
ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ಆರೋಪಿಯ ಬಂಧನ
Wednesday, June 11, 2025
ಕಾಸರಗೋಡು: ಮಂಜೇಶ್ವರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿ ಪರಾರಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಬೆಟ್ಟು ನಿವಾಸಿ ಸಿದ್ದೀಕ್ ಸಾರಿಕ್ ಫರ್ಹಾನ್ (29) ಬಂಧಿತ ಆರೋಪಿ.
ಸೋಮವಾರ ಮುಂಜಾನೆ ಲಾಕಪ್ನಿಂದ ಈತ ಪರಾರಿಯಾಗಿದ್ದ. ಈತ ಮಂಜೇಶ್ವರ ಪರಿಸರದಲ್ಲೇ ಅಡಗಿರುವ ಮಾಹಿತಿ ಪಡೆದ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆತನನ್ನು ಮತ್ತೆ ಬಂಧಿಸಿದ್ದಾರೆ.
ಈತ ಸೋಮವಾರ ಕುಡಿಯಲು ನೀರು ಕೇಳಿದಾಗ ಪೊಲೀಸರು ಒಳಗೆ ತೆರಳಿ ನೀರು ತರುವಷ್ಟರಲ್ಲಿ ಈತ ಲಾಕಪ್ನಿಂದ ಪರಾರಿಯಾಗಿದ್ದನು. ಫರ್ಹಾನ್ 2019ರ ಮೇ 25ರಂದು ಕುಂಜತ್ತೂರು ತೂಮಿನಾಡು ಎಂಬಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. ಈತನ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು.