
ಪಿಲಿಕುಳ ಹಣ್ಣುಗಳ ಮೇಳಕ್ಕೆ ಚಾಲನೆ
ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿರುವ ಎರಡು ದಿನಗಳ ಹಣ್ಣುಗಳ ಮೇಳ-2025ಕ್ಕೆ ಪಿಲಿಕುಳದ ಅರ್ಬನ್ ಹಾತ್ನಲ್ಲಿ ಶನಿವಾರ ಚಾಲನೆ ದೊರಕಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲಸು, ಮಾವಿನ ಹಣ್ಣಿನ ಜತೆಗೆ, ಇತರ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ರೈತರು, ಕುಶಲಕರ್ಮಿಗಳು ಹಾಗೂ ಗೃಹೋದ್ಯಮಿಗಳ ಮಳಿಗೆಗಳು ಮೇಳದಲ್ಲಿವೆ. ಮಾವು, ಹಲಸು, ಅವಕಾಡೊ, ನೇರಳೆ, ಕಿತ್ತಳೆ ಹಣ್ಣುಗಳ ಮಾರಾಟದ ಜತೆಗೆ ಹಣ್ಣು ಹಂಪಲುಗಳ ಗಿಡಗಳು ಮಾರಾಟ ಹಾಗೂ ಪ್ರದರ್ಶನಕ್ಕಿಡಲಾಗಿದೆ. ಹಲಸಿನ ಹಣ್ಣಿನ ಬಿಸಿಬಿಸಿ ಹೋಳಿಗೆ, ಗಾರಿಗೆ, ಕಬಾಬ್, ಮಶ್ರೂಮ್ನ ಮೊಮೋಸ್ ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಮಳಿಗೆಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಮಹಿಳಾ ಗೃಹೋದ್ಯಮಿಗಳು ತಯಾರಿಸಿದ ಕರಕುಶಲ ವಸ್ತುಗಳು, ತಿಂಡಿ ತಿನಿಸಗಳು, ಜೋಳದ ರೊಟ್ಟಿ, ಚಟ್ನಿ ಪುಡಿಯೂ ಇಲ್ಲಿ ಮಾರಾಟಕ್ಕಿಡಲಾಗಿದೆ. ಮೇಳದಲ್ಲಿ ಹೂವಿನ ಗಿಡಗಳು, ಮಹಿಳೆಯರು ಮತ್ತು ಪುರುಷರ ಉಡುಪುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಮಳಿಗೆಗಳೂ ಪಾಲು ಪಡೆದಿವೆ. ರಂಗ ಚಲನ ತಂಡದಿಂದ ವೃಕ್ಷ ದೇವೋಭವ ಎಂಬ ಬೀದಿ ನಾಟಕ ಪ್ರದರ್ಶಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಮೇಳವನ್ನು ಉದ್ಘಾಟಿಸಿದರು. ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷ ಅನಿಲ್, ಜೈವಿಕ ಉದ್ಯಾನವನದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಕಾರಿ ಪ್ರಶಾಂತ್ ಕುಮಾರ್ ಪೈ, ಪಿಲಿಕುಳದ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್., ಜೈವಿಕ ಉದ್ಯಾನವನದ ಡಾ. ಅಶೋಕ್ ಕೆ.ಆರ್. ಆಡಳಿತಾಧಿಕಾರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.