
ಗಲಭೆಗಳ ಮೂಲಕ ರಾಜಕೀಯ ಲಾಭ ಪಡೆಯುವ ಬಿಜೆಪಿ ಯತ್ನ ಖಂಡನೀಯ: ರಮೇಶ್ ಶೆಟ್ಟಿ ಬೋಳಿಯಾರ್
ಉಳ್ಳಾಲ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮತೀಯ ಕಾರಣದ ವದಂತಿ ಹಬ್ಬಿಸಿ ಸಮಾಜದಲ್ಲಿ ಗಲಭೆಗೆ ಯತ್ನಿಸಿದ ಬಗ್ಗೆ ಮಾಧ್ಯಮಕ್ಕೆ ಸ್ಪೀಕರ್ ನೀಡಿದ ಹೇಳಿಕೆಯನ್ನು ತಿರುಚುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ನಡೆ ಖಂಡನೀಯ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ನಡೆದ ಕೂಡಲೇ ಫಾಜಿಲ್ ಹತ್ಯೆಗೆ ಪ್ರತೀಕಾರ ಎಂಬ ಸುದ್ದಿ ಹಬ್ಬಿಸಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಫಾಝಿಲ್ ಕುಟುಂಬದವರು ಸ್ಪೀಕರ್ ಯು.ಟಿ. ಖಾದರ್ ಅವರ ಆಪ್ತ ಸಹಾಯಕನಿಗೆ ಕರೆ ಮಾಡಿ ಘಟನೆಯಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದರು. ಇದನ್ನೇ ಸ್ಪೀಕರ್ ಯು.ಟಿ. ಖಾದರ್ ಮಾಧ್ಯಮದ ಮುಂದೆ ಹೇಳಿದರೇ ಹೊರತು ಘಟನೆಯಲ್ಲಿ ಅವರ ಪಾತ್ರವೇ ಇಲ್ಲ ಎಂದು ಹೇಳಿಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ಅದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಂತಕರ ಬಂಧನಕ್ಕೆ ಬಲೆ ಬೀಸಿದ್ದು, ಬಂಧನದ ನಂತರ ಯಾರೆಲ್ಲಾ ಈ ಘಟನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡಿದ್ದಾರೆ ಎಂಬ ಬಗ್ಗೆ ತಿಳಿದು ಬರಲಿದೆ ಎಂದೂ ಯು.ಟಿ. ಖಾದರ್ ಹೇಳಿದ್ದರು.
ಆದರೆ ಇದನ್ನೇ ತಪ್ಪಾಗಿ ಪ್ರಚಾರ ಮಾಡಿ ರಾಜಕೀಯವಾಗಿ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಬಿಜೆಪಿಯ ಈ ವಿಭಜನಕಾರಿ ನೀತಿಯನ್ನು ಚೆನ್ನಾಗಿ ಅರಿತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಯನ್ನು ಯಾರೂ ನಂಬಲಾರರು ಎಂದು ರಮೇಶ್ ಶೆಟ್ಟಿ ಬೋಳಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.