ಅಭಿವೃದ್ಧಿಯ ವಿಚಾರದಲ್ಲಿ ಯಾರೂ ರಾಜಕೀಯ ಸಲ್ಲದು: ಸಿಎಂ

ಅಭಿವೃದ್ಧಿಯ ವಿಚಾರದಲ್ಲಿ ಯಾರೂ ರಾಜಕೀಯ ಸಲ್ಲದು: ಸಿಎಂ


ಮಂಗಳೂರು: ರಾಜಕೀಯ ವಿಚಾರದಲ್ಲಿ ರಾಜಕಾರಣ ಮಾಡೋಣ ಆದರೆ, ಅಭಿವೃದ್ಧಿಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ದೂರುವ ಅವಕಾಶ ಇದೆ. ಇಲ್ಲಿ ಎಲ್ಲರೂ ಸ್ವತಂತ್ರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ನಗರದ ಪಡೀಲ್‌ನಲ್ಲಿ ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ‘ಪ್ರಜಾಸೌಧ’ವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವಂತಹ ಕೆಲಸ ಆಗಬೇಕು. ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಬೇಕು. ಯಾವುದೇ ಕಾರಣಕ್ಕೂ ದ್ವೇಷಿಸಬಾರದು, ಎಲ್ಲರನ್ನೂ ಪ್ರೀತಿಸಬೇಕು. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ಕೆಲಸ ಆಗಬೇಕು ಎಂದರು.

1949 ನ.25ರಂದೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಐತಿಹಾಸಿಕ ಭಾಷಣ ಮಾಡಿ, ದೇಶದಲ್ಲಿ ಅನೇಕ ಜಾತಿ, ಧರ್ಮ, ಭಾಷೆಗಳು ಇವೆ. ಆದರೆ ಇಲ್ಲಿ ಸಮಾನ ಅವಕಾಶ ಸಿಗದ ಕಾರಣ ನಾವು ಸಮಾಜದಲ್ಲಿ ಅಸಮಾನತೆ ಕಾಣುತ್ತಿದ್ದೇವೆ. 1950 ಜ.26 ರಂದು ಭಾರತ ವೈವಿದ್ಯತೆಗೆ ಕಾಲಿಡುತ್ತಿದ್ದೆವೆ. ಸಾಮಾಜಿಕ, ಆರ್ಥಿಕ, ಅಸಮಾನತೆಯನ್ನು ಹೋಗಲಾಡಿಸುವುದು ಸಂವಿಧಾನದ ಮೊದಲ ಹೆಜ್ಜೆ ಎಂದು ಹೇಳಿದ್ದಾರೆ. ಆದರೆ ಸಂವಿಧಾನ ಬಂದು 75 ವರ್ಷ ಕಳೆದರು ನಮ್ಮಲ್ಲಿ ಇಂದಿಗೂ ಅಸಮಾನತೆ, ಅಸ್ಪೃಶ್ಯತೆ ಎದ್ದು ಕಾಣುತ್ತಿದೆ ಎಂದ ಅವರು, ಸಂವಿಧಾನದ ಮೇಲೆ ನಂಬಿಕೆ, ಭರವಸೆ ಇದ್ದವರ ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಿ ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂದು ತಿಳಿಸಿದರು.

ಜನರಿಗಾಗಿ ‘ಪ್ರಜಾಸೌಧ’:

ನೂತನ ಜಿಲ್ಲಾಧಿಕಾರಿ ಕಚೇರಿಗೆ ಮಿನಿ ವಿಧಾನಸೌಧ ಎಂದು ಹೆಸರಿಡಬಹುದಿತ್ತು. ಆದರೆ ವಿಧಾನಸೌಧ ಇರುವುದು ಕಾನೂನು ರಚನೆ ಮಾಡಲು ವಿಧಾನಸೌಧ ಪ್ರಜೆಗಳ ಕೆಲಸಕ್ಕಾಗಿ ಅಲ್ಲ. ಆದುದರಿದಲೇ ನೂತನ ಜಿಲ್ಲಾಧಿಕಾರಿ ಕಚೇರಿಗೆ ‘ಪ್ರಜಾಸೌಧ’ ಎಂದು ಹೆಸರಿಡಲಾಗಿದೆ. ಜಿಲ್ಲೆಯ ಜನರು ಇಲ್ಲಿಗೆ ಅನೇಕ ನಿರೀಕ್ಷೆಗಳನ್ನು ಇಟ್ಟು ಬರುತ್ತಾರೆ. ಅನೇಕ ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳು ಇಲ್ಲಿ ಬಗೆಹರಿಯುತ್ತವೆ ಎಂಬ ನಂಬಿಕೆಯಿಂದ ಬರುತ್ತಾರೆ. ಅದನ್ನು ಅಧಿಕಾರಿಗಳು ‘ಹುಸಿ’ ಮಾಡಬಾರದು, ಪ್ರಜೆಗಳೇ ನಮ್ಮ ಮಾಲಕರು, ಅವರೇ ನಮ್ಮ ಟ್ರಸ್ಟಿಗಳು. ಇದು ಸಿದ್ದರಾಮಯ್ಯರ ಸರ್ಕಾರವಲ್ಲ ಜನರು ಆಧಿಕಾರ ನಡೆಸಿ ಎಂದು ಆರಿಸಿ ಕಳುಹಿಸಿದ್ದಾರೆ. ನಾವು ಅವರ ಸೇವೆ ಮಾಡಬೇಕು ಎಂದು ಹೇಳಿದರು.

ಸಮಾಜದ ಅಸ್ಪೃಶ್ಯತೆ ಹೋಗಲಾಡಿಸಲು 5 ಗ್ಯಾರಂಟಿ:

ಸಂವಿಧಾನ ಬಂದು 75 ವರ್ಷ ಕಳೆದರೂ ಇನ್ನೂ ನಮ್ಮ ಸಮಾಜದಲ್ಲಿ ಅಸ್ಪೃತ್ಯತೆ ಹೋಗಿಲ್ಲ. ಅದನ್ನು ಹೋಗಲಾಡಿಸುವುದ್ದಕ್ಕಾಗಿಯೇ ಈ ಹಿಂದೆ ಅನೇಕ ಯೋಜನೆಗಳನ್ನು ತಂದಿದ್ದೆ. ಈಗ ಮತ್ತೆ 5 ಗ್ಯಾರಂಟಿಗಳನ್ನು ತರುವ ಮೂಲಕ ಸಮಾಜದ ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗಿದೆ ಎಂದರು.

ಗ್ಯಾರಂಟಿಗೆ 50 ಸಾವಿರ ಕೋಟಿಗೂ ಹೆಚ್ಚು ಖರ್ಚು:

ಪ್ರತೀ ವರ್ಷ 5 ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿಗೂ ಹೆಚ್ಚು ಖರ್ಚು ಆಗುತ್ತಿದ್ದು, ಈ ವರ್ಷದ ಬಜೆಟ್‌ನ್ನು ೪ ಲಕ್ಷದ ೯ ಸಾವಿರ ಕೋಟಿಗೆ ನಿಗಧಿ ಪಡಿಸಿದ್ದೇವೆ. ಕಳೆದ ವರ್ಷಕ್ಕಿಂತ ಈ ವರ್ಷ 38 ಸಾವಿರ ಕೋಟಿ ಹೆಚ್ಚಿಗೆ ಬಜೆಟ್ ದೊಡ್ಡದಾಗಿದೆ ಎಂದ ಅವರು ಕೆಲವರು ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳು ಮಾಡಲು ದುಡ್ಡು ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಕಳೆದ ವರ್ಷ ಬಂಡವಾಳ ವೆಚ್ಚ 51 ಸಾವಿರ ಕೋಟಿ ಇದ್ದು, ಈ ವರ್ಷ 83 ಸಾವಿರಕ್ಕೆ ಹೆಚ್ಚಾಗಿದೆ. ಕೇವಲ ಒಂದು ವರ್ಷದಲ್ಲಿ 23 ಸಾವಿರ ಕೋಟಿ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಎಂಬುವುದರಲ್ಲಿ ಹುರುಳಿಲ್ಲ ಎಂದು ಹೇಳಿದರು.

ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನು ಮಾಡೋಣ:

ತುಳು ಭಾಷೆಯನ್ನು ಮಾತನಾಡುವವರು ಕೂಡ ಕನ್ನಡಿಗರು. ನಾವು ಕರ್ನಾಟಕದಲ್ಲಿ ಇದ್ದೇವೆ. ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನು ಮಾಡೋಣ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಅದರೊಂದಿಗೆ ತುಳು ಭಾಷೆಗೆ ಗೌರವ ನೀಡುವ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

5 ಕೆ.ಜಿ. ಉಚಿತ ಅಕ್ಕಿ ನೀಡಿದವನು ನಾನು:

ದೇಶದಲ್ಲಿಯೇ ಮೊದಲು 5 ಕೆ.ಜಿ. ಉಚಿತವಾಗಿ ಅಕ್ಕಿ ನೀಡಿದವನು ನಾನು ಅದಕ್ಕು ಮೊದಲು 5, 3, 2 ರೂ. ಅಕ್ಕಿಗೆ ತೆಗೆದುಕೊಳ್ಳುತ್ತಿದ್ದರು. ನಾನು ಮೊದಲಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿಯನ್ನು ನೀಡಿದೆ. ಕೋವಿಡ್ ಬಂದ ನಂತರ ಕೇಂದ್ರ ಸರ್ಕಾರ ಉಚಿತವಾಗಿ 5 ಕೆ.ಜಿ. ಅಕ್ಕಿಯನ್ನು ನೀಡಲು ಪ್ರಾರಂಭಿಸಿತು ಎಂದು ಮುಖ್ಯಮಂತ್ರಿಗಳು ಹೇಳಿದರು.

ಗೋಡಂಬಿ ಮಾರಿ ಶಾಸಕರಾಗಿದ್ದಾರೆ:

ಶಾಸಕ ವೇದವ್ಯಾಸ ಕಾಮತ್ ಅವರು ಗೋಡಂಬಿ ಬೆಳೆಯುವುದಿಲ್ಲ. ಅವರು ಗೋಡಂಬಿಯನ್ನು ಮಾರುತ್ತಾರೆ. ಅವರು ಗೋಡಂಬಿಯನ್ನು ಮಾರಿ ಶಾಸಕರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article