ಕೆಪಿಸಿಸಿ ನಿಯೋಗ: ಜೂ 9ರಂದು ಸರಕಾರಕ್ಕೆ ಮಧ್ಯಂತರ ವರದಿ

ಕೆಪಿಸಿಸಿ ನಿಯೋಗ: ಜೂ 9ರಂದು ಸರಕಾರಕ್ಕೆ ಮಧ್ಯಂತರ ವರದಿ


ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶವಾದ ದ.ಕ. ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣಗಳು, ಕೋಮು ಗಲಭೆಗಳಿಗೆ ಸಂಬಂಧಿಸಿ ಇಲ್ಲಿನ ಆಡಳಿತದ ವಿಫಲತೆ, ಪೂರಕವಾದ ಅಕ್ರಮ ಚಟುವಟಿಕೆಗಳ ಕುರಿತಂತೆ ಕಲೆ ಹಾಕಲಾಗಿರುವ ಮಾಹಿತಿಯ ಆಧಾರದಲ್ಲಿ ಮಧ್ಯಂತರ ವರದಿಯನ್ನು ಜೂ.9 ಅಥವಾ 10ರಂದು ಮುಖ್ಯಮಂತ್ರಿ, ಕಾನೂನು ಹಾಗೂ ಗೃಹ ಸಚಿವರು ಸೇರಿದಂತೆ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಯನ ಸಮಿತಿಯ ಅಧ್ಯಕ್ಷ ಡಾ. ನಾಸಿರ್ ಹುಸೇನ್ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳ  ಸತ್ಯಾಸತ್ಯತೆಯ ಅಧ್ಯನಯಕ್ಕಾಗಿ ಜಿಲ್ಲೆಗೆ ಭೇಟಿ ನಿಡಿರುವ ನಿಯೋಗದ ಪ್ರಮುಖರ ಜತೆ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ದ.ಕ. ಜಿಲ್ಲೆ ಸೇರಿದಂತೆ ಉಡುಪಿ ಹಾಗೂ ಕಾರವಾರವನ್ನು ಒಳಗೊಂಡು ಕರಾವಳಿಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು, ಪ್ರಗತಿಗಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆಗಳನ್ನು ನೀಡುವಂತೆ ಸರಕಾರ ಸ್ಪಷ್ಟನಿರ್ದೇಶನವನ್ನು ಅಧ್ಯಯನ ಸಮಿತಿಗೆ ನೀಡಿದೆ. ಅದರಂತೆ ಜಿಲ್ಲೆಗೆ ಜೂ. 4ರಂದ ಭೇಟಿ ನೀಡಿರುವ ಸಮಿತಿಯು ಈಗಾಗಲೇ ಪಕ್ಷದ ಹಿರಿಯ ನಾಯಕರು, ವಕೀಲರು, ಚಿಂತಕರು, ಲೇಖಕರು, ಧಾರ್ಮಿಕ ಮುಖಂಡರು, ಸಮುದಾಯದ ಪ್ರಮುಖರ ಜತೆ ಚರ್ಚಿಸಿದೆ. ಮುಂದೆ ಉಡುಪಿ ಹಾಗೂ ಕಾರವಾರ ಜಿಲ್ಲೆಗಳಿಗೂ ಭೇಟಿ ನೀಡಲಿದೆ. ಅದಕ್ಕೂ ಮೊದಲು ಈವರೆಗೆ ದ.ಕ. ಜಿಲ್ಲೆಯಲ್ಲಿ ಸಮಿತಿ ಸಂಗ್ರಹಿಸಿರುವ ಅಂಶಗಳ ಆಧಾರದಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲಿದ್ದೇವೆ ಎಂದರು.

ಸಾಕ್ಷರತೆ, ಬ್ಯಾಂಕಿಂಗ್ ಸೇರಿದಂತೆ ಆರ್ಥಿಕ ವ್ಯವಹಾರಗ ಮೂಲಕ ಸಾಕಷ್ಟುಕೊಡುಗೆ ನೀಡಿರುವ ದ.ಕ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಅದಕ್ಕೆ ಯಾವೆಲ್ಲಾ ಆಡಳಿತಾತ್ಮಕ ಕ್ರಮಗಳ ಅಗತ್ಯವಿದೆ ಆ ಬಗ್ಗೆ ಸಲಹೆ ನೀಡಲಿದ್ದೇವೆ. ಹಿಂಸೆಗೆ ಅವಕಾಶ ಇಲ್ಲದಂತೆ ಕಾನೂನು ಅನುಷ್ಠಾನ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು. ಅದಕ್ಕೆ ಏನೆಲ್ಲಾ ಅಗತ್ಯವಿದೆಯೋ ಅಂತಹ ಕಾರ್ಯಕ್ರಮ ಆಗಲಿದೆ ಎಂದವರು ಹೇಳಿದರು.

ಕೆಪಿಸಿಸಿ ಅಧ್ಯಯನ ಸಮಿತಿಯ ಸದಸ್ಯರಾದ ಸುದರ್ಶನ್ ಮಾತನಾಡಿ, ರಾಜ್ಯದ ಪ್ರಗತಿಗೆ ದ.ಕ. ಜಿಲ್ಲೆಯ ಕೊಡುಗೆ ಅಪಾರ. ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಘಟನೆಗಳಿಗೆ ಕೋಮು ಬಣ್ಣ ಹಚ್ಚುವ ಕೆಲಸಾಗಿದೆ. ಯಾರೋ ಶೇ. 2ರಷ್ಟುದುಷ್ಕರ್ಮಿಗಳು ಇಂತಹ ಕೃತ್ಯ ಎಸಗುತ್ತಾರೆ. ಉಳಿದ ಶೇ. 8ರಷ್ಟುಜನ ರಾಜಕೀಯವಾಗಿ ಇದರ ಲಾಭ ಪಡೆಯಲು ಜಿಲ್ಲೆಯಲ್ಲಿ ಈ ರೀತಿಯ ಪ್ರಯೋಗ, ಸಂಶೋಧನೆಗಳನ್ನು ಮಾಡುವುದನ್ನು ನಾವು ಖಂಡಿಸುತ್ತೇವೆ. ಶೇ. 90ರಷ್ಟುಜನರ ಯಾವುದೇ ಪಾತ್ರ ಇರುವುದಿಲ್ಲ ಎಂದು ಹೇಳಿದರು.

ಮಧ್ಯಂತರ ವರದಿ ಸಲ್ಲಿಕೆ ಬಳಿಕ ಮತ್ತೆ ಉಡುಪಿ ಹಾಗೂ ಕಾರವಾರ ಹಾಗೂ ಇನ್ನೊಂದು ಸುತ್ತು ದ.ಕ. ಜಿಲ್ಲೆಯಲ್ಲಿಯೂ ಭೇಟಿ ಮಾಡಿ ಮತ್ತಷ್ಟುಮಾಹಿತಿ ಸಂಗ್ರಹಿಸಿ, ಪೂರ್ಣ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಸಮಿತಿ ಸದಸ್ಯ ಜಯಪ್ರಕಾಶ್ ಹೆಗ್ಡೆ ಮಾತನಾಡಿ, 1994-97ರವರೆಗೆ  ನಾನು ಸಚಿವನಾಗಿದ್ದೆ. ಆದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಅದು ಬಿಟ್ಟು ಗೊಂದಲ ಮೂಡಿಸಲಾಗುತ್ತಿದೆ. ಮಂಗಳೂರು ಏಳು ಗಂಟೆಗೆ ಬಂದ್ ಮಾಡಿಸಲಾಗುತ್ತಿದೆ ಎಂಬ ದೂರುಗಳು ಸಮಿತಿಗೆ ಬಂದಿದೆ. ಇದರಿಂದಾಗಿ ಹೊರಗಿನ ವಿದ್ಯಾರ್ಥಿಗಳು ಬರಲು ಭಯ ಪಡುತ್ತಿದ್ದಾರೆ. ಬಂಡವಾಳ ಹೂಡಿಕೆಗೆ ಹಿಂದೇಟು ಆಗುತ್ತಿದೆ. ಇಂತಹ ವಿಚಾರಗಳನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡು ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೆ ಬದಲಾವಣೆ ಸಾಧ್ಯ ಎಂದರು.

ಇನ್ನೋರ್ವ ಸದಸ್ಯ ಕಿಮ್ಮನೆ ರತ್ನಾಕರ್ ಮಾತನಾಡಿ, ದ.ಕ. ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂಬ ಅಭಿಪ್ರಾಯ ರಾಜ್ಯದಲ್ಲಿದ್ದು, ಅದು ಎಲ್ಲಿ ಹೋಗಿದೆ. ಸಾಕ್ಷರತೆ ಹೆಚ್ಚಿರುವಲ್ಲಿ ತಾಳ್ಮೆ, ಸಂಯಮವೂ ಹೆಚ್ಚಿರಬೇಕು. ಎಲ್ಲರನ್ನೂ ಒಟ್ಟಿಗೆ ಒಯ್ಯುವ ಮನಸ್ಸಿತಿ ನಮಲ್ಲಿ ಇರಬೇಕು. ಅದಕ್ಕೆ ಪೂರಕವಾಗಿ ಮಾಧ್ಯಮಗಳ ಜವಾಬ್ಧಾರಿಯೂ ಇದೆ. ಆದರೆ ಜನಪ್ರತಿನಿಧಿಗಳು ಮಾತ್ರವಲ್ಲದೆ, ಮಾದ್ಯಮಗಳು ಕೂಡಾ ಜಿಲ್ಲೆಯಲ್ಲಿ ನಡೆಯುವ ಗಲಭೆಗೆ ಪೂರಕವಾಗಿ ಮಾತನಾಡುವಾಗ ನೋವಾಗುತ್ತದೆ ಎಂದವರು ಹೇಳಿದರು.

ಸಮಿತಿಯ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಐವನ್ ಡಿಸೋಜಾ, ಪದ್ಮರಾಜ್, ಶಶಿಧರ ಹೆಗ್ಡೆ, ಸತ್ಯಪ್ರಕಾಶ್, ಗಫ್ಮರ್, ರಕ್ಷಿತ್ ಶಿವರಾಂ, ಮಿಥುನ್ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article