
ಧರ್ಮಸ್ಥಳದಲ್ಲಿ ಹತ್ತನಾವಧಿ (ತುಳು: ಪತ್ತನಾಜೆ) ಉತ್ಸವ
Saturday, May 24, 2025
ಉಜಿರೆ: ಧರ್ಮಸ್ಥಳದಲ್ಲಿ ಹತ್ತನಾವಧಿ (ತುಳು: ಪತ್ತನಾಜೆ) ನಿಮಿತ್ತ ಶನಿವಾರ ದೇವಸ್ಥಾನದಲ್ಲಿ ರಂಗಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆಗಳು ನಡೆದವು.
ಧ್ವಜಮರ ಅವರೋಹಣ ನಡೆಯಿತು. ದೀಪಾವಳಿ ವರೆಗೆ ದೇವಸ್ಥಾನದಲ್ಲಿ ರಂಗಪೂಜೆ, ಉತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ.
ಧರ್ಮಸ್ಥಳ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ಶನಿವಾರ ಸಂಜೆ ಬಿಡಾರದ ಮಣೆಗಾರರ ಮನೆಯಿಂದ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.
ಕ್ಷೇತ್ರದ ಆನೆಗಳು, ಬಸವ, ಹೂವಿನ ಕೋಲು, ವಾದ್ಯ ಮೇಳ, ಚೆಂಡೆ ಮೇಳ, ಶಂಖ-ಜಾಗಟೆ ವಾದನ ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತು. ದೇವಸ್ಥಾನದ ಎದುರು ದರ್ಶನ ಸೇವೆ ನಡೆಸಿದ ಬಳಿಕ ಛತ್ರದ ಶ್ರೀ ಮಹಾಗಣಪತಿ ಗುಡಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಕುಟುಂಬಸ್ಥರು, ನೌಕರರು ಹಾಗೂ ಭಕ್ತರು ಉಪಸ್ಥಿತರಿದ್ದರು.