
ಕುಂಬಳೆಯಿಂದ ನಾಪತ್ತೆಯಾದ ಜೋಡಿ ಉಡುಪಿಯಲ್ಲಿ ಪತ್ತೆ
ಉಡುಪಿ: ಕೇರಳದ ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳನ್ನು ಇಲ್ಲಿನ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ಮಂಗಳವಾರ ನಡೆದಿದೆ.
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಮನೆಯಲ್ಲಿ ವಿರೋದ ವ್ಯಕ್ತವಾದರಿಂದ ಮನೆ ಮಂದಿಗೆ ಸೂಚನೆ ನೀಡದೆ ನಾಪತ್ತೆಯಾಗಿದ್ದರು. ಮನೆ ಮಂದಿ ಹುಡುಕಾಟ ನಡೆಸಿದರೂ ಯುವಕ-ಯುವತಿ ಪತ್ತೆಯಾಗದಿರುವುದರಿಂದ, ಕುಂಬಳೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಆರ್ಪಿಎಫ್ ಸುನಿಲ್ ಕೆ.ಸಿ. ಅವರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ-ಯುವತಿಯ ವರ್ತನೆಯಿಂದ ಅನುಮಾನಗೊಂಡು ವಿಚಾರಿಸಿದಾಗ ಕುಂಬಳೆಯಿಂದ ನಾಪತ್ತೆಯಾಗಿದ್ದ ವಿಚಾರ ತಿಳಿದುಬಂದಿದೆ. ಬಳಿಕ ಅವರನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಇಳಿಸಿ, ಇನ್ಸ್ಪೆಕ್ಟರ್ ಮಧುಸೂದನ್ ಅವರಿಗೆ ಹಸ್ತಾಂತರಿಸಿದರು. ಪ್ರೇಮಿಗಳ ವಯಸ್ಸಿನಲ್ಲಿ ಅನುಮಾನಪಟ್ಟು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿಯ ಪ್ರಕಾಶ್ ಮತ್ತು ಲಕ್ಷ್ಮೀಕಾಂತ್ ಅವರು, ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವು ಪಡೆದು, ಪ್ರೇಮಿಗಳನ್ನು ಉಡುಪಿ ನಗರ ಮಹಿಳಾ ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸಿದರು. ಅಲ್ಲಿ ವಿಚಾರಿಸಲ್ಪಟ್ಟಾಗ ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳೆಂದು ದೃಢಪಟ್ಟಿದ್ದು, ಅವರನ್ನು ಕುಂಬಳೆಯ ಪೊಲೀಸರಿಗೆ ಒಪ್ಪಿಸಲಾಯಿತು.