐ ಭಾಗವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.