ಅಸಂಘಟಿತ ಕಾರ್ಮಿಕರು ಸಂಘಟಿತರಾಗಬೇಕಾದ ಅಗತ್ಯವಿದೆ: ಸುಕುಮಾರ್ ತೊಕ್ಕೊಟ್ಟು

ಅಸಂಘಟಿತ ಕಾರ್ಮಿಕರು ಸಂಘಟಿತರಾಗಬೇಕಾದ ಅಗತ್ಯವಿದೆ: ಸುಕುಮಾರ್ ತೊಕ್ಕೊಟ್ಟು


ಉಜಿರೆ: ಕಾರ್ಮಿಕರು ಒಂದು ದಿನವನ್ನು 8 ಗಂಟೆ ಕೆಲಸ, 8 ಗಂಟೆ ಮನೋರಂಜನೆ, 8 ಗಂಟೆ ವಿಶ್ರಾಂತಿ ಎಂಬ ಮೂರು ವಿಬಾಗ ಮಾಡಿಸುವ ಬೇಡಿಕೆಯೊಂದಿಗೆ ತ್ಯಾಗ ಬಲಿದಾನಗಳಿಂದ ಹೋರಾಡಿ ಗೆದ್ದ ದಿನವೇ ಮೇ ದಿನ. ಅದುವೇ ಕಾರ್ಮಿಕರ ದಿನ. ಹೋರಾಟದ ಮೂಲಕ ಗೆದ್ದ ಈ ಅವಕಾಶಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು ಇದರ ವಿರುದ್ದ ಕಾರ್ಮಿಕರು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಉಪಾಧ್ಯಕ್ಷ  ಸುಕುಮಾರ್ ತೊಕ್ಕೊಟ್ಟು ಹೇಳಿದರು.

ಬೆಳ್ತಂಗಡಿಯ ಮಿನಿ ವಿಧಾನ ಸೌಧ ಎದುರು ಸಿಐಟಿಯು ನೇತೃತ್ವದಲ್ಲಿ ನಡೆದ ಮೇ ದಿನಾಚರಣೆಯ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.

1917ರಲ್ಲಿ ರಷ್ಯಾ ಕ್ರಾಂತಿ ಕಮ್ಯೂನಿಸ್ಟ್ ಸಿದ್ದಾಂತದಿಂದ ಅಂದರೆ ದುಡಿಯುವ ವರ್ಗದ ಸಿದ್ದಾಂತದಿಂದ ದೇಶದ ಆಡಳಿತ ನಡೆಸಲು ಸಾದ್ಯ ಮತ್ತು ದುಡಿಯುವ ಜನರ ಹಿತ ರಕ್ಷಿಸಲು ಸಾದ್ಯ ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಾಯಿತು ಎಂದ ಅವರು ಶೋಷಣೆ ರಹಿತವಾದ ಸಮತಾ ಸಮಾಜ ನಿರ್ಮಾಣವೇ ಈ ಕಮ್ಯೂನಿಸ್ಟ್ ಸಿದ್ದಾಂತದ ಗುರಿಯಾಗಿದೆ ಎಂದರು. 

ಕನಿಷ್ಟ ಕೂಲಿ, ಬೋನಸ್, ಡಿ.ಎ. ಕೆಲಸದ ಭದ್ರತೆ ಮೊದಲಾದ ಸವಲತ್ತುಗಳ ಪಡೆದ ಕಾರ್ಮಿಕ ವರ್ಗ ಇಂದು ಅದನ್ನೆಲ್ಲಾ ಕಳಕೊಳ್ಳುವ ಭೀತಿ ಎದುರಿಸುತ್ತಿದೆ. ಕೇಂದ್ರ ಸರಕಾರ ಈಗಿರುವ ಕಾರ್ಮಿಕರ ಕಾನೂನು ಸವಲತ್ತುಗಳನ್ನೆಲ್ಲಾ ರದ್ದು ಮಾಡಿ ಹೊಸದಾದ ಮಾಲಕರ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ ಎಂದರು. 

ಕಾರ್ಮಿಕರ ಐಖ್ಯ ಚಳವಳಿಯಿಂದ ಕಾರ್ಮಿಕ ವಿರೋದಿ ನಡೆಯನ್ನು ನಾವು ಎದುರಿಸಿ ಹಿಮ್ಮೆಟ್ಟಿಸಬೇಕಾಗಿದೆ ಎಂದ ಅವರು ಮಾಲಕರ ಪರವಾಗಿ ಇರುವ ಈ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಬಾರದು ಎಂದು ಸಿಐಟಿಯು ಸೇರಿದಂತೆ 13 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟೀ ನೇತೃತ್ವದಲ್ಲಿ ಮೇ.20 ರಂದು ನಡೆಯುವ ಅಖಿಲ ಭಾರತ ಮುಷ್ಕರವನ್ನು ನಾವೆಲ್ಲಾ ಯಶಸ್ವಿಗೊಳಿಸಬೇಕು ಎಂದರು.

ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಮಿಕರ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಬಿ.ಎಂ. ಭಟ್ ಅವರು ದೇಶದಲ್ಲಿ ರಾಮರಾಜ್ಯ ಸ್ಥಾಪನೆ ಆಗದಂತೆ ತಡೆಯುವ ಮಂಥರೆಯಂತವರ ಮಾತಿಗೆ ಮರುಳಾಗಿ ಸೋಲುತ್ತಿದ್ದೇವೆ ಎಂದರು. 

ರಾಮಾಯಣದ ಕೈಕೇಯಿಯು ಮಂಥರೆಯ ಮಾತು ಕೇಳಿ ರಾಮನಾಡಳಿತ ಬಾರದಂತೆ ತಪ್ಪಿಸಿದ ಕಥೆಯನ್ನು ನೆನಪಿಸಿದ ಅವರು ಇಂದು ಜಾತಿ ಹೆಸರಲ್ಲಿ, ಧರ್ಮದ ಹೆಸರಲ್ಲಿ ಮಂಥರೆಯಂತವರ ಮಾತು ನಂಬಿ ದುಡಿಯುವ ವರ್ಗದ ಹಿತ ರಕ್ಷಣೆ ಮಾಡದ ನಮ್ಮ ವಿರೋದಿಗಳನ್ನೇ ಮತ ನೀಡಿ ಗೆಲ್ಲಿಸುತ್ತಾ ದುಡಿಯುವ ವರ್ಗದ ರಕ್ಷಕರನ್ನು ನಾವೇ ಕೈಯಾರೆ  ಸೋಲಿಸುತ್ತಿದ್ದೇವೆ ಎಂದರು. 

ಮೊದಲು ಧರ್ಮ ರಕ್ಷಣೆಯ ಕೆಲಸವನ್ನು ಪ್ರಜೆಗಳಾದ ಅದರಲ್ಲೂ ಕಾರ್ಮಿಕ ವರ್ಗದವರಾದ ನಾವು ಮತದಾನದ ಮೂಲಕ ನಡೆಸಬೇಕಿದೆ ಎಂದ ಅವರು ಈಗಿನ ಆಡಳಿತವು ಮನುಷ್ಯರ ಬದುಕನ್ನು ಕೊಲ್ಲುವ ಆಡಳಿತವಾಗಿದೆ. ಈ ರಾಕ್ಷಸೀಯ ಮನೋಗುಣದ ಬಂಡವಾಳಶಾಹಿ ಪರವಾದ ರಾಜಕೀಯವನ್ನು ಸೋಲಿಸುವುದೇ ಕಾರ್ಮಿಕರ ಧರ್ಮ ಸಂಸ್ಥಾಪನಾ  ಕಾರ್ಯ ಎಂದವರು ಹೇಳಿದರು. 

ಧರ್ಮದ ಹೆಸರಲ್ಲಿ ಅಧರ್ಮ ಮಾಡುತ್ತಿರುವ ಹಿಂಸೆಯನ್ನು ವೈಭವೀಕರಿಸುವ, ಕೃತಕ ಶತ್ರುವನ್ನು ನಿರ್ಮಿಸಿ ನಮ್ಮ ಬದುಕನ್ನೇ ನಾಶ ಮಾಡುವ ರಾಜಕೀಯವನ್ನು ಹಿಮ್ಮೆಟ್ಟಿಸಲು ಮೇ ದಿನ ನಮಗೆ ಪ್ರೇರಣೆ ನೀಡುವ ದಿನವಾಗಲಿ ಎಂದರು.

ಈಶ್ವರಿಶಂಕರ್ ಪ್ರಸ್ತಾವಿಕವಾಗಿ ಮಾತಾಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ ಗೌಡ ಪಾಂಗಳ ಮಾತಾಡಿದರು. ಸಂಗಾತಿ ಸ್ವಸಹಾಯ ಗುಂಪುಗಳ ಲಾಭಾಂಶ ವಿತರಣೆ ನಡೆಸಲಾಯಿತು. ವೇದಿಕೆಯಲ್ಲಿ ಸಿಐಟಿಯು ಮುಖಂಡರಾದ ಜಯಶ್ರೀ, ನೆಬಿಸಾ, ಧನಂಜಯ ಗೌಡ, ಸುಕುಮಾರ್ ದಿಡುಪೆ, ಜಯರಾಮ ಮಯ್ಯ, ಮಹಿಳಾ ಸಂಘದ ತಾಲೂಕು ಅದ್ಯಕ್ಷೆ ಕಿರಣ ಪ್ರಭಾ, ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷೆ ಅಧಿತಿ ಕೊಯ್ಯೂರು ಮತ್ತಿತರರು ಉಪಸ್ಥಿತರಿದ್ದರು. 

ರೈತ ಕಾರ್ಮಿಕ ಮುಖಂಡರುಗಳಾದ ಪುಷ್ಪಾ, ಅಶ್ವಿತ, ಅಪ್ಪಿ, ಕುಮಾರಿ, ಅಜಿ.ಎಂ. ಜೋಸ್, ವಿಶ್ವನಾಥ ಶಿಬಾಜೆ, ಸಲಿಮೋನ್, ವಿಶ್ವನಾಥ, ವಿದ್ಯಾರ್ಥಿ ಸಂಘ (ಎಸ್.ಎಫ್.ಐ.) ಜಿಲ್ಲಾ ಕಾರ್ಯದರ್ಶಿ ವಿನುಶ ರಮಣ, ಜಯಂತ ಪಾದೆಜಾಲು, ಪಾರೂಕ್ ಮಡಂಜೋಡಿ, ಮಹಮ್ಮದ್ ಅನಸ್, ವಸಂತ ಟೈಲರ್, ಜಯಂತ ಪಂಜುರ್ಳಿಕೋಡಿ ಮೊದಲಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಿಐಟಿಯು ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ ಸ್ವಾಗತಿಸಿ, ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ರೈತ ಮುಖಂಡರಾದ ಶ್ಯಾಮರಾಜ್ ಅವರು ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article