
ಎಮ್ಮೆಕೆರೆ ಸ್ವಿಮ್ಮಿಂಗ್ನ ಆಡಳಿತ ಮಂಡಳಿ ಈಜು ಪಟುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ: ಆರೋಪ
ಮಂಗಳೂರು: ಎಮ್ಮೆಕೆರೆಯ ಸ್ಮಾರ್ಟ್ ಸಿಟಿ ಸ್ವಿಮ್ಮಿಂಗ್ನ ಆಡಳಿತ ಮಂಡಳಿಯು ಈಜು ಪಟುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲವೆಂದು ದ.ಕ. ಜಿಲ್ಲೆಯ ಈಜು ಸಂಸ್ಥೆ ಗಂಭೀರವಾಗಿ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಈಜು ಪಟುಗಳು 1987 ರಿಂದ ನಗರದ ಮಹಾನಗರ ಪಾಲಿಕೆಯ ಮಂಗಳಾ ಈಜು ಕೊಳದಲ್ಲಿ ಅಭ್ಯಸಿಸುತ್ತಿದ್ದು, ಪ್ರಸ್ತುತ ಬೆಳಗ್ಗೆ 5 ರಿಂದ 7 ಗಂಟೆ ಮತ್ತು ಸಂಜೆ 7.30 ರಿಂದ 9.30ರವರೆಗೆ ಅಭ್ಯಸಿಸುತ್ತಿದ್ದು, ರಾತ್ರಿಯ ಅಭ್ಯಾಸವನ್ನು 9.30 ಗಂಟೆಗೆ ಮುಗಿಸಿ ಮನೆ ತಲುಪಿ ತಮ್ಮ ದೈನಂದಿನ ಕೆಲಸಗಳನ್ನು ಮಾಡಿ ಮಲಗುವಾಗ ರಾತ್ರಿ 11 ಗಂಟೆಯಾಗುತ್ತಿದ್ದು, ಬೆಳಗ್ಗೆ 4 ಗಂಟೆಗೆ ಎದ್ದು ಬೆಳಗ್ಗಿನ ಅಭ್ಯಾಸವನ್ನು 5 ರಿಂದ 6.30 ಗಂಟೆಯವರೆಗೆ ಮಾಡಿ, ಕೇವಲ 5 ಗಂಟೆಯ ವಿಶ್ರಾಂತಿ ಈಜು ಪಟುಗಳಿಗೆ ದೊರೆಯುತ್ತಿದ್ದು, ವಿಶ್ರಾಂತಿಯ ಅಭಾವದಿಂದ ಈಜು ಪಟುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತ ದೇಶದಲ್ಲಿಯೇ ಸಂಜೆ 7.30 ರಿಂದ 9.30 ರವರೆಗೆ ಅಭ್ಯಾಸವನ್ನು ಕೇವಲ ಮಂಗಳಾ ಈಜು ಕೊಳದಲ್ಲಿ ಮಾತ್ರ ಮಾಡುತ್ತಿದ್ದು, ಉಳಿದ ಎಲ್ಲಾ ಈಜು ಕೊಳದಲ್ಲಿ ಅಭ್ಯಾಸಕ್ಕೆ ಪ್ರಾಶಸ್ಥವಾದ ಬೆಳಿಗ್ಗೆ 5 ರಿಂದ 7 ಗಂಟೆ ಮತ್ತು ಸಂಜೆ 6 ರಿಂದ 8 ಗಂಟೆಯವರೆಗೆ ಮಾಡುತ್ತಿದ್ದು, ನಮ್ಮ ಈಜು ಪಟುಗಳ ಕ್ರೀಡಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಕ್ಷರಾದ ಯತೀಶ್ ಬೈಕಂಪಡಿಯವರು ತಿಳಿಸಿದ್ದಾರೆ.
ಕಳೆದ ಸುಮಾರು 15 ವರುಷಗಳಿಂದ ಎಲ್ಲಾ ಜನಪ್ರತಿನಿದಿಗಳಲ್ಲಿ ಕ್ರೀಡಾ ಈಜು ಪಟುಗಳಿಗೆ ಪರ್ಯಾಯವಾದ ಈಜು ಕೊಳದ ಆಗತ್ಯತೆಯ ಬಗ್ಗೆ ಮನವಿ ಮಾಡಿದ ಫಲವಾಗಿ ಈಗ ಎಮ್ಮೆಕೆರೆಯ ಸ್ಮಾರ್ಟ್ ಸಿಟಿಯ ವತಿಯಿಂದ ನಿರ್ಮಿಸಿದ ಈಜುಕೊಳವು ಕೇವಲ ಕ್ರೀಡಾ ಈಜುಪಟುಗಳಿಗಾಗಿ ನಿರ್ಮಿಸಿದ್ದಾರೆಂದು ತಿಳಿಸಿದ್ದಾರೆ.
ವಿಪರ್ಯಾಸವೆಂದರೆ ಕಳೆದ ಡಿಸೆಂಬರ್ 2024ರ ವರೆಗೆ ಸೂಕ್ತವಾದ ಸಮಯದಲ್ಲಿ ಎಮ್ಮೆಕೆರೆಯ ಈಜು ಕೊಳದಲ್ಲಿ ಅಭ್ಯಸಿಸುತ್ತಿದ್ದು ಈಜು ಕೊಳವನ್ನು ಏಕಾಏಕಿ ಮಂಗಳೂರಿನ ವಿ ವನ್ ಅಕ್ವಾಟಿಕ್ ಸಂಸ್ಥೆಗೆ ಟೆಂಡರ್ ಮೂಲಕ ವಹಿಸಿಕೊಟ್ಟಿದ್ದು ಸೂಕ್ತವಾದ ಸಮಯದಲ್ಲಿ ಈಜು ಪಟುಗಳಿಗೆ ಪ್ರವೇಶ ನಿರಾಕರಿಸಿರುತ್ತಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಆದ ಅನ್ಯಾಯವನ್ನು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮತ್ತು ಉಸ್ತುವಾರಿ, ಸಚಿವರ, ಜಿಲ್ಲಾಧಿಕಾರಿಗಳ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು. ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜರವರು ಕಲಾಪದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿಗಳ ಉತ್ತರದಲ್ಲಿ 50X25 ಮೀಟರ್ ಈಜು ಕೊಳವು ದಿನದ 11 ಗಂಟೆ ಕೇವಲ ಕ್ರೀಡಾ ಈಜುಪಟುಗಳಿಗೆ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ 38 ಪದಕ ವಿಜೇತರಾದವರಿಗೆ ಮಂಗಳಾ ಈಜು ಕೊಳದಲ್ಲಿ ಉಚಿತ ಪ್ರವೇಶವಿದ್ದು, ಎಮ್ಮೆಕೆರೆಯ ಈಜು ಕೊಳವು ಸರಕಾರದ ಈಜು ಕೊಳವಾಗಿದ್ದರಿಂದ ಇಲ್ಲಿಯೂ ಉಚಿತ ಪ್ರವೇಶಕ್ಕಾಗಿ ಮನವಿಗೆ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ರವರು ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿದ್ದಾರೆ.
2 ತಿಂಗಳು ಕಳೆದರೂ ಮುಖ್ಯ ಮಂತ್ರಿಗಳು, ಮಾನ್ಯ ಉಸ್ತುವಾರಿ ಸಚಿವರು, ವಿಧಾನ ಸಭಾಧ್ಯಕ್ಷರು, ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜರವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳ ಮೂಲಕ ಆದೇಶಿಸಿದ್ದರೂ ಈವರೆಗೆ ಇದರ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಮೇಲಿನ ಎಲ್ಲಾ ಜನಪ್ರತಿನಿಧಿಗಳ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 24.94 ಕೋಟಿ ರೂ ಅನುದಾನದಲ್ಲಿ ಆರಂಭಗೊಂಡ ಎಮ್ಮೆಕೆರೆ ಈಜುಕೊಳದ ನಿರ್ವಹಣೆಗೆ ಪ್ರತೀ ತಿಂಗಳು ರೂ.5 ಲಕ್ಷದ ಅಂದಾಜು ಮಾಡಿದ್ದು ಈಜು ಕೊಳವನ್ನು ನಿರ್ಮಿಸಿದ ಗುತ್ತಿಗೆದಾರನಿಗೆ 3 ವರ್ಷಕ್ಕೆ ರೂ.2 ಕೋಟಿಯನ್ನು ಯೋಜನೆಯಲ್ಲಿ ಕಾಯ್ದಿರಿಸಿದ್ದು ಇದರ ಹೊರತಾಗಿಯೂ ಖಾಸಗಿಯವರಿಗೆ ನಡೆಸಲು ಕೊಟ್ಟಿದ್ದು, ಖಾಸಗಿಯವರು ಅವರ ಬಳಿಯೇ ತರಬೇತಿ ಪಡೆಯಲು ಶರ್ತ ವಿಧಿಸಿರುವುದು, ಅವ್ಯವಹಾರ ನಡೆದಿದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಟೆಂಡರುದಾರರು ಹೇಳಿದ ಹಾಗೆ ಹೊರರಾಜ್ಯದ ಕ್ರೀಡಾಪಟುಗಳು ಅಭ್ಯಸಿಸುತ್ತಿದ್ದು ದ.ಕ ಜಿಲ್ಲೆಯನ್ನು ಪ್ರತಿನಿಧಿಸುವ ಈಜು ಪಟುಗಳು ಅವಕಾಶ ವಂಚಿತರಾಗಿದ್ದು ಹೊರರಾಜ್ಯದ ಈಜುಪಟುಗಳು, ದಕ್ಷಿಣ ಕನ್ನಡ ಜಿಲ್ಲೆಯಾಗಲೀ, ಕರ್ನಾಟಕ ರಾಜ್ಯವನ್ನಾಗಲೀ ಪ್ರತಿನಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕ್ರೀಡಾ ಈಜು ಪಟುಗಳಿಗಾಗಿ, ನುರಿತ ತಜ್ಞರ ಮತ್ತು ಸಲಹೆಗಾರರ ಅಭಿಪ್ರಾಯ ಪಡೆದು 24.94 ಕೋಟಿ ರೂ.ವ್ಯಯಿಸಿ, ವಿಶ್ವ ಮತ್ತು ಒಲಂಪಿಕ್ ದರ್ಜೆಯ ಈಜು ಕೊಳವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಮಾರ್ಪಡಿಸಿರುವುದು ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು ಕೂಡಲೇ ಕ್ರಮ ಕೈಗೊಳ್ಳಲು ಮಾನ್ಯ ಜಿಲ್ಲಾಧಿಕಾರಿಯವರಿಗೆ ದಿನಾಂಕ 31.05.2025 ಆದೇಶಿಸಿರುತ್ತಾರೆ. ಈವರೆಗೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಇದರಲ್ಲಿ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಜನರಲ್ ಮ್ಯಾನೇಜರ್ ಮತ್ತು ಯುವ ಜನ ಸಬಲೀಕರಣ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಭಾಗಿಯಾಗಿರುವ ಸಂಶಯವನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯೋಗಿಶ್ ಭಟ್, ಡಾ. ಮೋಹನ್ ಆಳ್ವ, ಮಹೇಶ ಕುಮಾರ್, ಡಿ. ಕಣ್ಣನ್ ಉಪಸ್ಥಿತರಿದ್ದರು.