
ಮೂರ್ನಾಲ್ಕು ದಿನಗಳಿಂದ ಕರೆಂಟ್ ಇಲ್ಲಾ...!: ಕುಂಜಾರುಗಿರಿ ಬಿಳಿಯಾರು ನಾಗರಿಕರಿಂದ ಶಿರ್ವ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ
ಶಿರ್ವ: ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾರುಗಿರಿ ಸಮೀಪದ ಬಿಳಿಯಾರು ಭಾಗದಲ್ಲಿ ಮುಂಗಾರು ಪೂರ್ವ ಬಿರುಗಾಳಿ, ಮಳೆಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕರೆಂಟ್ ಇಲ್ಲದೆ ಕಂಗಾಲಾಗಿದ್ದ ಸ್ಥಳೀಯ ನಾಗರಿಕರು ಸೋಮವಾರ ಶಿರ್ವ ಮೆಸ್ಕಾಂ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ಸಲ್ಲಿಸಿ ಎಸ್ಒ ಮಂಜಪ್ಪರವರಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲುಗಳ ತೆರವು ಮಾಡದಿರುವುದು. ಸಮಸ್ಯೆಗಳ ಬಗ್ಗೆ ಇಲಾಖಾಧಿಕಾರಿಗಳ ಗಮನಕ್ಕೂ ತಂದರೂ ಸರಿಯಾಗಿ ಸ್ಪಂಧಿಸದೆ ಇರುವುದು, ಲೈನ್ಮ್ಯಾನ್ಗಳ ಕೊರತೆಯಿಂದ ಈ ಭಾಗದ ಸಮಸ್ಯೆಗಳಿಗೆ ತುರ್ತು ಪರಿಹಾರ ಸಿಗದಿರುವುದು, ಟ್ರಾನ್ಸ್ಫಾರ್ಮರ್ ಸಮಸ್ಯೆ ಇತ್ಯಾದಿಯಿಂದ ರೊಚ್ಚಿಗೆದ್ದ ನಾಗರಿಕರು ಶಿರ್ವ ಕಛೇರಿಯ ಮುಂದೆ ಜಮಾಯಿಸಿ ಇಲಾಖಾಧಿಕಾರಿಗಳ ಗಮನ ಸೆಳೆದರು.
ಕುರ್ಕಾಲು ಗ್ರಾಮ ಪಂ.ಮಾಜಿ ಸದಸ್ಯ ಎಂ.ಜಿ. ನಾಗೇಂದ್ರ ಇವರ ನೇತೃತ್ವದಲ್ಲಿ ಎಸ್.ಒ ಮತ್ತು ಕಾಪು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ್ರವರನ್ನು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಪಾರ್ಥಸಾರಥಿ, ಎಂ.ಜಿ. ಗಂಗಾಧರ, ಮಹೇಶ್, ಸರೋಜ, ಕಿಶನ್, ಅರುಣ್, ಸೋಮಯ್ಯ ಹಾಗೂ ನಾಗರಿಕರು ಪಾಲ್ಗೊಂಡಿದ್ದರು.
ಇಲಾಖೆಯಿಂದ ತಕ್ಷಣ ಸ್ಪಂದನ:
ಮನವಿಯನ್ನು ಸ್ವೀಕರಿಸಿದ ಎಸ್.ಒ. ಮಂಜಪ್ಪ ಹಾಗೂ ಕಾಪು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ್ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಯನ್ನು ಆಲಿಸಿದರು. ಲೈನ್ಫಾಲ್ಟ್ ಸಮಸ್ಯೆಯನ್ನು ಗುರುತಿಸಿ ವಿದ್ಯುತ್ ಸಂಪರ್ಕ ಒದಗಿಸಿದರು. ಶಿರ್ವ ಎಸ್.ಒ. ಪ್ರತಿಕ್ರಿಯಿಸಿ ಸದ್ಯಕ್ಕೆ ಟ್ರಾನ್ಸ್ಫಾರ್ಮರ್ ಸಮಸ್ಯೆ ಇಲ್ಲ. ಲೈನ್ಮ್ಯಾನ್ ಕೊರತೆ ಇದೆ. ಆರೋಗ್ಯ ಸಮಸ್ಯೆಯಿಂದ ಒಬ್ಬರು ರಜೆಯಲ್ಲಿದ್ದಾರೆ ಎಂದರು.
ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ತಕ್ಷಣ ಕಾರ್ಯಪ್ರವರ್ತರಾದ ಇಲಾಖಾಧಿಕಾರಿಗಳಾದ ಮಂಜಪ್ಪ, ಅರವಿಂದ್ ಹಾಗೂ ಸಿಬ್ಬಂದಿಗಳಿಗೆ ಎಂ.ಜಿ. ನಾಗೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.