
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ
ಮಂಗಳೂರು: ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ ಮಂಗಳೂರು, ತಪಸ್ವಿ ಸ್ಕೂಲ್ ಆಫ್ ಯೋಗ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಸಹಯೋಗದಲ್ಲಿ ಯೋಗ ವಿಜ್ಞಾನದ ಹರಿಕಾರ ದಿ.ಡಾ.ಕೆ.ಕೃಷ್ಣ ಭಟ್ ಸ್ಮರಣಾರ್ಥ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ನಗರದ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಈ ಸ್ಪರ್ಧೆಯು ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ 14 ವಿಭಿನ್ನ ವಿಭಾಗಗಳನ್ನು ಒಳಗೊಂಡಿದ್ದು, 250 ಕ್ಕಿಂತಲೂ ಅಧಿಕ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸ್ಪಧೆಯಲ್ಲಿ ತುಳುನಾಡ ಯೋಗ ಕುಮಾರ-2025 ಮತ್ತು ತುಳುನಾಡ ಯೋಗ ಕುಮಾರಿ-2025 ಆಯ್ಕೆ ನಡೆಯಲಿದೆ ಎಂದು ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಭಾಗಗಳು..:
9 ಹಾಗೂ 14 ವರ್ಷದ ಒಳಗಿನ ಬಾಲಕ-ಬಾಲಕಿಯರು, 18 ಮತ್ತು 25 ವರ್ಷ ಒಳಗಿನ ಯುವಕ- ಯುವತಿಯರು, 35 ಮತ್ತು 50 ವರ್ಷ ಒಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ನಿಯಮ..:
ಎಲ್ಲ ಸ್ಪರ್ಧಿಗಳು ಬೆಳಗ್ಗೆ 9.30 ಒಳಗೆ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರಬೇಕು. ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶವಿರುತ್ತದೆ. ವಯಸ್ಸು ಮತ್ತು ವಿಳಾಸ ದೃಢೀಕರಣಕ್ಕೆ ಆಧಾರ್ ಕಾರ್ಡ್ ಪ್ರತಿ ತರುವುದು ಕಡ್ಡಾಯ. 35 ವರ್ಷದ ಒಳಗಿನ ಸ್ಪರ್ಧಾಳುಗಳು ಚಿತ್ರದಲ್ಲಿ ಕಾಣಿಸಿರುವ ಯಾವುದಾದರು ಕಡ್ಡಾಯ 3 ಆಸನ ಹಾಗೂ 2 ಐಚ್ಛಿಕ ಆಸನಗಳನ್ನು ಪ್ರದರ್ಶಿಸಬೇಕು.
35 ವರ್ಷ ವಯೋಮಿತಿಯ ಮೇಲ್ಪಟ್ಟವರು ತಮ್ಮ ಇಚ್ಛೆಯ 4 ಆಸನಗಳನ್ನು ಪ್ರದರ್ಶಿಸುವುದು. ಯಾವುದೇ ಕಡ್ಡಾಯ ಆಸನಗಳೆಂಬ ನಿಯಮ ಇವರಿಗೆ ಅನ್ವಯಿಸುವುದಿಲ್ಲ. ಅಂಕಗಳನ್ನು ಆಸನದ
ಕಠಿಣತೆಯ ಆಧಾರದ ಮೇಲೆ ನೀಡಲಾಗುವುದು. ಎಲ್ಲ ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಪುರುಷ ಹಾಗೂ ಮಹಿಳಾ ಯೋಗ ಪಟುಗಳಿಗೆ ಸ್ಪರ್ಧೆಯ ಕೊನೆಯಲ್ಲಿ ಪ್ರತ್ಯೇಕ ಚಾಂಪಿಯನ್ ಆಫ್ ಚಾಂಪಿಯನ್ ಸ್ಪರ್ಧೆ ಏರ್ಪಡಿಸಿ ಪ್ರಥಮ ಸ್ಥಾನ ಪಡೆದ ಪುರುಷ ಯೋಗಪಟುಗಳಿಗೆ ತುಳುನಾಡ ಯೋಗ ಕುಮಾರ-2025’ ಹಾಗೂ ಮಹಿಳಾ ಯೋಗ ಪಟುಗಳಿಗೆ ತುಳುನಾಡ ಯೋಗ ಕುಮಾರಿ-2025 ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಡಾ.ಸುರೇಶ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಟ್ರಸ್ಟ್ನ ಸಂಚಾಲಕ ಡಾ.ರಂಗಪ್ಪ ಎಚ್.ಜಿ., ಉಪಾಧ್ಯಕ್ಷೆ ವಿದ್ಯಾ ಕಾಮತ್, ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಫುಲ್ಲ ಮತ್ತು ಪ್ರತ್ಯಕ್ಷ ಕುಮಾರ್ ಉಪಸ್ಥಿತರಿದ್ದರು.