
ಪ್ರಕೃತಿ ಚಿಕಿತ್ಸೆ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ನೆಮ್ಮದಿಯ ಜೀವನ: ಅರ್ಜುನ್ರಾಮ್ ಮೇಘವಾಲ್
ಉಜಿರೆ: ದೇಹ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧವಿದ್ದು, ಔಷಧಿರಹಿತ ಪ್ರಕೃತಿಚಿಕಿತ್ಸೆ ಮೂಲಕ ನಾವು ಆರೋಗ್ಯಭಾಗ್ಯವನ್ನು ಹೊಂದಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಕೇಂದ್ರ ಸಚಿವ ಅರ್ಜುನ್ರಾಮ್ ಮೇಘವಾಲ್ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ ಯೋಗ ಮತ್ತು ಪ್ರಕೃತಿಚಿಕಿತ್ಸೆ ಬಗ್ಯೆ ಮೂರನೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.
ನಮ್ಮ ದೇಹ ಮತ್ತು ನಮ್ಮ ಸುತ್ತಲಿನ ಪ್ರಕೃತಿ, ಪರಿಸರ ಪಂಚಭೂತಗಳಿಂದ ರೂಪಿಸಲ್ಪಟ್ಟಿದೆ. ಎಲ್ಲದರಲ್ಲಿಯೂ ಅಧಿಕ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಆಹಾರ-ವಿಹಾರಕ್ಕೆ ದೇಹ ಸಹಕಾರಿಯಾದರೆ ಪ್ರೀತಿ-ವಿಶ್ವಾಸ, ಸೇವೆ, ಅನುಕಂಪ ಮೊದಲಾದ ಮಾನವೀಯಮೌಲ್ಯಗಳ ಉದ್ದೀಪನಕ್ಕೆ ಮನಸ್ಸು ಪ್ರೇರಕವಾಗಿದೆ. ಪರಿಶುದ್ಧ ಮನದೊಂದಿಗೆ ನಾವು ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬೆರೆತಾಗ ಸುಖ-ಶಾಂತಿ, ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಪರಂಪರೆ ತ್ಯಾಗ, ಸೇವೆ ಹಾಗೂ ಲೋಕಕಲ್ಯಾಣ ಕಾರ್ಯಗಳನ್ನು ಅವರು ಶ್ಲಾಘಿಸಿ ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಿದರು. ಇಂತಹ ಕಲ್ಯಾಣಕಾರ್ಯಗಳಿಂದ ಭಾರತ “ವಿಶ್ವಗುರು” ಮಾನ್ಯತೆ ಹೊಂದಿದೆ. ತಾವು ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರನ್ನು ದೆಹಲಿಯಲ್ಲಿ ತಮ್ಮ ಮನೆಗೆ ಆಹ್ವಾನಿಸಿ ಗೌರವಿಸುವುದಾಗಿ ಸಚಿವರು ತಿಳಿಸಿದರು.
ಸಚಿವರು ಪ್ರಶ್ನೋತ್ತರ ರೂಪದಲ್ಲಿ ಪ್ರತಿನಿಧಿಗಳಿಂದಲೆ ಮಾಹಿತಿ ಪಡೆದು ತಮ್ಮ ಭಾಷಣವನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಯಶಸ್ವಿಯಾದರು.
ಪ್ರತಿನಿಧಿಗಳ ಪರವಾಗಿ ಉತ್ತರ ಪ್ರದೇಶದ ಡಾ. ನೀರಜ್, ಆಂಧ್ರಪ್ರದೇಶದ ಡಾ. ಶಶಿಕಲಾ ಮತ್ತು ಪುತ್ತೂರಿನ ಡಾ. ಸುಲೇಖಾ ವರದರಾಜ್ ತಮ್ಮ ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸಿದರು.
ಬೆಂಗಳೂರಿನ ಡಾ. ಸೀತಾರಾಮ ಜಿಂದಾಲ್ ಅವರ ವಿಶೇಷ ಸೇವೆ, ಸಾಧನೆಗಾಗಿ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌವಿಸಲಾಯಿತು. ಅವರ ಪರವಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ. ಬಬಿನಾ ಪ್ರಶಸ್ತಿ ಸ್ವೀಕರಿಸಿದರು.
ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ವಿಶೇಷ ಸೇವೆ ಮಾಡಿದ ಡಾ. ನವೀನ್ ಕೆ.ವಿ. ಡಾ. ಕನಕಸೋನಿ, ಡಾ. ಗಾಯತ್ರಿ, ಡಾ. ನಿತೇಶ್, ಡಾ. ರಾಘವೇಂದ್ರ ರಾವ್, ಡಾ. ಬಬಿನಾ, ಡಾ. ಮಂಜುನಾಥ್ ಮತ್ತು ಡಾ. ಅಖಿಲಾ ಅವರನ್ನು ಸನ್ಮಾನಿಸಲಾಯಿತು.
ಡಾ. ನವೀನ್ ಕೆ.ವಿ. ವರದಿ ಸಾದರಪಡಿಸಿದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ ಪ್ರಕೃತಿಚಿಕಿತ್ಸಾ ಪದ್ಧತಿಯಿಂದ ಔಷಧಿ ರಹಿತವಾಗಿ ಹೆಚ್ಚಿನ ರೋಗಗಳನ್ನು ಶಮನಗೊಳಿಸಬಹುದು. ಆಧುನಿಕ ಜೀವನಶೈಲಿ, ಆಹಾರ-ವಿಹಾರ ಹಾಗೂ ಪ್ರಕೃತಿಯಿಂದ ನಾವು ವಿಮುಖರಾಗಿರುವುದೇ ಹೆಚ್ಚಿನ ರೋಗಗಳು ಬರಲು ಕಾರಣ ಎಂದು ಅವರು ಹೇಳಿದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ. ಸುಜಾತ ವಂದಿಸಿದರು.