ಜು.20 ರಿಂದ ಕುಪ್ಮಾ ಸದಸ್ಯತ್ವ ಅಭಿಯಾನ: ಡಾ. ಎಂ. ಮೋಹನ ಆಳ್ವ
ಮಂಗಳೂರು: ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ವತಿಯಿಂದ ಜುಲೈ 20ರಿಂದ ಸೆಪ್ಟೆಂಬರ್ 12ರವರೆಗೆ ರಾಜ್ಯದಲ್ಲಿ ಜಿಲ್ಲಾವಾರು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ರಾಜ್ಯವ್ಯಾಪಿ ಕುಪ್ಮಾ ಜಿಲ್ಲಾ ಸಮಿತಿಗಳನ್ನು ರಚಿಸುವ ಮೂಲಕ ರಾಜ್ಯದ ಎಲ್ಲಾ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳನ್ನು ಕುಪ್ಮಾ ಸಂಘಟನೆಗೆ ಸೇರ್ಪಡೆಗೊಳಿಸುತ್ತಿದ್ದೇವೆ ಎಂದು ಕುಪ್ಮಾ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು.
ರಾಜ್ಯದಲ್ಲಿ 3500ಕ್ಕೂ ಅಧಿಕ ಅನುದಾನ ರಹಿತ ಪಪೂ ಕಾಲೇಜುಗಳಿವೆ. ಕಳೆದ ಮೂರು ವರ್ಷಗಳಿಂದ ಕುಪ್ಮಾ ನಿರಂತರವಾಗಿ ಖಾಸಗಿ ಅನುದಾನರಹಿತ ಕಾಲೇಜುಗಳ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿದೆ ಹಾಗೂ ಕೆಲವು ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನೂ ಕೂಡ ಕೆಲವು ಜ್ವಲಂತ ಸಮಸ್ಯೆಗಳು ಇದ್ದು, ಅದನ್ನು ಬಗೆಹರಿಸಲು ರಾಜ್ಯವ್ಯಾಪಿ ಕುಪ್ಮಾ ಸಂಸ್ಥೆಯನ್ನು ವಿಸ್ತರಿಸುವ ಮೂಲಕ ಸಂಘಟನೆ ಗಟ್ಟಿಮಾಡಬೇಕೆಂದು ಸಮಿತಿ ನಿರ್ಧರಿಸಿದೆ. ಸಂಸ್ಥೆಯ ನಿಯಮಾವಳಿ ಪ್ರಕಾರ 10,000 ರೂ. ಪಾವತಿಸಿ ಪ್ರತಿ ಸಂಸ್ಥೆಗಳು ಸದಸ್ಯತ್ವವನ್ನು ಪಡೆಯುವುದರ ಮೂಲಕ ಕುಪ್ಮಾ ಸಂಘಟನೆಯನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕುಪ್ಮಾ ಕಾರ್ಯದರ್ಶಿ ಪ್ರೊ. ನರೇಂದ್ರ ನಾಯಕ್ ಮಾತನಾಡಿ, ಸೆಪ್ಟೆಂಬರ್ 12 ಮತ್ತು 13ರಂದು ಕುಪ್ಮಾದ ರಾಜ್ಯ ಮಟ್ಟದ ಸಮಾವೇಶವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸದಸ್ಯತ್ವವನ್ನು ಪಡೆದಿರುವ ಎಲ್ಲಾ ಆಡಳಿತಮಂಡಳಿಗಳ ಪದಾಽಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದ ಪದವಿ ಪೂರ್ವ ಕಾಲೇಜುಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ರಾಜ್ಯ ಕಾರ್ಯಕಾರಿಣಿ ಸಮಿತಿಯ ಗೌರವ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಶೆಣೈ, ಪ್ರೊ. ಎಂ.ಬಿ.ಪುರಾಣಿಕ್, ಡಾ. ಕೆ.ಸಿ.ನಾಯ್ಕ್, ಅಧ್ಯಕ್ಷರಾಗಿ ಡಾ.ಎಂ ಮೋಹನ್ ಆಳ್ವ, ಕಾರ್ಯದರ್ಶಿಯಾಗಿ ಪ್ರೊ.ನರೇಂದ್ರ ಎಲ್ ನಾಯಕ್ ಸೇರಿದಂತೆ ೧೬ ಮಂದಿ ಸದಸ್ಯರುಗಳನ್ನೊಳಗೊಂಡ ಸಂಘವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ಬಗ್ಗೆ ಚರ್ಚಿಸಿ ಕೈಗೊಂಡ ಕ್ರಮವಾಗಿ ಈಗಾಗಲೇ ಜಿಲ್ಲಾವಾರು ಸಂಯೋಜಕರನ್ನು ನೇಮಿಸಲಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳನ್ನೊಳಗೊಂಡ ಜಿಲ್ಲಾ ಸಮಿತಿ ಪದಗ್ರಹಣಗೊಂಡು ಉತ್ತಮವಾಗಿ ಸಂಘವನ್ನು ಸಂಘಟಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಕುಪ್ಮಾ ಸರಕಾರದ ಗಮನಕ್ಕೆ ತಂದಿದೆ. ಪ್ರತಿವರ್ಷ ನೋಂದಣಿ ನವೀಕರಣ, ದ್ವಿತೀಯ ಪಿಯುಸಿಯಲ್ಲಿ ಮೂರು ಪರೀಕ್ಷೆಯ ಅಗತ್ಯತೆ ಇದೆಯೇ ಎಂಬ ಬಗ್ಗೆ ಚರ್ಚೆ ನಡೆಸಿ ಸರಕಾರದ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದರು.
ಕುಪ್ಮಾ ಗೌರವಾಧ್ಯಕ್ಷರಾದ ಡಾ. ಕೆ.ಸಿ. ನಾಯ್ಕ್, ರಾಧಾಕೃಷ್ಣ ಶೆಣೈ, ಪದಾಽಕಾರಿಗಳಾದ ಸುಧಾಕರ ಶೆಟ್ಟಿ, ಯುವರಾಜ ಜೈನ್, ಮಂಜುನಾಥ ರೇವಣ್ಕರ್ ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳಲ್ಲಿ ಕುಪ್ಮಾ ಸಮಿತಿಯು ಕಾರ್ಯನಿರ್ವಹಿಸಿದ ಕಾರ್ಯಕ್ರಮಗಳನ್ನು ‘ಕುಪ್ಮಾ’ ಕಿರು ಹೊತ್ತಗೆ ಮೂಲಕ ದಾಖಲಿಸಲಾಗಿದ್ದು, ಪುಸ್ತಕವನ್ನು ಈ ವೇಳೆ ಡಾ.ಎಂ. ಮೋಹನ ಆಳ್ವ ಬಿಡುಗಡೆಗೊಳಿಸಿದರು. ಈ ಕಿರು ಹೊತ್ತಗೆಯಲ್ಲಿ ಕುಪ್ಮಾ ಕಾನೂನಾತ್ಮಕವಾಗಿ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ನಿಯಮಾವಳಿಗಳಿವೆ. ಇದನ್ನು ಪ್ರತಿ ಜಿಲ್ಲೆಯ ಕುಪ್ಮಾದ ಘಟಕಗಳು ಪಾಲಿಸಬೇಕಾಗುತ್ತದೆ. ಈ ನಿಯಮಾವಳಿ ಪ್ರಕಾರ ಜಿಲ್ಲಾವಾರು ಚುನಾವಣೆ ನಡೆಸಿ ಪದಾಽಕಾರಿಗಳ ಆಯ್ಕೆ ಹಾಗೂ ಸಭೆಯನ್ನು ನಡೆಸಿ ತೀರ್ಮಾನ ಕೈಗೊಳ್ಳುವುದೇ ಈ ಕಿರುಹೊತ್ತಗೆಯ ಉದ್ದೇಶವಾಗಿದೆ.