
ಪಿಲಿಕುಳದಲ್ಲಿ ಕ್ಷುದ್ರಗ್ರಹ ದಿನಾಚರಣೆ
ಮಂಗಳೂರು: ಅಂತರ್ರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆ ಸೋಮವಾರ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಉಪನ್ಯಾಸ ನೀಡಿ, ಕ್ಷುದ್ರಗ್ರಹ ದಿನದ ಇತಿಹಾಸ, ಸೌರವ್ಯೆಹ, ಕ್ಷುದ್ರಗ್ರಹಗಳ ರಚನೆ, ಕ್ಷುದ್ರಗ್ರಹಗಳ ಮಹತ್ವ ಮತ್ತು ಅವುಗಳಿಂದ ಆಗುವ ಅಪಾಯಗಳು, ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಉಪಗ್ರಹಾ ಧಾರಿತ ಪ್ರಯೋಗಗಳು ಇತ್ಯಾದಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಸೈಬೀರಿಯಾದ ತುಂಗುಸ್ಕಾ ಎಂಬಲ್ಲಿ 1908ರ ಜೂನ್ 30ರಂದು ಕ್ಷುದ್ರಗ್ರಹವೊಂದು ಭೂಮಿಯೆಡೆಗೆ ಉರಿದು ಬೀಳುತ್ತಾ ಅಪ್ಪಳಿಸಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು.
ಇಂತಹ ಸಂಭವನೀಯ ಘಟನೆಗಳ ಬಗ್ಗೆ ಅರಿವು ಮೂಡಿಸಲು ವಿಶ್ವ ಸಂಸ್ಥೆಯು ಜೂನ್ 30ನ್ನು ‘ಅಂತರಾಷ್ಟ್ರೀಯ ಕ್ಷುದ್ರಗ್ರಹ ದಿನ’ ಎಂದು ಅನುಮೋದಿಸಿ, ಕ್ಷುದ್ರಗ್ರಹಗಳಿಂದಾಗಬಹುದಾದ ಅಪಾಯಗಳ ಬಗ್ಗೆ ಜಾಗತಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಕರೆ ನೀಡಿದೆ ಎಂದು ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ತಿಳಿಸಿದರು.
ಪ್ರಾತ್ಯಕ್ಷಿಕೆಗಳು, ತಾರಾಲಯದಲ್ಲಿ ಲೈವ್ ಅಸ್ಟ್ರೋನಾಮಿ ಶೋ ಜತೆಗೆ ತಾರಾಲಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳು ಕೇಂದ್ರದ ಗ್ಯಾಲರಿಗಳ ಮಾದರಿಗಳ ವೀಕ್ಷಣೆ ಮಾಡಿ ದರು. ಕೊನೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸುಮಾರು 150 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.
ಕೇಂದ್ರದ ಕ್ಯುರೇಟರ್ ಜಗನ್ನಾಥ ಕಾರ್ಯಕ್ರಮ ನಿರ್ವಹಿಸಿದರು, ಕೇಂದ್ರದ ಸಿಬ್ಬಂದಿ ಹೃತಿಕ್, ಅಂಬಿಕಾ, ಸಹನಾ, ರಶ್ಮಿ, ವಿರೂಪಾಕ್ಷಯ್ಯ ವಿ, ವಿಕ್ಟರ್ ವಿಮಲಾನಾದನ್ ಹಾಗೂ ವಂದನಾ ಪ್ರಮೋದ್ ಕುಮಾರ್ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು.