
ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣ ಎನ್ಐಎಗೆ ಯಾಕೆ ನೀಡಿಲ್ಲ: ಹರೀಶ್ ಕುಮಾರ್ ಪ್ರಶ್ನೆ
ಮಂಗಳೂರು: ದಕ್ಷಿಣ ಕನ್ನಡದಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಗಳಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಮಾತ್ರ ಎನ್ಐಎಗೆ ನೀಡಲಾಗಿದ್ದು, ಉಳಿದ ಎರಡು ಪ್ರಕರಣಗಳನ್ನು ಯಾಕೆ ಎನ್ಐಎಗೆ ನೀಡಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಕೊಲೆ ಪ್ರಕರಣದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ರಾಜಕೀಯ ದೃಷ್ಟಿಯಿಂದ ಕೊಲೆ ಪ್ರಕರಣವನ್ನು ನೋಡುತ್ತಿದೆ ಹೊರತು ನಿಜವಾದ ನ್ಯಾಯ ಒದಗಿಸಲು ಕೇಂದ್ರ ಸರಕಾರ ಮುಂದಾಗುತ್ತಿಲ್ಲ ಎಂದು ಹರೀಶ್ ಕುಮಾರ್ ಅಪಾದಿಸಿದ್ದಾರೆ.
ಕೊಲೆಯಾದವರಿಗೆ ನಿಜವಾದ ನ್ಯಾಯ ದೊರಕಿಸಬೇಕಾದರೆ ಕೇಂದ್ರ ಸರಕಾರ ಈ ತಾರತಮ್ಯದ ನೀತಿಯನ್ನು ಬಿಟ್ಟು ಪ್ರಾಮಾಣಿಕವಾದ ತನಿಖೆಗೆ ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.
ಕೇವಲ ಒಂದು ಪ್ರಕರಣವನ್ನು ನೀಡುವ ಮೂಲಕ ಕೇಂದ್ರ ಸರಕಾರ ಜನರಲ್ಲಿ ಸಂಶಯ ಹಾಗೂ ತಪ್ಪು ಅಭಿಪ್ರಾಯವನ್ನು ಮೂಡಿಸುವ ಮೂಲಕ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಹರೀಶ್ ಕುಮಾರ್ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.