ಸರಕಾರಿ ಶಾಲೆಗಳ ಉಳಿವಿಕೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಪ್ರಮುಖ ಪಾತ್ರವಹಿಸುತ್ತದೆ: ಸುನಿಲ್ ಕುಮಾರ್
ಬಂಟ್ವಾಳ: ಪ್ರಸ್ತುತ ಕಾಲಘಟ್ಟದಲ್ಲಿ ಪೋಷಕರ ಇಂಗ್ಲಿಷ್ ವ್ಯಾಮೋಹದಿಂದಾಗಿ ಸರಕಾರಿ ಉಳಿಯಬೇಕಾದರೆ ಪ್ರತಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್ಕೆಜಿ ಹಾಗೂ ಯುಕೆಜಿ) ತರಗತಿಗಳನ್ನು ಆರಂಭಿಸಿ ಕನ್ನಡ ಭಾಷೆಯೊಂದಿಗೆ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭವಾಗಬೇಕು ಎಂದು ಕಡೇಶಿವಾಲಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಹೇಳಿದರು.
ಮಂಗಳವಾರ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ಬರವಣಿಗೆ ಪುಸ್ತಕ ವಿತರಣೆ ಹಾಗೂ ಪೋಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು.
1ನೇ ತರಗತಿಯಿಂದ 7ನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕವನ್ನು ಒದಗಿಸಿ ಪುಸ್ತಕ ವಿತರಣೆ ಮಾಡಿ ಮಾತನಾಡಿದ ಉದ್ಯಮಿ ಶಾಲಾ ಹಿರಿಯ ವಿದ್ಯಾರ್ಥಿ ಸಂಶುದ್ದೀನ್ ಪಟ್ಲ, ಮಾತನಾಡಿ ಶಾಲೆಗೆ ತುರ್ತು ಅಗತ್ಯವಿರುವ ಅಕ್ಷರ ದಾಸೋಹ ಕೊಠಡಿಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೇಶವ ಕೆ. ಅವರು ಶಾಲೆಗೆ ಒಂದನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಶಾಲಾ ಸಮವಸ್ತ್ರವನ್ನು ಉಚಿತವಾಗಿ ಒದಗಿಸಿದರು.
ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ ಬನಾರಿ, ಕ್ಯಾಶೂ ಇಂಡಸ್ಟ್ರೀಸ್ ಮಾಲಕರಾದ ಗಂಗಾಧರ ಶೇರಾ, ಶಾಲಾ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಚೆನ್ನಪ್ಪ ಅಂಚನ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಚಿದಾನಂದ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉಷಾ, ಅಂಗನವಾಡಿ ಶಿಕ್ಷಕಿ ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪಿ. ಸ್ವಾಗತಿಸಿ, ಸಹ ಶಿಕ್ಷಕ ಗೋಪಾಲಗೌಡ ವಂದಿಸಿದರು. ಸಹ ಶಿಕ್ಷಕಿ ಜೋಸ್ನಾ ಪ್ರಿಯಾ ವಾಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಅನಿತಾ ಕುಮಾರಿ ಮತ್ತು ಸುಮಲತಾ ಸಹಕರಿಸಿದರು.