
ಅಣೆಕಟ್ಟುಗಳಿಗೆ ಹಾಕಿದ ಹಲಗೆಗಳು ಪೂರ್ಣವಾಗಿ ತೆಗೆಯದೆ ಪಾಪನಾಶಿನಿ ನದಿ ತೀರದಲ್ಲಿ ನೆರೆ ಹಾವಳಿ
Monday, May 26, 2025
ನೀರಾವರಿ ಇಲಾಖೆಯ ನಿರ್ಲಕ್ಷದಿಂದ ಕೃಷಿ ಭೂಮಿಗೆ ನುಗ್ಗಿದ ನೀರು
ಶಿರ್ವ: ನಿರಾವರಿ ಇಲಾಖೆಯ ನಿರ್ಲಕ್ಷದಿಂದ ಶಿರ್ವ-ಪಂಜಿಮಾರು-ಬೆಳ್ಳೆ ಭಾಗದಲ್ಲಿ ಹರಿಯುತ್ತಿರುವ ಪಾಪನಾಶಿನಿ ನದಿಗೆ ಹಾಕಲಾಗಿದ್ದ ಅಣೆಕಟ್ಟುಗಳಿಗೆ ಜೋಡಿಸಿದ ಹಲಗೆಗಳನ್ನು ಪೂರ್ಣವಾಗಿ ತೆರವುಗೊಳಿಸದೆ ಇರುವುದರಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನೀರು ಸರಾಗವಾಗಿ ಹರಿಯಲು ತಡೆಯುಂಟಾದ್ದರಿಂದ ಬೇಸಾಯಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದ ರೈತರ ಗದ್ದೆಗಳಿಗೆ ನೆರೆ ನೀರು ನುಗ್ಗಿ ಸಂಗ್ರಹಿಸಿಟ್ಟಿದ್ದ ಗೊಬ್ಬರ, ಸಸಿ ಮಾಡಲೆಂದು ಬಿತ್ತನೆ ಮಾಡಿದ ಬೀಜಗಳು ನೀರು ಪಾಲಾಗಿದೆ.
ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುಡಾ, ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಮಾರು, ಡಿಂಡೊಟ್ಟು, ಅಟ್ಟಿಂಜ, ಗಂಗೇಲ, ತರ್ಪಜಾಲು, ಮಟ್ಟಾರು ನದಿಪಾತ್ರದಲ್ಲಿ ಒಳ ಹರಿವು ಜಾಸ್ತಿಯಿದ್ದು ನೆರೆ ಉಂಟಾಗಿದೆ.
ಹವಾಮಾನದ ವೈಪರಿತ್ಯ, ಚಂಡಮಾರುತ ಹಾಗೂ ಪೂರ್ವ ಮುಂಗಾರಿನ ತಿಳುವಳಿಕೆ ಇದ್ದರೂ ನೀರಾವರಿ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ನೆರೆ ಹಾವಳಿಗೆ ಕಾರಣವಾಗಿದೆ. ಇದರಿಂದ ಪಾಪನಾಶಿನಿ ನದೀ ತೀರದ ರೈತರು ಮೊದಲ ಬೆಳೆಯ ಆದಿಯಲ್ಲಿಯೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಸಂಬಂದಪಟ್ಟ ಇಲಾಖೆಯೇ ಶೀಘ್ರವಾಗಿ ಸ್ಪಂದಿಸಬೇಕು ಎಂದು ಲೂಕಾಸ್ ಡಿಸೋಜ ತಿಳಿಸಿದರು.