
ರಥಬೀದಿ ಕಾಲೇಜಿನಲ್ಲಿ ಒಂದು ವಾರದ ಯುಜಿಸಿ ನೆಟ್/ಕೆಸೆಟ್ ತರಬೇತಿ ಕಾರ್ಯಕ್ರಮ
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುಜಿಸಿ ನೆಟ್ ಮತ್ತು ಕೆಸೆಟ್ ಪರೀಕ್ಷೆಗಳಿಗಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಅವರು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಈ ತರಬೇತಿಯು ಬೋಧಕ ಹಾಗೂ ಸಂಶೋದಕ ವೃತ್ತಿಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು, ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸೂಚಿಸಿದರು. ಮುಂಬರುವ ದಿನಗಳಲ್ಲಿ ಪರೀಕ್ಷಾ ತಂತ್ರಗಳು, ಸಂಶೋಧನಾ ವಿಧಾನಗಳು ಸೇರಿದಂತೆ ಇತರ ವಿವಿಧ ವಿಷಯಗಳ ಮೇಲೆ ಕೂಡಾ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕ ದೇವಿಪ್ರಸಾದ್ ಇವರು ಯುಜಿಸಿ ನೆಟ್ ಮತ್ತು ಕೆಸೆಟ್ ಪರೀಕ್ಷಾ ರಚನೆ ಮತ್ತು ತಯಾರಿ ತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಜಯ್ ಅವರು ‘ಸಂಶೋಧನಾ ವಿಧಾನ: ತತ್ವಗಳು ಮತ್ತು ಪ್ರಾಯೋಗಿಕ ವಿಧಾನ’ ವಿಷಯದ ಮೇಲೆ ತರಬೇತಿ ನೀಡಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಮಾಲತಿ ಕೆ. ಸ್ವಾಗತಿಸಿದರು. ಸ್ನಾತಕೋತ್ತರ ಸಂಯೋಜಕರಾದ ಡಾ. ಲೋಕೇಶನಾಥ್ ಬಿ. ಮತ್ತು ನಸೀಮಾ ಬೇಗಂ ಅವರು ಹಾಜರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ನವಿತಾ ಮತ್ತು ಅರ್ಪಿತಾ ಅವರು ನಿರ್ವಹಿಸಿದರು. ಶ್ರೀವತ್ಸ ಮತ್ತು ಚಂದ್ರಕಲಾ ಅವರು ಅತಿಥಿಗಳನ್ನು ಪರಿಚಯಿಸಿದರು. ವೈಷ್ಣವಿ ಮತ್ತು ದ್ವಾನಿಷಾ ವಂದಿಸಿದರು. ಶಿವಾನಿ ಮತ್ತು ಮೇಘನಾ ಅವರ ನೇತೃತ್ವದ ತಂಡ ಪ್ರಾರ್ಥನೆ ಪ್ರಸ್ತುತಪಡಿಸಿತದರು. ಕಾಲೇಜಿನ 150ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.