
ಜುಗಾರಿ ಆರೋಪಿ ಬಳಿ ಹಣದ ಬೇಡಿಕೆ: ಎಸ್ಐ ಅಮಾನತು
ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ಪ್ರಕರಣದಲ್ಲಿ ಆರೋಪಿಯೊಬ್ಬನ ಬಳಿ ಹಣದ ಬೇಡಿಕೆ ಮುಂದಿಟ್ಟ ಆರೋಪದಲ್ಲಿ ವಿಟ್ಲ ಠಾಣಾ ಎಎಸ್ಐ ಕೌಶಿಕ್ ಬಿ.ಸಿ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಮೇ 8ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿಯಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಎಎಸ್ಐ ಕೌಶಿಕ್ ದಾಳಿ ಮಾಡಿದ್ದರು. ಈ ವೇಳೆ ಜುಗಾರಿ ಆಟದಲ್ಲಿ ನಿರತರಾಗಿದ್ದವರು ಪರಾರಿಯಾಗಿದ್ದರೆ, ಸ್ಥಳದಲ್ಲಿ ಬೈಕೊಂದು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಾನೂನಾತ್ಮಕವಾಗಿ ಕ್ರಮ ಜರುಗಿಸದ ಎಎಸ್ಯ ಕೌಶಿಕ್, ಬೈಕ್ ಮಾಲಕನಿಗೆ ಕರೆ ಮಾಡಿ ಠಾಣೆಗೆ ಬರಮಾಡಿಕೊಂಡಿದ್ದಾರೆ. ಅಲ್ಲದೇ, ಬಳಿಕ ಬೈಕ್ ಮಾಲಕನಿಗೆ ಮೂರನೇ ವ್ಯಕ್ತಿಯೊಬ್ಬನ ಮೂಲಕ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಎಎಸ್ಐ ಕೌಶಿಕ್ ರನ್ನು ಜೂ.12ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.