ಕ್ಯಾಂಪ್ಕೋದಿಂದ ಪ್ರತಿಶತ 0.48 ಮಾರುಕಟ್ಟೆ ಶುಲ್ಕ: ಸಚಿವ ಶಿವಾನಂದ ಪಾಟೀಲ ಭರವಸೆ

ಕ್ಯಾಂಪ್ಕೋದಿಂದ ಪ್ರತಿಶತ 0.48 ಮಾರುಕಟ್ಟೆ ಶುಲ್ಕ: ಸಚಿವ ಶಿವಾನಂದ ಪಾಟೀಲ ಭರವಸೆ


ಮಂಗಳೂರು: ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ ಪ್ರತಿಶತ 0.48 ರಷ್ಟು ಆಕರಣೆ ಮಾಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಗುರುವಾರ ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್‌ಕುಮಾರ್ ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿ, ಸಂಸ್ಥೆಯ ಚಟುವಟಿಕೆಗಳು, ವಾರ್ಷೀಕ ವಹಿವಾಟು ಹಾಗೂ ಯಾವ ಯಾವ ರಾಜ್ಯಗಳ ಕಾರ್ಯವ್ಯಾಪ್ತಿ ಹೊಂದಿದೆ ಎಂಬ ಮಾಹಿತಿ ಪಡೆದ ಸಚಿವರು, ಈ ಹಿಂದಿನಂತೆ ಶೇ.0.48ರಷ್ಟು ಮಾರುಕಟ್ಟೆ ಶುಲ್ಕ ಆಕರಣೆ ಮಾಡುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಂಪ್ಕೋ ಬಹುರಾಜ್ಯ ಸಹಕಾರ ಸಂಘಗಳ ಅಧಿನಿಯಮದಡಿ ಬದಲಾವಣೆಯಾಗಿದ್ದರ ಬಗ್ಗೆ ಮಾಹಿತಿ ಪಡೆದ ಸಚಿವರು, ಕ್ಯಾಂಪ್ಕೋ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಶುಲ್ಕವನ್ನು ಈ ಮೊದಲಿನಂತೆ ಆಕರಣೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕ್ಯಾಂಪ್ಕೋ ಬಹುರಾಜ್ಯ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿ ಬರುವ ಕಾರಣ ಮೇ ತಿಂಗಳಲ್ಲಿ ಮಾರುಕಟ್ಟೆ ಶುಲ್ಕವನ್ನು ಪ್ರತಿಶತ 0.48ರಿಂದ 0.60ಕ್ಕೆ ಹೆಚ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸಚಿವರನ್ನು ಭೇಟಿ ಮಾಡಿದ ಅಧ್ಯಕ್ಷರ ನಿಯೋಗ ಈ ಮೊದಲಿನಂತೆ ಪ್ರತಿಶತ 0.48 ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಬೇಕು ಎಂದು ಮನವಿ ಮಾಡಿತು.

ಕ್ಯಾಂಪ್ಕೋ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿಯೇ ಆರಂಭವಾಗಿದ್ದು, ಕ್ರಮೇಣ ಕೇರಳ ಸೇರಿದಂತೆ ಇತರ ರಾಜ್ಯಗಳಿಗೂ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಣೆ ಮಾಡಿದೆ. ಬಹುರಾಜ್ಯಗಳಲ್ಲಿ ಮಾರಾಟ ಘಟಕ ತೆರೆದು ರಾಷ್ಟ್ರವ್ಯಾಪಿ ವಾಣಿಜ್ಯ ಚಟುವಟಿಕೆ ಹೊಂದಿದ್ದರೂ ಮಂಗಳೂರಿನಲ್ಲಿಯೇ ನೋಂದಾಯಿತ ಕೇಂದ್ರ ಕಚೇರಿ ಹೊಂದಿದೆ. ಎಪಿಎಂಸಿಗೆ ವಾರ್ಷೀಕ ಸುಮಾರು ಒಂಭತ್ತು ಕೋಟಿ ರೂ. ಮಾರುಕಟ್ಟೆ ಶುಲ್ಕ ಪಾವತಿ ಮಾಡುತ್ತಿದೆ ಎಂದು ಅಧ್ಯಕ್ಷ ಕಿಶೋರ್‌ಕುಮಾರ್ ಸಚಿವರಿಗೆ ವಿವರಿಸಿದರು.

ರಾಜ್ಯದಲ್ಲಿ ಹಲವಾರು ಶಾಖೆ ತೆರೆದು ಉತ್ತಮ ಸಂಪರ್ಕ ಜಾಲ ಹೊಂದಿರುವ ಕ್ಯಾಂಪ್ಕೋ, ರಾಜ್ಯ ಸರ್ಕಾರದ ನೋಡಲ್ ಏಜನ್ಸಿಯಾಗಿ ಕಾರ್ಯ ನಿರ್ವಹಿಸಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಅನುಷ್ಠಾನಗೊಳಿಸಿ ಸರ್ಕಾರದ ಯೋಜನೆಗಳನ್ನು ರೈತ ಕುಟುಂಬಗಳಿಗೆ ತಲುಪಿಸುವ ಕಾರ್ಯನಿರ್ವಹಿಸಿದೆ. 2002, 2004 ಹಾಗೂ 2009 ರಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಗೆ ನೋಡಲ್ ಏಜನ್ಸಿಯಾಗಿ ನೇಮಕ ಮಾಡಿದ್ದು, ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದೆ ಎಂದು ತಿಳಿಸಿದರು.

ಸಂಸ್ಥೆ 1,48,381 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಕರ್ನಾಟಕ ರಾಜ್ಯ ಪ್ರತಿಶತ 85ರಷ್ಟು ಸದಸ್ಯರನ್ನೊಳಗೊಂಡಿದೆ. ರಾಜ್ಯದಲ್ಲಿ ಒಟ್ಟು 66 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚಿನ ಶಾಖೆಗಳು ಮತ್ತು ಖರೀದಿ ಕೇಂದ್ರಗಳು ಎಪಿಎಂಸಿ ಪ್ರಾಂಗಣ ಅಥವಾ ಸಮಿತಿ ಅಧಿಸೂಚಿತ ವಲಯದಲ್ಲೇ ಕಾರ್ಯನಿರ್ವಹಿಸುತ್ತಿವೆ. ಹಾಗೂ ನಿಮಯಗಳ ಪ್ರಕಾರ ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ನಿಗದಿತ ಮಾರುಕಟ್ಟೆ ಶುಲ್ಕವನ್ನು ಪಾವತಿ ಮಾಡುತ್ತಿವೆ.

ಸಂಸ್ಥೆಯ ಚಟುವಟಿಕೆಗಳನ್ನು ಗಮನಿಸಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮದ ಪ್ರಕಾರ ಮಾರುಕಟ್ಟೆ ಶುಲ್ಕವನ್ನು ಪ್ರತಿಶತ 0.48ರಷ್ಟು ವಿಧಿಸಬೇಕು ಎಂದು ಮನವಿ ಮಾಡಿದರು. 

ಕುಂದಾಪುರ ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಡಾ. ಸತ್ಯನಾರಾಯಣ, ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article