
ಐವನ್ ಡಿಸೋಜ ಮೊದಲು ರಾಜ್ಯಪಾಲರ ವಿರುದ್ಧವಾಗಿ ಮಾತನಾಡಿರುವುದಕ್ಕೆ ಸ್ಪಷ್ಟನೆ ನೀಡಲಿ: ಅರುಣ್ ಜಿ. ಶೇಟ್
ಮಂಗಳೂರು: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಪಕ್ಷದ ಮತ್ತು ಹಿಂದು ಕಾರ್ಯಕರ್ತರನ್ನು ಹಣಿಯುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದ್ದು, ರಾತ್ರಿ ವೇಳೆಯಲ್ಲಿ ಪೊಲೀಸರು ಮನೆಗಳಿಗೆ ಪ್ರವೇಶಿಸಿ ಫೋಟೋಗಳನ್ನು ತೆಗೆಸುವುದು. ಕಾರ್ಯಕರ್ತರನ್ನು ಬೆದರಿಸುವುದರ ವಿರುದ್ಧ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ರಾಜ್ಯ ನಾಯಕರ ನಿಯೋಗ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಮಾಹಿತಿಯನ್ನು ಪಡೆದುಕೊಂಡ ಬಳಿಕ ಪೊಲೀಸ್ ಇಲಾಖೆಯ ತಾರತಮ್ಯದ ನಡೆಯ ವಿರುದ್ಧ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಅನಗತ್ಯವಾಗಿ ಕಿರುಕುಳ ನೀಡುವುದನ್ನು ನಿಲ್ಲಿಸಲು ಆಗ್ರಹಿಸಲಾಯಿತು. ಇದರ ಬಗ್ಗೆ ಐವನ್ ಡಿ’ಸೋಜ ಅವರು ಪೊಲೀಸರ ಸ್ಥೈರ್ಯ ಕುಗ್ಗಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ ಎನ್ನುವ ಮಾತನಾಡಿದ್ದಾರೆ.
ಐವನ್ ಡಿ’ಸೋಜ ಮೊದಲು, ಸಾಂವಿಧಾನಿಕ ಸ್ಥಾನಮಾನದ ರಾಜ್ಯಪಾಲರ ವಿರುದ್ಧ ಮಾತನಾಡಿರುವ ಬಗ್ಗೆ ಸ್ಪಷ್ಟನೆ ಕೊಡಲಿ. ಕಾಂಗ್ರೆಸ್ನ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಯನ್ನು ಗದರಿಸಿ, ಮೈ ಮೇಲೆ ಕೈ ಹಾಕುವ ತನಕ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃತ್ಯವನ್ನು ಖಂಡಿಸಲಿ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣದಲ್ಲಿ ನಿರಪರಾಧಿಗಳಾದ ಪೊಲೀಸ್ ಅಧಿಕಾರಿಗಳನ್ನು ಅಮಾನುತು ಗೊಳಿಸಿರುವ ಕಾಂಗ್ರೆಸ್ ಸರ್ಕಾರದ ನಡೆಗೆ ಖಂಡನೆ ವ್ಯಕ್ತಪಡಿಸಲಿ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಆಗ್ರಹಿಸಿದ್ದಾರೆ.
ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎಗೆ ವಹಿಸಿರುವ ಬಗ್ಗೆ ಮಾತನಾಡಿರುವ ಐವನ್ ಅವರು ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದೆ ಆದ್ದರಿಂದ ಉಳಿದ ಹತ್ಯೆಗಳ ಪ್ರಕರಣವನ್ನು ಎನ್ಐಎಗೆ ನೀಡಲು ಶಿಪಾರಸ್ಸು ಮಾಡಲಿ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.