ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ: ಪದ್ಮರಾಜ್ ಆರ್.ಪೂಜಾರಿ

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ: ಪದ್ಮರಾಜ್ ಆರ್.ಪೂಜಾರಿ


ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಇಲ್ಲಿನ ಸಾಮಾಜಿಕ, ಧಾರ್ಮಿಕ, ಸಂಘ ಸಂಸ್ಥೆಗಳ ಪ್ರಮುಖರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಪೂರ್ಣವಾದ ಸ್ವಾತಂತ್ರ್ಯ ಇರುವುದನ್ನು ಖಾತರಿಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಇಂದು ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿ, ಜಿಲ್ಲೆಯ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿದ್ದಲ್ಲಿ ನಾಯಕರನ್ನು ಕರೆಸಿ ಪ್ರಚೋದನೆ ನೀಡುವುದನ್ನು ಬಿಟ್ಟು ಶಾಂತಿ ನೆಲೆಸುವ ಸಂದೇಶ ಸಮಾಜಕ್ಕೆ ನೀಡುವಂತೆ ವಿನಂತಿಸಬೇಕಿತ್ತು. ಆದರೆ ಬಿಜೆಪಿ ನಾಯಕರು ಇಲ್ಲಿ ಬಂದು ಪೊಲೀಸರ ಆತ್ಮಸ್ಥೈರ್ಯ ಕೆಡಿಸುವ, ಅವರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಹಿಂದಿನಿಂದಲೂ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವ ಪಕ್ಷ ಎಂದು ಹೇಳಿದ ಅವರು, ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ರಾಜ್ಯ ಸರಕಾರ ಘೋಷಿಸಿರುವಂತೆ ವಿಶೇಷ ಕಾರ್ಯಪಡೆಯ ರಚನೆಯಾಗಿದ್ದು, ಜೂ.೧೩ರಂದು ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ಈ ಕಾರ್ಯಪಡೆಯ ವಿಶೇಷ ಘಟಕ ಆರಂಭಗೊಳ್ಳಲಿದೆ ಎಂದರು.

ದ.ಕ. ಜಿಲ್ಲೆಯ ಸಂಸದರಾಗಿ ಬ್ರಿಜೇಶ್ ಚೌಟ ಒಂದು ವರ್ಷ ಪೂರೈಸಿದ್ದಾರೆ. ಅವರಿಗೆ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಸಮಯಾವಕಾಶ ಇದೆ. ಚುನಾವಣೆಯಲ್ಲಿ ನನಗೆ ಜಿಲ್ಲೆಯ 6,14,923 ಮಂದಿ ಮತ ನೀಡಿದ್ದಾರೆ. ಹಾಗಾಗಿ ಜನರ ಹಿತದೃಷ್ಟಿ ಕಾಯ್ದುಕೊಳ್ಳುವ ಜವಾಬ್ಧಾರಿ ನನಗೂ ಇದೆ. ಅವರ ಬಗ್ಗೆ ಟೀಕೆ ಮಾಡುತ್ತಿಲ್ಲ. ಕೆಲವೊಂದು ವಿಚಾರಗಳನ್ನು ಅವರ ಗಮನಕ್ಕೆ ತರಲು ಇಚ್ಚಿಸುತ್ತಿದ್ದೇನೆ. ಗೇಲ್ ಟೇಕ್ ಓವರ್ ಮಾಡಿರುವ ಜೆಬಿಎಫ್ ಕಂಪನಿಯು ಭೂಮಿ ಕಳೆದುಕೊಂಡ ಮನೆಯವರಿಗೆ ಶಾಶ್ವತ ಉದ್ಯೋಗ, ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕಾಗಿ ಆ ಭಾಗದ ರಸ್ತೆಯಲ್ಲಿ ಸಂಚಾರ ಸ್ಥಗಿತ ಆಗಿ ಹಲವು ವರ್ಷಗಳಾಗಿವೆ. ಅದನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಕೆಲಸವಾಗಲಿ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ಗಲ್ಫ್ ದೇಶಗಳ ನಡುವೆ ಮಾತ್ರವೇ ವಿಮಾನ ಸಂಚಾರ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿದ ಸಿಂಗಾಪುರ ಏರ್‌ಲೈನ್ಸ್ ಎಲ್ಲಿಗೆ ಹೋಯಿತು. ಮುಂಬೈ ಮಂಗಳೂರು ನಡುವೆ ಹೆಚ್ಚುವರಿ ವಿಮಾನ ಸಂಚಾರಕ್ಕೆ ಅವಕಾಶಕಲ್ಪಿಸುವುದು, ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಂಸದರು ಆದ್ಯತೆ ನೀಡಲಿ ಎಂದು ಹೇಳಿದರು.

ಸ್ಥಳೀಯ ಶಾಸಕ ವೇದವ್ಯಾಸ ಕಾಮತರು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕರ ಬಾಯಲ್ಲಿ ಇಂತಹ ಮಾತುಗಳು ಬರಬಾರದು. ಕರ್ನಾಟಕದ ಪೊಲೀಸರಿಗೆ ವಿಶೇಷ ಗೌರವ ಇದೆ. ಜವಾಬ್ಧಾರಿಯುತ ಸ್ಥಾನದಲ್ಲಿರುವ ಶಾಸಕರು ತಮ್ಮ ಮಾತಿನ ಮೇಲೆ ಎಚ್ಚರ ವಹಿಸಬೇಕು. ಅಭಿವೃದ್ಧಿ ವಿಚಾರದಲ್ಲಿ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಶಾಸಕರು ಸಚಿವರ ಜೊತೆ ಚರ್ಚಿಸಿ ಸಲಹೆ ನೀಡಲಿ. ಆದರೆ ಈ ರೀತಿಯ ವರ್ತನೆ ಶಾಸಕರಾಗಿ ಆಯ್ಕೆ ಮಾಡಿದ ಜನರನ್ನು ವಂಚಿಸಿದಂತೆ ಎಂದು ಪದ್ಮರಾಜ್ ಹೇಳಿದರು.

ಮಧ್ಯರಾತ್ರಿಯಲ್ಲಿ ಪೊಲೀಸರು ನಾಯಕರ ಮನೆಗಳಿಗೆ ತೆರಳಿ ತೊಂದರೆ ನೀಡುತ್ತಿರುವ ಬಗ್ಗೆ ಬಿಜೆಪಿ ನಾಯಕರ ಆಕ್ಷೇಪ ಎಂಬ ಸುದ್ದಿಗಾರರ ಪ್ರಶ್ನೆಗೆ, ಮಧ್ಯರಾತ್ರಿ ಪೊಲೀಸರು ಯಾರಿಗಾಗದರೂ ತೊಂದರ ನೀಡುವ ಬಗ್ಗೆ ನಮ್ಮದೂ ಆಕ್ಷೇಪವಿದೆ. ಆದರೆ, ಪೊಲೀಸ್ ಇಲಾಖೆಗೆ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ನೋಟೀಸು ನೀಡುವ ಮುನ್ನ ಕೆಲವೊಂದು ಪ್ರಕ್ರಿಯೆಗಳಿರುತ್ತವೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಿ, ಅದು ಬಿಟ್ಟು ಪೊಲೀಸರನ್ನು ಬೆದರಿಸುವ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂದರು.

ಹಿಂದೆ ಫಯಾಝ್ ಹತ್ಯೆ ಆದಾಗ ಆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ತಮಗೆ ಸಂಬಂಧವೇ ಇಲ್ಲ ಎಂದಿದ್ದವರು, ಈಗ ಆತ ತಮ್ಮ ಕಾರ್ಯಕರ್ತ ಎಂದು ಹೇಗೆ ಹೇಳುತ್ತಾರೆ. ಕೋಮು ಗಲಭೆಗೆ ಸಂಬಂಧಿಸಿ ಭಾಗಿಯಾದವರು ಜೈಲಿನಿಂದ ಹೊರಬಂದಾಗ ಅವರಿಗೆ ಹೂಹಾರ ಹಾಕಿ ಸ್ವಾಗತಿಸುತ್ತಿರುವುದರಿಂದಲೇ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಯುವಕರು ಹಾದಿ ತಪ್ಪುತ್ತಿದ್ದಾರೆ. ಹೆಣಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಜಾಯಮಾನ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಪ್ರತಿಕ್ರಿಯಿಸಿದರು.

ರೆಹಮಾನ್ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡುವಲ್ಲಿ ಪೊಲೀಸ್ ಇಲಾಖೆ ವಿಳಂಬ ಮಾಡುತ್ತಿರುವ ಕುರಿತ ಪ್ರಶ್ನೆಗೆ, ತನಿಖೆಯ ವಿಚಾರದಲ್ಲಿ ನಾವು ಯಾರೂ ಹಸ್ತಕ್ಷೇಪ ಅಥವಾ ಪ್ರತಿಕ್ರಿಯೆ ನೀಡುವಂತಿಲ್ಲ. ಕೆಲವೊಂದು ವಿಚಾರಗಳಲ್ಲಿ ಪೊಲೀಸರು ಗೌಪ್ಯತೆ ಕಾಪಾಡಿಕೊಂಡಿರುತ್ತಾರೆ. ತಾಳ್ಮೆ ಇರಲಿ, ಉತ್ತಮ ಅಧಿಕಾರಿಗಳು ಇದ್ದಾರೆ. ಪಕ್ಷಪಾತ ಇಲ್ಲದೆ ತನಿಖೆ ನಡೆಸಲಿದ್ದಾರೆ ಎಂದು ಪದ್ಮರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮುಖಂಡರಾದ ನವೀನ್ ಡಿಸೋಜಾ, ಪ್ರಕಾಶ್ ಸಾಲಿಯಾನ್, ನೀರಜ್ ಪಾಲ್, ಕೇಶವ ಮರೋಳಿ, ಲಾರೆನ್ಸ್ ಡಿಸೋಜಾ ಸುಹಾನ್ ಆಳ್ವ, ಶುಭೋದಯ ಆಳ್ವ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article