
ಕರಾವಳಿ ಕೇಸರಿ ಸೇವಾ ಟ್ರಸ್ಟ್ನಿಂದ ದರೆಗುಡ್ಡೆ ಶಾಲಾ ಮಕ್ಕಳಿಗೆ 57000 ರೂ. ಮೌಲ್ಯದ ಪುಸ್ತಕ ವಿತರಣೆ
Wednesday, June 11, 2025
ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ.) ಬೆದ್ರ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇವರ ವತಿಯಿಂದ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಶಾಲೆಯ ವಿದ್ಯಾರ್ಥಿಗಳಿಗೆ 57000 ರೂ. ಮೌಲ್ಯದ ಬರೆಯುವ ನೋಟ್ ಬುಕ್ಗಳನ್ನು ಉಚಿತವಾಗಿ ಬುಧವಾರ ವಿತರಸಲಾಯಿತು.
ಶಾಸಕ ಉಮಾನಾಥ ಎ. ಕೋಟ್ಯಾನ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಕರಾವಳಿ ಕೇಸರಿ ಟ್ರಸ್ಟ್ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ ಸ್ಥಾಪಕರಾದ ಸಮಿತ್ ರಾಜ್ ದರೆಗುಡ್ಡೆ ಅವರ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಯನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು, ಅನಾರೋಗ್ಯದಲ್ಲಿ ಇರುವವರಿಗೆ ಸಹಾಯಧನವನ್ನು ನೀಡುತ್ತಾ ಇಲ್ಲಿಯವರೆಗೆ ಟ್ರಸ್ಟ್ 2000ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಿರುವುದು ಅತ್ಯಂತ ಸಂತೋಷದಾಯಕ ವಿಚಾರ ಎಂದು ಸಮಾಜಮುಖಿ ಕೆಲಸದ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು.
ದರೆಗುಡ್ಡೆ ಗ್ರಾಮ ಪಂಚಾಯತ್ನ ಅಧ್ಯಕ್ಷ ಅಶೋಕ್ ಶೆಟ್ಟಿ ಬೆಲೋಟ್ಟು, ಉಪಾಧ್ಯಕ್ಷೆ ನಳಿನಿ, ಸದಸ್ಯ ಮುನಿರಾಜ್ ಹೆಗ್ಡೆ, ಕರಾವಳಿ ಕೇಸರಿ ಸೇವಾ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಧುರ, ಉದ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಕೊಡುಗೈ ದಾನಿ ಆರ್ಆರ್ ಫ್ಯಾಶನ್ನ ಮಾಲಕ ರಾಜೇಶ್ ಕೊಟ್ಯಾನ್, ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ದೇವಾಡಿಗ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮೀರಾ ಡಯಾಸ್ ವಂದಿಸಿದರು.