
ರಾ.ಹೆ. 169: ಸಾಣೂರು ಮುರತಂಗಡಿ ಸರ್ವಿಸ್ ರಸ್ತೆ ಬದಿ ಭೂಕುಸಿತ: ಬಾಯ್ತೆರೆದಿದೆ ಮೃತ್ಯುಕೂಪ
ಕಾರ್ಕಳ: ಕಳೆದ ಮೂರು ವಾರಗಳಿಂದ ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾ.ಹೆ. 169 ಮುರತಂಗಡಿ ಪ್ರಶಾಂತ ಕಾಮತ್ ಅವರ ಮನೆಯ ಮುಂಭಾಗದ ಸರ್ವಿಸ್ ರಸ್ತೆ ಬದಿಯ ಮಣ್ಣು ಕುಸಿದು ಬೃಹದಾಕಾರದ ಹೊಂಡವಾಗಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದೆ.
ಈಗಾಗಲೇ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿಯವರಿಗೆ ತಿಳಿಸಿದರೂ ಕೇವಲ ಒಂದೆರಡು ಬಾರಿ ರಸ್ತೆ ಬದಿಗೆ ಕೆಂಪು ಮಣ್ಣು ಸುರಿದು, ಇದೀಗ ಮಳೆ ನೀರಿಗೆ ಸರ್ವಿಸ್ ರಸ್ತೆ ಇಡೀ ಕೆಂಪಾಗಿ ರಾಡಿ ಎದ್ದಿದೆ. ಜಾರುತ್ತಿರುವ ಮಣ್ಣಿನ ಮೇಲೆ ಈಗಾಗಲೇ ಹಲವಾರು ಬೈಕ್ ಸವಾರರು ಬಿದ್ದು ಜಖಂ ಗೊಂಡಿರುವ ಬಗ್ಗೆ ವರದಿಯಗಿದ್ದು, ಮಣ್ಣು ಕುಸಿದಿರುವ ಪಕ್ಕದಲ್ಲಿಯೇ ಎರಡು ಹೋಟೆಲ್ಗಳಿದ್ದು, ಲಾರಿ ಕಾರು ಇನ್ನಿತರ ವಾಹನಗಳು ಊಟಕ್ಕೆಂದು ವಾಹನಗಳನ್ನು ರಸ್ತೆ ಬದಿಗೆ ಪಾರ್ಕ್ ಮಾಡುವಾಗ ಮಣ್ಣು ಕುಸಿದು ವಾಹನಗಳು ಪಲ್ಟಿಯಾಗಿ 10 ಅಡಿ ಪ್ರಪಾತಕ್ಕೆ ಬೀಳುವ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಂಡಿದೆ.
ಗುತ್ತಿಗೆದಾರ ಕಂಪನಿಯವರ ಬೇಜವಾಬ್ದಾರಿತನದಿಂದಾಗಿ ಪ್ರಾಣಪಾಯವಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿರುತ್ತಾರೆ.
ಸರ್ವಿಸ್ ರಸ್ತೆ ಬದಿಯಲ್ಲಿ ಕುಸಿದಿರುವ ಭಾಗಕ್ಕೆ ಕಲ್ಲು ಅಥವಾ ಕಾಂಕ್ರೀಟ್ನ ತಡೆಗೋಡೆ ನಿರ್ಮಾಣವಾದರೆ ಮಾತ್ರ ಶಾಶ್ವತ ಪರಿಹಾರ ಸಿಗಬಹುದು. ರಸ್ತೆ ಮೇಲೆ ಬಿದ್ದಿರುವ ಕೆಂಪು ಮಣ್ಣನ್ನು ತೆರವುಗೊಳಿಸದಿದ್ದರೆ ಮಳೆನೀರು ಸರ್ವಿಸ್ ರಸ್ತೆಯ ಮೇಲೆ ಬೀಳುವಾಗ ಕೆಸರು ಮಣ್ಣಿನ ಮೇಲೆ ಜಾರಿ ನಡೆದಾಡುವವರು ಮತ್ತು ವಾಹನಗಳು ಪಲ್ಟಿಯಾಗಿ ಅಪಘಾತದ ಸಂಖ್ಯೆಗಳು ಹೆಚ್ಚಳವಾಗುತ್ತದೆ ಎಂದು ಅವರು ಇಲಾಖೆಗೆ ಮತ್ತು ಗುತ್ತಿಗೆದಾರ ಕಂಪನಿಗೆ ಎಚ್ಚರಿಸಿದ್ದಾರೆ.