
ಪರಿಸರಪ್ರಿಯ, ಸರಳ ಮರಳು ನೀತಿ ಜ್ಯಾರಿಗೆ ಎಐಟಿಯುಸಿ ಒತ್ತಾಯ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾದಿಂದ ಸಂಘರ್ಷಗಳು ನಡೆಯುತ್ತಿದ್ದು, ಹಲವಾರು ಜೀವಗಳು ಬಲಿಯಾಗುತ್ತಿವೆ. ಮರಳು/ ಗಣಿ ಮಾಫಿಯಾದವರು ಕೆಲವೊಂದು ರಾಜಕೀಯ ವ್ಯಕ್ತಿಗಳ ಬೆಂಬಲದಲ್ಲಿ ಕಾರ್ಯಾಚರಿಸುತ್ತಿದ್ದು ಇದಕ್ಕೆ ಕೆಲವೊಂದು ಭ್ರಷ್ಟ ಅಧಿಕಾರಿಗಳೂ ಕೈಜೊಡಿಸುತ್ತಿದ್ದಾರೆ. ಇದರ ನಿವಾರಣೆಗಾಗಿ ಮರಳು/ಗಣಿ ಮಾಫಿಯಾದ ಮೇಲೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪ್ರಸ್ತುತ ನಿರ್ಮಾಣ ವಲಯಕ್ಕೆ ತಡೆಯುಂಟಾಗಿದ್ದು ಗುತ್ತಿಗೆದಾರರು, ಕಾರ್ಮಿಕರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ನಿರ್ಮಾಣ ಕಾರ್ಯಗಳಿಗೆ ತೊಡಕಾಗಿದೆ.
ಆದುದರಿಂದ, ಸಕ್ರಮ ಮರಳು/ಗಣಿಗಾರಿಕೆಗೆ ಸರಕಾರ ನೀಡುವ ಅನುಮತಿಗಳನ್ನು ಹೆಚ್ಚಿಸಬೇಕು, ಕಾನೂನುಬದ್ಧ ದರ ನಿಗದಿಗೊಳಿಸಿ ಬಳಕೆದಾರರಿಗೇ ನೇರವಾಗಿ ರಿಯಾಯಿತಿ ದರದಲ್ಲಿ ಲಭ್ಯವಾಗುವಂತೆ ಕ್ರಮವಹಿಸಬೇಕು, ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಏರ್ಪಡಿಸಿ ಯಾವುದೇ ರಾಜಕೀಯ ಪ್ರೇರಣೆಗೆ ಅವಕಾಶವಿರದಂತೆ ನೋಡಿಕೊಳ್ಳಬೇಕು, ಸೇತುವೆ, ಕೃಷಿ ಭೂಮಿ, ಕಟ್ಟಡ ಇರುವ ಕಡೆ ಮರಳುಗಾರಿಕೆಗೆ ಅವಕಾಶ ನೀಡಬಾರದು, ಮರಳುಗಾರಿಕೆ ಮತ್ತು ಗಣಿಗಾರಿಕೆಯನ್ನು ಪರಿಸರಪರವಾಗಿ ಕಾನೂನು ಬದ್ಧಗೊಳಿಸಿ, ನಿಷ್ಠಾವಂತ ಸರಕಾರಿ ಅಧಿಕಾರ ನೇರ ನಿಯಂತ್ರಣದಲ್ಲೇ ಬಳಕೆದಾರರಿಗೆ ಲಭಿಸುವಂತೆ ಕ್ರಮವಹಿಸಿ ನಿರ್ಮಾಣ ವಲಯದ ಕಾರ್ಮಿಕರಿಗೆ ಕೆಲಸ ಸಿಗುವಂತೆ ನ್ಯಾಯ ದೊರಕಿಸಿಕೊಡಬೇಕಾಗಿ ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್. ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಸಹಾಯಕ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಕಟ್ಟಡ ಕಾರ್ಮಿಕರ ಸಂಘಟನೆಯ ನಾಯಕರುಗಳಾದ ಕರುಣಾಕರ್ ಮಾರಿಪಲ್ಲ, ರಾಮ ಮುಗೇರ ವಿಟ್ಲ ಉಪಸ್ಥಿತರಿದ್ದರು.