
ಕಾಂಗ್ರೆಸ್ ಬೆಂಬಲಿತರ ಪಾಲಾದ ಶಿರ್ತಾಡಿ ಸಹಕಾರಿ ಸಂಘ
ಮೂಡುಬಿದಿರೆ: ಭಾನುವಾರ ಶಿರ್ತಾಡಿ ಸೇವಾ ಸಹಕಾರಿ ಸಂಘದ 11 ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಿ ತಮ್ಮ ಪಾಲಾಗಿಸಿದ್ದಾರೆ.
ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ನೂತನವಾಗಿ ಅಸ್ತಿತ್ವಕ್ಕೆ ಬಂದ ಶಿರ್ತಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ಭಾನುವಾರ ಪ್ರಥಮ ಚುನಾವಣೆ ನಡೆಯಿತು. ಕಲ್ಲಬೆಟ್ಟು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ನೇತ್ರತ್ವದ ಕಾಂಗ್ರೆಸ್ ಬೆಂಬಲಿತ ತಂಡ ಎಲ್ಲಾ ಸ್ಥಾನಗಳನನ್ನು ಗೆದ್ದುಕೊಂಡು ದಾಖಲೆ ನಿರ್ಮಿಸಿತು.
ಚುನಾವಣೆ ಮೊದಲು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ರಾಜಿ ಸೂತ್ರದ ಮಾತುಕತೆ ನಡೆದಿತ್ತು. ಇದರ ಪ್ರಕಾರ ಎರಡೂ ಕಡೆಯವರು ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಯ ಮೂಲಕ ತಲಾ 6-6 ಸ್ಥಾನಗಳನ್ನು ಹಂಚಿಕೊಳ್ಳುವುದೆಂದು ನಿರ್ಧರಿಸಲಾಗಿತ್ತೆನ್ನಲಾಗಿದೆ. ಆದರೆ ಇದಕ್ಕೆ ಎರಡೂ ಬಣಗಳ ಕೆಲವರಿಂದ ವಿರೋಧ ವ್ಯಕ್ತವಾದ್ದರಿಂದ ಕೊನೆಗೆ ಎರಡೂ ಕಡೆಯವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆನ್ನಲಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರವೀಣ್ ಕುಮಾರ್, ಚಿಂತನ್ ಲೋಬೊ, ತಾರನಾಥ ಶೆಟ್ಟಿ, ಕೆ.ಹೆಚ್.ಲಕ್ಷ್ಮಣ, ಅಬ್ದುಲ್ ಖಾದರ್, ಸನತ್ ಶೆಟ್ಟಿ, ಆಗ್ನೇಸ್ ಡಿಸೋಜಾ, ಸುಗಂಧಿ, ರಾಘವ ಸುವರ್ಣ, ಸದಾನಂದ ಸುವರ್ಣ ಹಾಗೂ ಉಮೇಶ್ ನಾಯ್ಕ್ ಜಯಗಳಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುದೀಪ್ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಶಿವಲಿಂಗಯ್ಯ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಮಾಜಿ ಸಚಿವ ಅಭಯಚಂದ್ರ ಜೈನ್ ಸ್ಥಳಕ್ಕೆ ಭೇಟಿ ನೀಡಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.